ಮೈಸೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡು ಶೀಘ್ರದಲ್ಲಿ ಉದ್ಘಾಟನೆಯಾಗಲಿರುವ “ಭವ್ಯ ಶ್ರೀರಾಮ ಮಂದಿರ”ದ ದರ್ಶನವನ್ನು ಇದೀಗ ಮೈಸೂರಿನಲ್ಲೇ ಪಡೆಯಬಹುದಾಗಿದೆ.ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಕೃತಿ (ಮಾದರಿ) ದರ್ಶನ ಸದ್ಯ ಮೈಸೂರಿನಲ್ಲೇ ದೊರೆಯಲಿದೆ.
ಶ್ರೀರಾಮನ ಮೇರು ವ್ಯಕ್ತಿತ್ವ ಮತ್ತು ತತ್ವಾದರ್ಶಗಳನ್ನು ಪರಿಚಯಿಸುವ ಮಹದುದ್ದೇಶದೊಂದಿಗೆ ಬೆಂಗಳೂರು ನಿವಾಸಿ ವಿನಯ್ ರಾಮ್ ‘ಶ್ರೀರಾಮ ಮಂದಿರ’ದ ಮಾದರಿಯನ್ನು ಸ್ವತಃ ಸಿದ್ಧಪಡಿಸಿ, 108 ಸ್ಥಳಗಳಲ್ಲಿ ಪ್ರದರ್ಶನಕ್ಕಿಡುವ ಸಂಕಲ್ಪದೊಂದಿಗೆ ಪಯಣ ಆರಂಭಿಸಿ, ಇದೀಗ ಮೈಸೂರಿಗೆ ಆಗಮಿಸಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಯವರಾದ ಇವರು, 15xI5 ಅಡಿ (ಉದ್ದ ಮತ್ತು ಅಗಲ) ವಿಸ್ತೀರ್ಣ ಮತ್ತು 10 ಅಡಿ ಎತ್ತರದ ಈ ಪ್ರತಿಕೃತಿ ಸಿದ್ಧಪಡಿಸಿದ್ದಾರೆ.
ಮಂದಿರದ ಮಾದರಿಯನ್ನು ಸ್ವತಃ ತಾವೇ ಸಿದ್ಧಪಡಿಸಿದ್ದಾಗಿ ತಿಳಿಸಿರುವ ಅವರು, ಎರಡೂವರೆ ತಿಂಗಳ ಕಾಲ ಇದನ್ನು ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೆ ಎನ್ನುತ್ತಾರೆ. ಮಾದರಿಯ ಎಲ್ಲವನ್ನೂ ಥರ್ಮೋ ಕೋಲ್ನಲ್ಲಿ ಮಾಡಿರುವ ಹಿನ್ನೆಲೆ ಯಲ್ಲಿ ಇದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ದು ಜೋಡಣೆ ಮಾಡುವಾಗ ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಬೇಕು ಎನ್ನುವ ಅವರು, ಇದರ ಕರ್ತೃ ನಾನೇ ಥರ್ಮೋಕೋಲ್ ಜೊತೆಗೆ ಫೆವಿಕಾಲ್, ಗುಂಡುಪಿನ್ನು ಹಾಗೂ ಬಣ್ಣ ಬಳಸಿ ಈ ಮಾದರಿ ಸಿದ್ಧಪಡಿಸಲಾಗಿದೆ.
