ಗೌರಿಬಿದನೂರು: ಕಳೆದ ಒಂದು ವರ್ಷದಿಂದ ಬೀಗ ಮುದ್ರೆಗೆ ಒಳಗಾಗಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದ ಮೂರು ಕೊಠಡಿಗಳ ಬೀಗಗಳನ್ನು ಮುರಿದು ಒಳಗೆ ಅಡಗಿದ್ದ ರಹಸ್ಯವನ್ನು ಬಯಲು ಮಾಡುವಲ್ಲಿ ದಿಶಾ ಸಮಿತಿ ಸದಸ್ಯೆ ಶೋಭಾ ಮತ್ತು ನಗರಸಭಾ ಸದಸ್ಯ ಪದ್ಮಾವತಮ್ಮ ಯಶಸ್ವಿಯಾಗಿದ್ದಾರೆ.
ಹಿಂದುಳಿದ ವರ್ಗಗಳ ತಾಲ್ಲೂಕು ಕಲ್ಯಾಣಾಧಿಕಾರಿ ವನಜಾಕ್ಷಿ ತಾಲ್ಲೂಕು ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಹೋದ ಹಿನ್ನೆಲೆಯಲ್ಲಿ ನಿಲಯದ ಪ್ರಭಾರೆಯನ್ನು ಅರುಣ ಎಂಬುವವರಿಗೆ ನೀಡಿದರು.
ಪ್ರಭಾರೆ ನೀಡಿದ ವನಜಾಕ್ಷಿ ನಿಲಯದ ದಾಖಲೆಗಳು ಸೇರಿದಂತೆ ದಾಸ್ತಾನು ಕೊಠಡಿಗಳ ಬೀಗದ ಕೈಗಳನ್ನು ನೀಡದೆ ಸುಮಾರು ಒಂದು ವರ್ಷದಿಂದ ಸತಾಯಿಸುತ್ತಿದ್ದರು. ಶುಕ್ರವಾರ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಶೋಭಾ ಕೊಠಡಿಗಳಿಗೆ ಬೀಗ ಹಾಕಿರುವುದನ್ನು ಕಂಡು ತೆರೆಯಲು ವಾರ್ಡನ್ಗೆ ಸೂಚಿಸಿದಾಗ ತನ್ನ ಬಳಿ ಬೀಗದ ಕೈಗಳಿಲ್ಲ ಎಂದು ವನಜಾಕ್ಷಿಯ ಕಡೆ ಕೈ ತೋರಿದರು.
ಅವರನ್ನು ಕೇಳಿದಾಗ ಬೀಗದ ಕೈಗಳು ಕಳೆದು ಹೋಗಿವೆ ಎಂದು ಸಿದ್ಧ ಉತ್ತರ ನೀಡಿದಾಗ ಅನುಮಾನಗೊಂಡ ಶೋಭಾ ಬೀಗಗಳನ್ನು ಮುರಿಸಿದಾಗ ಅಲ್ಲಿ ಹೊಸ ಚೇರು, ಮೇಜು, ಬಟ್ಟೆ, ಬೆಡ್ಶೀಟ್, ಜಮಖಾನೆ, ಪುಸ್ತಕಗಳು ಇತ್ಯಾದಿ ಕಂಡು ಬಂದವು.
ಹೊಸೂರು ಮತ್ತು ನಗರದ ಬಾಲಕರ ವಿದ್ಯಾರ್ಥಿನಿಲಯಗಳಿಗೆ ವಿತರಣೆ ಮಾಡಲು ಇಲ್ಲಿ ಇರಿಸಲಾಗಿದೆ ಎಂದು ವನಜಾಕ್ಷಿ ಹೇಳಿದಾಗ ಶೋಭಾ ಸದರಿ ನಿಲಯಗಳ ವಾರ್ಡನ್ರನ್ನು ಪ್ರಶ್ನಿಸಿದಾಗ ಮೊದಲು ನಮಗೆ ಅವುಗಳ ಅಗತ್ಯವಿಲ್ಲ ಎಂದವರು ಬಳಿಕ ವರಿಸೆ ಬದಲಾಯಿಸಿ ಹೌದು ನಮಗಾಗಿ ಎಂದು ದಿಕ್ಕು ತಪ್ಪಿಸಲು ಮುಂದಾದರು.
ಪೀಠೋಪಕರಣಗಳು ಮತ್ತು ನಿತ್ಯ ಬಳಕೆಯ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡದೆ ಒಂದು ವರ್ಷದಿಂದ ಅಲ್ಲಿರಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ನನಗೆ ಉತ್ತರ ಸಿಕ್ಕಿಲ್ಲ. ಇಲ್ಲಿ ಏನೋ ನಡೆಯುತ್ತಿದೆ. ಅದರ ಅಸಲಿಯತ್ತನ್ನು ಬಯಲು ಮಾಡುತ್ತೇನೆ. ಮತ್ತೊಂದು ಕೊಠಡಿಯಲ್ಲಿದ್ದ ಮೂರು ಕಡತಗಳನ್ನು ವನಜಾಕ್ಷಿ ತೆಗೆದಿರಿಸಿಕೊಂಡರು.
ಅವುಗಳಲ್ಲಿ ಅಡಗಿರುವ ಬ್ರಹ್ಮಾಂಡವನ್ನು ಬಯಲು ಮಾಡಲು ಮೇಲಾಧಿಕಾರಿಗಳು ಮುಂದಾಗಬೇಕು. ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿರುವುದಾಗಿ ತಿಳಿದು ಬಂದಿದೆ. ಇಲಾಖೆಯ ಮೇಲಾಧಿಕಾರಿಗಳು ಪ್ರಾಮಾಣಿಕ ತನಿಖೆ ನಡೆಸಿ ಭ್ರಷ್ಟಾಚಾರವನ್ನು ಬಯಲು ಮಾಡಿ ಭ್ರಷ್ಟರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿರುವ ಶೋಭಾ ತಪ್ಪಿದಲ್ಲಿ ನಾನು ಉನ್ನತ ಮಟ್ಟದ ಅಧಿಕಾರಿಗಳಿಗೆ ದಾಖಲೆಗಳೊಂದಿಗೆ ಲಿಖಿತ ದೂರು ನೀಡುತ್ತೇನೆ ಎಂದು ಎಚ್ಚರಿಸಿದ್ದಾರೆ.
ನಿಯಲಯಗಳಿಗೆ ಕಳಪೆ ತರಕಾರಿ ಸರಬರಾಜು ಆಗುತ್ತಿದೆ. ಟೆಂಡರ್ದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಕೋರಿದ್ದಾರೆ.
ಇತ್ತೀಚೆಗೆ ತಹಸೀಲ್ದಾರ್ ಮಹೇಶ್ ಮತ್ತು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಈ ನಿಲಯಕ್ಕೆ ಭೇಟಿ ನೀಡಿದ್ದರು. ಅವರ ಭೇಟಿ ನಂತರ ಇದು ಬಯಲಾಗಿದೆ. ಕೊಠಡಿಗಳಿಗೆ ಬೀಗ ಹಾಕಿದ್ದದ್ದು ಅವರ ಗಮನಕ್ಕೆ ಬರಲಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.