ದಾವಣಗೆರೆ: ಜಿಲ್ಲೆಯಲ್ಲಿ ಕೃತಿಕಾ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಶೇ. 100 ರಷ್ಟು ಬರಗಾಲ ಆವರಿಸುವ ಆತಂಕ ಎದುರಾಗಿದ್ದು, ರೈತರು ಯಾವುದೇ ಜಮೀನನ್ನು ಪಾಳು ಬಿಡದಂತೆ ಕಡ್ಡಾಯವಾಗಿ ಬರ ನಿರೋಧಕ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು, ಕುಡಿಯುವ ನೀರು, ಉದ್ಯೋಗ ಸೃಷ್ಠಿ, ಮೇವು ಸಂಗ್ರಹಣೆಗೆ ಆದ್ಯತೆ ನೀಡಲು ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬರಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರತಿಯೊಬ್ಬ ತಹಶೀಲ್ದಾರರು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ವಿಸ್ತರಣಾಧಿಕಾರಿಗಳು, ಪಿಡಿಒ ಹಾಗೂ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಿರಬೇಕು ಮತ್ತು ಪ್ರತಿ 15 ದಿನಗಳಿಗೊಮ್ಮೆ ರೈತರೊಂದಿಗೆ ಸಭೆ ನಡೆಸಿ ನೀರು , ಮೇವು, ರಸಗೊಬ್ಬರ ಹಾಗೂ ಬೆಳೆಗಳ ಬಗ್ಗೆ ಚರ್ಚಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ಮಳೆ ಮಾಪನ ಕೇಂದ್ರಗಳನ್ನು ವಿ.ಎ ಮತ್ತು ಆರ್.ಐಗಳು ಖುದ್ದಾಗಿ ಪರಿಶೀಲಿಸಬೇಕು. ತಹಶೀಲ್ದಾರರು ಕನಿಷ್ಠ 5 ಕೇಂದ್ರಗಳಿಗಾದರೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು. ರೈತರನ್ನು ಮನವೊಲಿಸಿ ನವಧಾನ್ಯಗಳು, ಊರಲೆ, ನವಣೆ, ಶೇಂಗಾ, ದ್ವಿದಳ ಧಾನ್ಯಗಳು, ಕಡಲೇಕಾಯಿ, ತೊಗರಿ, ಸೋಯಾ ಹಾಗೂ ಸಜ್ಜೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಆಗಸ್ಟ್ ಅಥವಾ ಅಕ್ಟೋಬರ್ ಅಂತ್ಯದೊಳಗೆ ಹುರುಳಿ ಬೆಳೆಯನ್ನು ಬಿತ್ತನೆ ಮಾಡಲು ಅವಕಾಶವಿದ್ದು, ಜಮೀನನ್ನು ಖಾಲಿ ಬಿಡದಂತೆ ನೋಡಿಕೊಳ್ಳಬೇಕು ಮತ್ತು ಅತಿ ಹೆಚ್ಚು ನೀರು ಬೇಡುವ ಬಾಳೆ, ಅಡಿಕೆ ಮುಂತಾದ ಹೊಸ ತೋಟಗಾರಿಕಾ ಬೆಳೆಗಳ ನಾಟಿಯನ್ನು ಮುಂದೂಡುವಂತೆ ರೈತರಲ್ಲಿ ಮನವೊಲಿಸಬೇಕು ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಬೆಳೆ ವಿಮೆ (Crop Insurance) ಪ್ರಕ್ರಿಯೆಯನ್ನು ಅತ್ಯಂತ ಆಕ್ರಮಣಕಾರಿಯಾಗಿ ಜಾರಿಗೊಳಿಸಬೇಕು. ನರೇಗಾ ಹಾಗೂ ಕೃಷಿ ಇಲಾಖೆಯಡಿ ನಿರ್ಮಿಸಲಾದ ಕೃಷಿ ಹೊಂಡ ಮತ್ತು ಚೆಕ್ ಡ್ಯಾಂಗಳಲ್ಲಿನ ಕಳೆ ಹಾಗೂ ಗಿಡಗಂಟೆಗಳನ್ನು ತೆರವುಗೊಳಿಸಿ, ಹೂಳೆತ್ತಿ ಮಳೆನೀರನ್ನು ಹಿಡಿದಿಡಲು ಸಜ್ಜುಗೊಳಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ 63 ವಾರಗಳಿಗಾಗುವಷ್ಟು ಮೇವು ಇದ್ದು ಮೇವು ಕೊರತೆ ಇಲ್ಲ, ಆರ್.ಐ, ವಿ.ಎ ಹಾಗೂ ಪಿಡಿಒಗಳು ಹೆಚ್ಚು ಮೇವಿರುವ ರೈತರನ್ನು ಮನವೊಲಿಸಿ, ಪ್ರತಿ ಕಡೆಯಿಂದ ಒಂದೊAದು ಹೊರೆ ಮೇವನ್ನು ಸಂಗ್ರಹಿಸಿ ಸುರಕ್ಷಿತವಾಗಿ ದಾಸ್ತಾನು ಮಾಡಬೇಕು. ಜಿಲ್ಲೆಯ ಮೇವು ಬೇರೆ ಜಿಲ್ಲೆಗಳಿಗೆ ರಫ್ತಾಗದಂತೆ ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕು ಎಂದರು. