ಬೇಲೂರು ನಗರದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಬಯಲು ರಂಗಮಂದಿರ ಆವರಣದಲ್ಲಿ ಬೇಲೂರು ತಾಲೂಕು ಭಗೀರಥ ಮತ್ತು ಉಪ್ಪಾರ ಸಂಘದ ವತಿಯಿಂದ ಮಹರ್ಷಿ ಭಗೀರಥ ಜಯಂತೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾಜಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಚಿನ್ಮಾಲಾದ್ರಿ ಶಿಲಾಪುರಿ ಸೂರ್ಯ ಸಿಂಹಾಸನ ಭಗೀರಥ ಗುರುಪೀಠ ಬ್ರಹ್ಮವಿದ್ಯಾನಗರ ಮದುರೆ ಹೊಸದುರ್ಗದ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ, ಮಹರ್ಷಿ ಭಗೀರಥರು ಈ ಭೂಮಿಗೆ ಗಂಗೆಯನ್ನು ತಂದ ಮಹಾನ್ ಪುರುಷರಾಗಿದ್ದು, ಮನುಕುಲ ಹಾಗೂ ಪ್ರಾಣಿ ಪಕ್ಷಿಗಳ ಉಳಿವಿಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
ಭಗೀರಥ ಮಹರ್ಷಿಗಳು ತಪಸ್ಸಿನ ಮೂಲಕ ಪರಶಿವನನ್ನು ಮೆಚ್ಚಿಸಿ ಗಂಗೆಯನ್ನು ಭೂಮಿಗೆ ತಂದ ಕಾರಣ ಇಂದು ಜೀವಜಗತ್ತು ಉಳಿದಿದೆ. ಉಪ್ಪಾರ ಜನಾಂಗವು ಸಹ ಸಮಾಜಕ್ಕೆ ಉಪ್ಪನ್ನು ನೀಡುವ ಮೂಲಕ ಮಹತ್ವದ ಕೊಡುಗೆ ನೀಡಿದೆ. ಇಂದಿನ ಯುವಪೀಳಿಗೆ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕಿದ್ದು, ಪೋಷಕರು ಮಕ್ಕಳಿಗೆ ಜ್ಞಾನ ಜೊತೆಗೆ ಮೌಲ್ಯ ಶಿಕ್ಷಣವನ್ನೂ ನೀಡಬೇಕು ಎಂದು ತಿಳಿಸಿದರು.ಜೂನ್ 22ರಂದು ಚಾಮರಾಜನಗರದಲ್ಲಿ ರಾಜ್ಯಮಟ್ಟದ ಮಹರ್ಷಿ ಭಗೀರಥ ಮತ್ತು ಉಪ್ಪಾರ ಜನಾಂಗದ ಜಯಂತೋತ್ಸವ ಹಾಗೂ ಸಮಾವೇಶ ನಡೆಯಲಿದ್ದು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಜನಾಂಗದ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು. ಹಾಸನ ಜಿಲ್ಲೆ ಹಾಗೂ ಬೇಲೂರು ತಾಲೂಕಿನ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್, ಮಹರ್ಷಿ ಭಗೀರಥರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ, ಇಡೀ ಮನುಕುಲದ ಆಸ್ತಿಯಾಗಿದ್ದಾರೆ ಎಂದರು. ನೀರಿನ ಮಹತ್ವವನ್ನು ಸಾರಿದ ಭಗೀರಥರ ಸಾಧನೆ ಇಂದಿನ ಯುವಜನತೆಗೆ ತಿಳಿಯಬೇಕಿದೆ. ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ 30 ಕೋಟಿ ವೆಚ್ಚದ ಚೆಕ್ ಡ್ಯಾಂಗಳಿಗೆ “ಮಹರ್ಷಿ ಭಗೀರಥ’’ ಹೆಸರಿಡಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರು ಹಾಗೂ ಚಾಮರಾಜನಗರ ಉಪ್ಪಾರ ಸಂಘದ ಮುಖಂಡ ಪುಟ್ಟ ರಂಗಶೆಟ್ಟಿ, ಹಿಂದೆ ಉಪ್ಪಿನ ವ್ಯಾಪಾರದಿಂದ ಉಪ್ಪಾರ ಜನಾಂಗ ಶ್ರೀಮಂತವಾಗಿತ್ತು. ಬಳಿಕ ಸಮುದ್ರದ ಉಪ್ಪು ಪರಿಚಯವಾದ ನಂತರ ಆರ್ಥಿಕ ಹಿನ್ನಡೆ ಎದುರಿಸಬೇಕಾಯಿತು. ಇಂದು ಜನಾಂಗದ ಅನೇಕರು ಕೂಲಿ ಕೆಲಸ, ಗಾರೆ ಕೆಲಸ ಹಾಗೂ ಮೀನುಗಾರಿಕೆ ಸೇರಿದಂತೆ ವಿವಿಧ ವೃತ್ತಿಗಳ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಉಪ್ಪಾರ ಜನಾಂಗಕ್ಕೆ ವಿಶೇಷ ಅನುದಾನ ನೀಡಬೇಕು ಹಾಗೂ ಮಕ್ಕಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲಕ್ಷ್ಮಣ್ ಉಪ್ಪಾರ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಭಗೀರಥ ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಸುರೇಶ್, ಕಾಂಗ್ರೆಸ್ ಮುಖಂಡ ಗ್ರಾನೆಟ್ ರಾಜಶೇಖರ್, ಎಚ್ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜ್, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಸಂಸ್ಕಾರದ ಅವಶ್ಯಕತೆ ಇದೆ’’ : ಪರಮಪೂಜ್ಯ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ



