ದಾವಣಗೆರೆ: ಇಂದು ನಮ್ಮ ಇಡೀ ವಚನ ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಕೈಗೆಟುಕುವಂತೆ ಮಾಡುವಲ್ಲಿ ಡಾ.ಫ.ಗು.ಹಳಿಕಟ್ಟಿಯವರ ಪಾತ್ರ ಹಿರಿದಾದುದು. ಅವರು ಇಲ್ಲದೇ ಹೋಗಿದ್ದರೆ ಇಂತಹ ಶ್ರೇಷ್ಠ ವಚನ ಸಂಪತ್ತು ನಮಗೆ ಸಿಗುತ್ತಿರಲಿಲ್ಲ” ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಡಾ.ಫ.ಗು.ಹಳಿಕಟ್ಟಿಯವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಫ.ಗು.ಹಳಿಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ನಾವು ಸಮಾಜದಲ್ಲಿ ಅನೇಕ ಗಣ್ಯಮಾನ್ಯರನ್ನು ಹಾಗೂ ವಚನಕಾರರನ್ನು ಸ್ಮರಿಸುತ್ತೇವೆ. ಆದರೆ, ಎಲ್ಲ ವಚನಕಾರರನ್ನು ಸಮಾನವಾಗಿ ಗೌರವಿಸಿ, ಸಮಾನತೆಯಿಂದ ಸ್ಮರಿಸುವಂತಹ ವಿಶಾಲ ಮನೋಭಾವವನ್ನು ನಮಗೆ ಕಲಿಸಿಕೊಟ್ಟವರು ಡಾ.ಫ.ಗು.ಹಳಿಕಟ್ಟಿಯವರು ಎಂದು ಅವರು ಶ್ಲಾಘಿಸಿದರು.ಸುಮತಿ ಜಯಪ್ಪ ಅವರು ಉಪನ್ಯಾಸಿ ನೀಡಿ, ಕನ್ನಡ ವಚನ ಸಾಹಿತ್ಯವನ್ನು ಕನ್ನಡಿಗರ ಹೃದಯಕ್ಕೆ ತಲುಪಿಸಿದ ಮಹಾಪುರುಷÀ, ವಚನ ಪಿತಾಮಹ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ (ಫ.ಗು. ಹಳಕಟ್ಟಿ) ಜುಲೈ 2, 1880 ರಂದು ಧಾರವಾಡದಲ್ಲಿ ದಾನಮ್ಮದೇವಿ ಹಾಗೂ ಗುರುಬಸಪ್ಪ ದಂಪತಿಯ ಪುತ್ರರಾಗಿ ಜನಿಸಿದ ಫ.ಗು. ಹಳಕಟ್ಟಿ ಅವರ ಜೀವನದುದ್ದಕ್ಕೂ ಅನಾರೋಗ್ಯ, ಕಡು ಬಡತನ ಹಾಗೂ ಕುಟುಂಬದಲ್ಲಿ ಸಂಭವಿಸಿದ ಸಾಲು ಸಾಲು ಸಾವುಗಳು ತೀವ್ರ ಆಘಾತ ನೀಡಿದ್ದವು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದ ಅವರು, ವಚನಗಳ ಸಂರಕ್ಷಣೆ, ಸಂಶೋಧನೆ, ಸಂಪಾದನೆ, ಸಂಗ್ರಹಣೆ ಹಾಗೂ ಪ್ರಕಟಣೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ವಚನಗಳಿಗೆ ಸಂಗೀತ ಅಳವಡಿಸುವುದರ ಜೊತೆಗೆ, ಅವುಗಳನ್ನು ಇಂಗ್ಲಿಷ್ ಭಾಷೆಗೂ ಅನುವಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು