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲಿ, ರಸಗೊಬ್ಬರ ದಾಸ್ತಾನನ್ನು ಪ್ರತಿದಿನ ಪರಿಶೀಲಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು, ಹಾಗೂ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ವಾಗದಂತೆ ಕ್ರಮವಹಿಸಬೇಕು ಮತ್ತು ಅಂಗಡಿಗಳ ಪಿಒಎಸ್ ಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದರು. ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗದAತೆ, ಪ್ರತಿ 15 ದಿನಗಳಿಗೊಮ್ಮೆ ಕೊಳವೆಬಾವಿಗಳ ಅಂತರ್ಜಲ ಮಟ್ಟದ ಸ್ಥಿತಿಗತಿಯನ್ನು ಕಡ್ಡಾಯವಾಗಿ ವೈಯಕ್ತಿಕವಾಗಿ ಪರಿಶೀಲಿಸಿ ಜಿಲ್ಲಾಧಿಕಾರಿ ಹಾಗೂ ಸಿಇಒ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು. ಕಾಲುವೆಗಳಿಗೆ ಸದ್ಯ ನೀರು ಬಿಡದಿರುವ ಕಾರಣ, ಬಾಕಿ ಇರುವ ಎಲ್ಲಾ ದುರಸ್ತಿ ಕಾಮಗಾರಿಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಕಚೇರಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಮನುಷ್ಯ ಶಕ್ತಿಯನ್ನು ಬಳಸಿ ಮಾಡುವ ಹೂಳೆತ್ತುವ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಲು ಹಾಗೂ ಯಂತ್ರೋಪಕರಣಗಳ ಅಗತ್ಯವಿರುವ ಕಾಮಗಾರಿಗಳ ವರದಿಯನ್ನು ಪ್ರತ್ಯೇಕವಾಗಿ ಸಲ್ಲಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಲ್ಪಾವಧಿ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಬ್ಯಾಂಕ್ಗಳಿಗೆ ಸೂಕ್ತ ನಿರ್ದೇಶನ ನೀಡಬೇಕಿದೆ. ಲೀಡ್ ಬ್ಯಾಂಕ್ ಮ್ಯಾನೇಜರ್ (ಎಲ್.ಡಿ.ಎಂ) ಅವರು ಎಲ್ಲಾ ಬ್ಯಾಂಕುಗಳ ಸಭೆ ಕರೆದು, ರೈತರಿಗೆ ಕಿರುಸಾಲ ಹಾಗೂ ಕೃಷಿ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಬೇಸಿಗೆಯ ಬಿಸಿ ಮತ್ತು ಹಸಿರು ಹುಲ್ಲು ಇರುವುದರಿಂದ ಹಾವುಗಳ ಕಾಟ ಹೆಚ್ಚಿದ್ದು, ಹಾವು ಕಡಿತ ಔಷಧಿ (ಎಎಸ್ವಿ) ಯನ್ನು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಇಡುವಂತೆ ಕ್ರಮವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. ಮತದಾರರ ಪಟ್ಟಿ ವಿಶೇಶ ಸಮಗ್ರ ಪರಿಷ್ಕರಣೆ:ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಶ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮ ಪಂಚಾಯತಿ ಮಟ್ಟದಲ್ಲಿ `ಬಿ.ಎಲ್.ಒ ಸೌಲಭ್ಯ ಕೇಂದ್ರ’ ಹಾಗೂ `ನಾಗರಿಕರ ಸೌಲಭ್ಯ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ. ಅಧಿಕಾರಿಗಳು ಖುದ್ದಾಗಿ ಈ ಕೇಂದ್ರಗಳಿಗೆ ಭೇಟಿ ನೀಡಿ, ಕಾರ್ಯವೈಖರಿಯನ್ನು ಪರಿಶೀಲಿಸಬೇಕು ಎಂದರು. ಜಿಲ್ಲೆಯಲ್ಲಿ ಸದ್ಯ ಮ್ಯಾಪಿಂಗ್ ಪ್ರಕ್ರಿಯೆಯು ಶೇ. 96.50 ರಷ್ಟ್ಟು ಉತ್ತಮ ಪ್ರಗತಿ ಸಾಧಿಸಿದೆ. ಗಣತಿ ನಮೂನೆಯ ಫಾರಂಗಳಿಗೆ ಕಡ್ಡಾಯವಾಗಿ ಸಹಿ ಮಾಡಿ, ವಾಪಸ್ ಪಡೆದುಕೊಳ್ಳುವುದನ್ನು ಅಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು ಎಂದರು. ಯಾವುದೇ ಅಧಿಕೃತ ದಾಖಲೆಗಳಿಲ್ಲದ, ಆದರೆ ಸ್ಥಳೀಯವಾಗಿ 20-30 ವರ್ಷಗಳಿಂದ ವಾಸಿಸುತ್ತಿರುವ ನಾಗರಿಕರಿಗೆ ತಹಶೀಲ್ದಾರರು ಹಾಗೂ ಪಿ.ಡಿ.ಒ ಗಳು ವಾಸಸ್ಥಳ ದೃಢೀಕರಣ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಸಕಾಲ ನಿಯಮದಡಿ 15 ದಿನಗಳ ಕಾಲ ಕಾಯಿಸಿ ಸಮಯ ವ್ಯರ್ಥ ಮಾಡಬಾರದು. ಈ ಇಡೀ ಪ್ರಕ್ರಿಯೆಗೆ ಕೇವಲ 30 ದಿನಗಳ ಕಾಲಾವಕಾಶ ಇರುವುದರಿಂದ, ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು, ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಸೇರಿದಂತೆ ನಿಗದಿಪಡಿಸಿದ 12 ವಿವಿಧ ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಗ್ರಾಮ ಪಂಚಾಯತಿ, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ್ ಕಚೇರಿ ಹಂತದಲ್ಲಿ ಪೂರ್ಣ ಸಹಕಾರ ನೀಡಬೇಕು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೇ ಮಾಧವ ವಿಠ್ಠಲರಾವ್ ಅವರು ಮಾತನಾಡಿ, ಬರ ಪೀಡಿತ ಪ್ರದೇಶಗಳ ಜನರಿಗೆ ಉದ್ಯೋಗ ನೀಡಲು ವಿಬಿಜಿರಾಮ್ಜಿ (ಗಿಃ-ಉಖಂಒಉ) ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯು 10 ರಿಂದ 12 ದಿನಗಳ ಒಳಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು, ಪ್ರಸಕ್ತವಾದ ಬರಗಾಲ ಎದುರಾಗುವ ಸಾಧ್ಯತೆ ಇರುವುದರಿಂದ, ಕಳೆದ ಮೇ ತಿಂಗಳಿನಿAದ ಜಿಲ್ಲೆಯಲ್ಲಿ ಸುಮಾರು 6 ಲಕ್ಷ ಕಾರ್ಮಿಕರು ನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಷ್ಟೇ ಪ್ರಮಾಣದ ಮಾನವ ದಿನಗಳನ್ನು ಸೃಜಸಲು ಹಾಗೂ ರಾಜ್ಯ ಸರ್ಕಾರದಿಂದಲೂ ಹೆಚ್ಚಿನ ಗುರಿಯನ್ನು ಪಡೆಯಲು ಕ್ರಮವಹಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಹಾಯವಾಣಿ ಮುಖಾಂತರ ನಿರ್ವಹಿಸಲಾಗುತ್ತಿದ್ದು, ಈಗಾಗಲೇ ಎರಡು ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಲಾಗಿದೆ. ಮರೇನಹಳ್ಳಿ ಮತ್ತು ಉಡಾಳ ಗ್ರಾಮಗಳಲ್ಲಿ ಕಂಡುಬAದಿದ್ದ ನೀರಿನ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ ಎಂದರು. ತುರ್ತು ಕ್ರಿಯಾ ಯೋಜನೆಯಡಿ ಬಿಡುಗಡೆಯಾಗಿರುವ 3 ಕೋಟಿ ರೂಪಾಯಿ ಅನುದಾನದಲ್ಲಿ ಹೊಸ ಬೋರ್ವೆಲ್ಗಳ ಕೊರೆಯುವಿಕೆ, ರೀ-ಡ್ರಿಲ್ಲಿಂಗ್ ಹಾಗೂ ಇತರೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಶೇ. 