ಬೆಂಗಳೂರು: ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.ಪಿಓಪಿ ಗಣೇಶ ಮಾರಾಟ ಹಾಗೂ ತಯಾರಿಕೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಒಂದೊಮ್ಮೆ ಯಾರಾದರೂ ಮಾರಾಟ, ತಯಾರಿಕೆ ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಚ್ಚರಿಕೆ ನೀಡಿದೆ. ಗಣೇಶ ಕೂರಿಸಲು ಆಯೋಜಕರು ಅನುಮತಿ ಪಡೆಯಲು ವಾರ್ಡ್ವಾರು ನೋಡಲ್ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಅರ್ಜಿ ಬಂದ ಒಂದೇ ದಿನದಲ್ಲಿ ಅರ್ಜಿ ಪರಿಶೀಲಿಸಿ ಅನುಮತಿ ನೀಡಲಾಗುವುದು. ಸಿಂಗಲ್ ವಿಂಡೋ ಮೂಲಕ ಅರ್ಜಿ ವಿಲೇವಾರಿಗೆ ಜಿಬಿಎ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.ಮನೆಯಲ್ಲೇ ವಿಸರ್ಜನೆ ಆಗುವ ಮೂರ್ತಿಗಳ ಬಾಕಿ ಮಣ್ಣನ್ನು ಮನೆಯಲ್ಲೇ ವಿಲೇವಾರಿ ಮಾಡಲು ಸೂಚಿಸಿದ್ದು, ಹೂಕುಂಡ ಅಥವಾ ಕೈತೋಟಗಳಿಗೆ ಮಣ್ಣು ಮರುಬಳಕೆಗೆ ಮನವಿ ಮಾಡಲಾಗಿದೆ. ಜೊತೆಗೆ ಜಿಬಿಎ ನಿಗದಿ ಮಾಡಿದ ಜಾಗ ಹೊರತುಪಡಿಸಿ ಇತರೆ ಜಾಗದಲ್ಲಿ ವಿಸರ್ಜನೆ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದೆ. ಇನ್ನೂ ಗಣೇಶ ಹಬ್ಬ ಆಚರಣೆಯಲ್ಲಿ ಪ್ಲಾಸ್ಟಿಕ್ ಬಳಕೆಯೂ ಸಂಪೂರ್ಣ ನಿಷೇಧಿಸಲಾಗಿದೆ. ಒಂದೊಮ್ಮೆ ಆಚರಣೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ಆಯೋಜಕರಿಗೆ ದಂಡ ವಿಧಿಸಲಾಗುವುದು.