ಧಾರವಾಡದಲ್ಲಿ ಶಿಕ್ಷಣ ಮುಗಿಸಿ, ಮುಂಬೈನಲ್ಲಿ ಎಲ್ಎಲ್ಬಿ ಪೂರೈಸಿದ ಹಳಕಟ್ಟಿಯವರು ಬೆಳಗಾವಿಯಲ್ಲಿ ವಕೀಲ ವೃತ್ತಿ ಆರಂಭಿಸಿ, ನಂತರ ವಿಜಯಪುರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು. 1904ರಲ್ಲಿ ರಬಕವಿಯ ಶಿವಲಿಂಗಪ್ಪ ಮಂಚಾಲೆ ಎಂಬುವವರ ಮನೆಯಲ್ಲಿ ಅಟ್ಟದ ಮೇಲಿದ್ದ ತಿಲಕ ಎಂಬ ತಾಡೋಲೆ ಗ್ರಂಥವನ್ನು ಕಂಡ ಇವರ ಜೀವನದ ದಿಕ್ಕೇ ಬದಲಾಯಿತು. ವಚನಗಳನ್ನು ರಕ್ಷಿಸುವ ಉದ್ದೇಶದಿಂದ ತಮ್ಮ ವಕೀಲ ವೃತ್ತಿಯನ್ನೇ ತ್ಯಜಿಸಿದ ಅವರು, ಒಂದು ಹಳೆಯ ಸೈಕಲ್ ಮತ್ತು ಹಳೆಯ ಟ್ರಂಕ್ ಹಿಡಿದುಕೊಂಡು, ಹಸ್ತಪ್ರತಿಗಳ ಹುಡುಕಾಟಕ್ಕಾಗಿ ಸುಮಾರು 17 ವರ್ಷಗಳ ಕಾಲ ನಿರಂತರವಾಗಿ ನಾಡಿನಾದ್ಯಂತ ಸಂಚರಿಸಿ ವಚನ ಸಾಹಿತ್ಯಕ್ಕೆ ಮರುಜೀವ ನೀಡಿದರು ಎಂದು ತಿಳಿಸಿದರು.
1920ರಲ್ಲಿ ವಿಜಯಪುರದಲ್ಲಿ ತಾವು ಸಂಗ್ರಹಿಸಿದ ಅಪರೂಪದ ಕೃತಿಗಳ ಪ್ರದರ್ಶನ ಏರ್ಪಡಿಸಿದ್ದ ಹಳಕಟ್ಟಿಯವರು, ಅವುಗಳ ಮುದ್ರಣಕ್ಕಾಗಿ ತೀವ್ರ ಹೋರಾಟ ನಡೆಸಬೇಕಾಯಿತು. ಮಂಗಳೂರಿನ ‘ಬಾಸೆಲ್ ಮಿಷನ್ ಪ್ರೆಸ್’ ಮುದ್ರಣಕ್ಕೆ ನಿರಾಕರಿಸಿದಾಗ ಧೃತಿಗೆಡದ ಅವರು, ಬಳಿಕ ಬೆಳಗಾವಿಯಲ್ಲಿ ‘ವಚನ ಶಾಸ್ತ್ರ ಸಾರ ಭಾಗ-1’ ಕೃತಿಯನ್ನು 1924ರಲ್ಲಿ ಯಶಸ್ವಿಯಾಗಿ ಮುದ್ರಿಸಿದರು. ಮುದ್ರಣಾಲಯಗಳಿಂದ ಸೂಕ್ತ ಸಹಕಾರ ಸಿಗದ ಕಾರಣ, ತಮ್ಮ ಜೀವನದ ಏಕೈಕ ಆಧಾರವಾಗಿದ್ದ ಸ್ವಂತ ಮನೆಯನ್ನೇ ಮಾರಿ ವಿಜಯಪುರದಲ್ಲಿ ಹಿತಚಿಂತಕ ಎಂಬ ಮುದ್ರಣಾಲಯವನ್ನು ಸ್ವತಃ ಪ್ರಾರಂಭಿಸಿದರು.ಅಲ್ಲಿಂದ ಮುಂದೆ ಸುಮಾರು 250 ವಚನಕಾರರನ್ನು ನಾಡಿಗೆ ಪರಿಚಯಿಸಿದ ಅವರು, 22,000ಕ್ಕೂ ಹೆಚ್ಚು ವಚನಗಳನ್ನು ಜನಮನಕ್ಕೆ ತಲುಪಿಸಿದರು. ಹರಿಹರನ 42 ರಗಳೆಗಳು ಸೇರಿದಂತೆ ಸ್ವತಃ 175ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಮುದ್ರಿಸಿದರು ಎಂದು ತಿಳಿಸಿದರು.