90 ರಷ್ಟು ಕೆಲಸ ಪೂರ್ಣಗೊಂಡಿದೆ. ಸರ್ಕಾರದ ನಿರ್ದೇಶನದಂತೆ ಅಗತ್ಯವಿದ್ದರೆ ಇನ್ನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಕಲುಷಿತ ನೀರಿನ ಸಮಸ್ಯೆಯಾಗದಂತೆ ತಡೆಯಲು ಚನ್ನಗಿರಿ ಹಾಗೂ ದಾವಣಗೆರೆಯಲ್ಲಿರುವ ಜಿಲ್ಲೆಯ ಎರಡು ಪ್ರಮುಖ ಪ್ರಯೋಗಾಲಯಗಳಲ್ಲಿ ಶೇ. 100 ರ ಸಾಮರ್ಥ್ಯದೊಂದಿಗೆ ನೀರಿನ ಗುಣಮಟ್ಟ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಫ್ಟಿಕೆ ಟೆಸ್ಟಿಂಗ್ ಸಹ ನಡೆಸಲಾಗುತ್ತಿದೆ. ಓವರ್ ಹೆಡ್ ಟ್ಯಾಂಕ್ ಗಳ ಸ್ವಚ್ಛತೆಯ ಕುರಿತು ಪಿಡಿಒ ಹಾಗೂ ಸಹಾಯಕ ಇಂಜಿನಿಯರ್ಗಳಿಂದ ಜಂಟಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಚರಂಡಿ ಹಾಗೂ ಡ್ರೈನೇಜ್ಗಳ ಬಳಿ ಇರುವ ಪೈಪ್ ಲೀಕೇಜ್ಗಳನ್ನು ಕಡ್ಡಾಯವಾಗಿ ಸರಿಪಡಿಸಿ, ಕಲುಷಿತ ನೀರು ಸರಬರಾಜಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು. ವಾಟರ್ ಪ್ಯೂರಿಫಿಕೇಶನ್ ಯೂನಿಟ್ ಗಳಲ್ಲಿ ಯಾವುದೇ ದುರಸ್ತಿ ಇದ್ದಲ್ಲಿ ಅದನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೇ ಸರಿಪಡಿಸಲು ಮತ್ತು ಸಾರ್ವಜನಿಕರಿಂದ ಯಾವುದೇ ದೂರುಗಳ ಬರದಂತೆ ಕ್ರಮ ಕೈಗೊಳ್ಳಬೇಕು ಎಂದರು. ಮಲೆಬೆನ್ನೂರು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬೋರ್ವೆಲ್ಗಳ ನೀರಿನ ಮಟ್ಟದ ಮೇಲೆ ನಿರಂತರ ನಿಗಾ ಇಡುವಂತೆ ಸೂಚಿಸಲಾಗಿದೆ. ಪಾಮೇನಹಳ್ಳಿ ಕೆರೆಯನ್ನು ಕೂಡಲೇ ಸ್ವಚ್ಚಗೊಳಿಸುವಂತೆ ಸೂಚನೆ ನೀಡಿದರು. ಜಿಲ್ಲೆಯ ಕೆಲವು ಶಾಲೆಗಳಲ್ಲಿ ಬೇಳೆ ಕೊರತೆಯಿದೆ ಎಂಬ ವರದಿಗಳಿಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ರಾಜ್ಯ ಮಟ್ಟದಿಂದ ನಾಲ್ಕೈದು ಜಿಲ್ಲೆಗಳ ಬೇಳೆ ಟೆಂಡರ್ ಪ್ರಕ್ರಿಯೆ ಬಾಕಿಯಿರುವುದು ನಿಜ. ಆದರೆ ಸದ್ಯಕ್ಕೆ ಎಸ್ಡಿಎಂಸಿ ಖಾತೆಗಳಲ್ಲಿ ಹಣ ಲಭ್ಯವಿದ್ದು, ಶಾಲಾ ಮುಖ್ಯೋಪಾಧ್ಯಾಯರು ಸ್ಥಳೀಯವಾಗಿ ಬೇಳೆ ಖರೀದಿಸಿ ಬಿಸಿಊಟ ನಡೆಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬೇಳೆ ಸರಬರಾಜಾಗಲಿದ್ದು, ಜಿಲ್ಲೆಯಲ್ಲಿ ಬಿಸಿಊಟಕ್ಕೆ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದರು.ಸಭೆಯಲ್ಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾ ನಾಯಕ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಳೆ ಕೊರತೆ ಹಿನ್ನೆಲೆ ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಮೇವು ಸಂಗ್ರಹಣೆ ಕಡ್ಡಾಯವಾಗಿ ಬರ ನಿರೋಧಕ ಬೆಳೆ ಪದ್ಧತಿಗೆ ಆದ್ಯತೆ : ಗಂಗಾಧರಸ್ವಾಮಿ ಜಿ.ಎಂ



