ಮಾಗಡಿ: ಇತ್ತೀಚೆಗಷ್ಟೆ ಪಟ್ಟಣದ ಐತಿಹಾಸಿಕ ಗೌರಮ್ಮನಕೆರೆ ಅಭಿವೃದ್ಧಿಪಡಿಸಲು ಕೆ.ಆರ್.ಐ.ಡಿ.ಎಲ್.ವತಿಯಿಂದ ಸುಮಾರು ಐದು ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದ ಬಾಲಕೃಷ್ಣ ಅವರು ಈ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಪಟ್ಟಣದ ಗೌರಮ್ಮನಕೆರೆ ಬಳಿಯ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಕೆಲಸ ಪ್ರಾರಂಭಿಸಬೇಕು ಎಂದು ಸೂಚಿಸಿದ ಅವರು ಇತಿಹಾಸ ಪ್ರಸಿದ್ದ ಗೌರಮ್ಮನಕೆರೆ ಅಭಿವೃದ್ಧಿಪಡಿಸಲು ನಾವು ಬದ್ದರಾಗಿದ್ದು ಕೆರೆಯ ಸುತ್ತಮುತ್ತ ಉದ್ಯಾನವನ,ವಾಕಿಂಗ್ ಪಾಥ್,ಮಕ್ಕಳ ಆಟಿಕೆ,ಫುಡ್ ಕೋರ್ಟ್ ಸೇರಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಐದು ಕೋಟಿ ಮಂಜೂರಾಗಿದೆ.
ಈ ಕಾಮಗಾರಿ ಕೂಡಲೇ ಪ್ರಾರಂಭಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದ ಅವರು ಕೆರೆಯ ಮೇಲ್ಭಾಗದಲ್ಲಿ ಎರಡು 2 ಎಕರೆ 24 ಗುಂಟೆ ಸರಕಾರಿ ಜಮೀನಿದ್ದು ಇಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲು ಚಿಂತಿಸಲಾಗಿದೆ.ಈ ಜಾಗವನ್ನು ಅಳತೆ ಮಾಡಿ ಬೌಂಡರಿ ಫಿಕ್ಸ್ ಮಾಡುವಂತೆ ಸರ್ವೇಯರ್ ಪ್ರಭಾಕರ್ ಅವರಿಗೆ ಬಾಲಕೃಷ್ಣ ತಿಳಿಸಿದರು.
ಕೆ.ಆರ್.ಐ.ಡಿ.ಎಲ್.ಎಂಜಿನಿಯರ್ ಲಕ್ಷ್ಮೀ ಮಾತನಾಡಿ ಕೆರೆಯ ಪಕ್ಕ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಡಿಸೆಂಬರ್ 23 ರಂದು ವೈಕುಂಠ ಏಕಾದಶಿ ಕಾರ್ಯಕ್ರಮ ಇದೆ ಎಂದು ತಿಳಿಸಿದ್ದು ಈಗಲೇ ಪ್ರಾರಂಭಿಸಿದರೆ ಒಳಚರಂಡಿ ಸಮಸ್ಯೆ ಬಗೆಹರಿಸಲು ಭೂಮಿ ಅಗೆಯಬೇಕಾಗುತ್ತದೆ.ಆಗ ಧಾರ್ಮಿಕ ಕಾರ್ಯಕ್ರಮಕ್ಕೆ ತೊಂದರೆಯಾಗುತ್ತದೆ.ಆದಕಾರಣವಾಗಿ ಈ ಕಾರ್ಯಕ್ರಮ ಮುಗಿದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಲಕ್ಚ್ಮೀ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ, ಎಂಜಿನಿಯರ್ ಪ್ರಶಾಂತ್,ಗ್ರಾಪಂ ಮಾಜಿ ಅದ್ಯಕ್ಷ ತಗ್ಗೀಕುಪ್ಪೆ ಮುಕುಂದ, ಮಾಜಿ ಸದಸ್ಯ ಕೃಷ್ಣೋಜಿರಾವ್, ಪುರಸಭೆ ಸದಸ್ಯ ರಿಯಾಜ್ಹ್ ಮಾಜಿ ಸದಸ್ಯ ಚಂದ್ರಶೇಖರ್,ಕಾಂಗ್ರೆಸ್ ಮುಖಂಡರಾದ ಅಬ್ದುಲ್ ರೆಹಮಾನ್, ಆಬೀದ್, ಮಹದೇಶ್ವರ ಕಾಲೋನಿ ಕೆಂಪೇಗೌಡ, ಚಿಕ್ಕಮುದಿಗೆರೆ ಸುರೇಶ್, ಕಲ್ಯಾಗೇಟ್ ನವೀನ್ ಸೇರಿದಂತೆ ಮತ್ತಿತರಿದ್ದರು.