1926ರಲ್ಲಿ ಶರಣ ತತ್ವಗಳ ಪ್ರಚಾರಕ್ಕಾಗಿ ಶಿವಾನುಭವ ಪತ್ರಿಕೆ ಹಾಗೂ ಕರ್ನಾಟಕ ಏಕೀಕರಣದ ಹೋರಾಟದ ಸಂದರ್ಭದಲ್ಲಿ ನವಕರ್ನಾಟಕ ಪತ್ರಿಕೆಯನ್ನು ತಂದ ಇವರು, ಈ ಪತ್ರಿಕೆಗಳಿಗೆ ಸಂಪಾದಕರಾಗಿ, ಮುದ್ರಕರಾಗಿ ಹಾಗೂ ವಿತರಕರಾಗಿ ಕಾರ್ಯನಿರ್ವಹಿಸಿ ಪತ್ರಿಕಾರಂಗದ ಭೀಷ್ಮ ಎಂದು ಕರೆಸಿಕೊಂಡರು. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅಂದಿನ ಬ್ರಿಟಿಷ್ ಸರ್ಕಾರ ಅವರಿಗೆ ರಾವ್ ಬಹದ್ದೂರ್ ಹಾಗೂ ರಾವ್ ಸಾಹೇಬ್ ಬಿರುದುಗಳನ್ನು ನೀಡಿ ಗೌರವಿಸಿತ್ತು ಎಂದರು.
1928ರಲ್ಲಿ ವಿಜಯಪುರಕ್ಕೆ ಆಗಮಿಸಿದ್ದ ಪ್ರಸಿದ್ಧ ಸಾಹಿತಿ ಬಿ.ಎಂ.ಶ್ರೀಕAಠಯ್ಯನವರು ಹಳಕಟ್ಟಿಯವರನ್ನು ಭೇಟಿಯಾಗಲು ಇಚ್ಛಿಸಿ, “ನಾನು ಐತಿಹಾಸಿಕ ಗೋಳ ಗುಮ್ಮಟಕ್ಕಿಂತಲೂ ಮಿಗಿಲಾದ ವಚನ ಗುಮ್ಮಟವಾಗಿರುವ ಹಳಕಟ್ಟಿಯವರನ್ನು ನೋಡಬೇಕು” ಎಂದು ಹೇಳಿ, ಉಪ್ಪಲಿ ಬುರುಜು ಪಕ್ಕದಲ್ಲಿದ್ದ ಅವರ ಹರಿದು ಹೋದ ಮುರುಕು ಮನೆಗೆ ಭೇಟಿ ನೀಡಿದ್ದರು. ಹರಿದ ಅಂಗಿ ಧರಿಸಿ, ಚಾಪೆಯ ಮೇಲೆ ಕುಳಿತು ತಾಡೋಲೆಗಳನ್ನು ಜೋಡಿಸುತ್ತಿದ್ದ ಹಳಕಟ್ಟಿಯವರ ಸಮರ್ಪಣಾ ಭಾವವನ್ನು ಕಂಡು ಬಿ.ಎಂ.ಶ್ರೀ ಅವರು ಅತ್ಯಂತ ಸಂತಸ ವ್ಯಕ್ತಪಡಿಸಿದ್ದರು ಎಂದರು. ಹಳಕಟ್ಟಿಯವರು ಕೇವಲ ಪುಸ್ತಕದ ಸಾಹಿತಿಯಾಗಿ ಉಳಿಯದೆ ವಕೀಲರಾಗಿ,
ಶಾಸಕರಾಗಿ, ಬ್ಯಾಂಕರ್ ಆಗಿ, ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿ ಮತ್ತು ಪತ್ರಕರ್ತರಾಗಿ ಇಡೀ ಸಮಾಜದ ಉದ್ಧಾರಕ್ಕಾಗಿ ತಮ್ಮ ಇಡೀ ಜೀವನವನ್ನು ಸವೆಸಿದ “ಸಚೇತನ ವಿಶ್ವವಿದ್ಯಾಲಯ”ವಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ , ಡಾ.ಫ.ಗು.ಹಳಿಕಟ್ಟಿಯವರ ಕುರಿತು ಪ್ರಬಂಧ ಸ್ಪರ್ಧೇಯಲ್ಲಿ ವಿಜೇತರಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವಾಮದೇವಪ್ಪ ಬಿ, ರೈತ ಮುಖಂಡರಾದ ಬಲ್ಲೂರು ರವಿಕುಮಾರ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಚನ ಸಾಹಿತ್ಯಕ್ಕೆ ಫ.ಗು.ಹಳಿಕಟ್ಟೆ ಕೊಡುಗೆ ಅನನ್ಯ