ಒಂಟಿಕೊಪ್ಪಲಿನ ಶ್ರೀ ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀರಾಮಮಂದಿರದ ಪ್ರತಿಕೃತಿ ಪ್ರದರ್ಶನಕ್ಕೆಕಿಟ್ಟಿದರು ಇಂದು ಮಂದಿರದ ಪ್ರದರ್ಶನದ ಕೊನೆ ದಿನವಾಗಿದೆ. ನಾಳೆ ಮೈಸೂರಿನ ವಿಜಯನಗರದ 3ನೇ ಹಂತದಲ್ಲಿರುವ ಶ್ರೀ ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನದ (ಪ್ರದರ್ಶನದ 44ನೇ ಸ್ಥಳ) ಆವರಣದಲ್ಲಿ ಮಂದಿರದ ಮಾದರಿಯ ಜೋಡಣೆ ಮಾಡಲಿದ್ದೇನೆ. ಇಲ್ಲಿ ಶುಕ್ರವಾರದಿಂದ (ನ.17 ರಿಂದ) ವಾರ ಕಾಲ ಮಂದಿರದ ಮಾದರಿ ದರ್ಶನ ಪಡೆಯಬಹುದು. ದೇವಸ್ಥಾನ ತೆರೆದಿರುವ ಸಮಯದಲ್ಲಿ ಸಾರ್ವಜನಿಕರು ಭೇಟಿ ನೀಡಿ ವೀಕ್ಷಣೆ ಮಾಡಬಹುದು ಎಂದು ಹೇಳಿದರು.
ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಶ್ರೀರಾಮನ ಮೇರು ವ್ಯಕ್ತಿತ್ವ ಮತ್ತು ಆದರ್ಶ ಪರಿಚಯ ಮಾಡಿಸಬೇಕೆಂಬ ಉದ್ದೇಶದಿಂದ ಮಂದಿರದ ಪ್ರದರ್ಶನದ ಪಯಣ ನಡೆಸುತ್ತಿದ್ದೇನೆ. ಎಷ್ಟೋ ವಯೋವೃದ್ಧರು ಅಯೋಧ್ಯೆಗೆ ಭೇಟಿ ನೀಡುವುದು ಕಷ್ಟವಾಗಬಹುದು. ಹಾಗಾಗಿ ಅಂತಹವರು ಇದನ್ನಾದರೂ ನೋಡಿದರೆ ಅವರ ಮನಸ್ಸಿಗೆ ಒಂದಿಷ್ಟು ಸಮಾಧಾನ ದೊರೆಯಬಹುದು. ಅದೇ ರೀತಿ ಅದೆಷ್ಟೋ ಮಕ್ಕಳು, ಯುವ ಜನರು, ಮಧ್ಯ ವಯಸ್ಕರು ಇದನ್ನು ನೋಡಿ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಬೇಕೆಂಬ ಸಂಕಲ್ಪ ಮಾಡಲೂಬಹುದು.
ಈ ಎಲ್ಲಾ ಉದ್ದೇಶದ ಹಿನ್ನೆಲೆಯಲ್ಲಿ ಈ ಮಾದರಿ ನಿರ್ಮಿಸಿದ್ದೇನೆ ಎನ್ನುತ್ತಾರೆ ವಿನಯ್ ರಾಮ್. ಶಾಲಾ-ಕಾಲೇಜು, ಆಶ್ರಮ, ಅಪಾರ್ಟ್ ಮೆಂಟ್, ಆಧ್ಯಾತ್ಮಿಕ ಕೇಂದ್ರ ಸೇರಿದಂತೆ ಆಹ್ವಾನ ದೊರೆಯುವ ಸ್ಥಳಗಳಲ್ಲಿ ಪ್ರದ ರ್ಶಿಸಲು ಸಂಕಲ್ಪ ಮಾಡಿದ್ದೇನೆ. ಬೆಂಗಳೂರಿನಲ್ಲಿ 36 ಸ್ಥಳಗಳಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಅಂಜನಾದ್ರಿ ಬೆಟ್ಟ ಮತ್ತು ಮಂತ್ರಾಲಯದ ರಾಯರ ಮಠದಲ್ಲೂ ಪ್ರದರ್ಶನಕ್ಕೆ ಇಡಲಾಗಿತ್ತು.
ಮೈಸೂರಿನಲ್ಲಿ ಈಗಾಗಲೇ ಮೂರು ಸ್ಥಳಗಳಲ್ಲಿ ಪ್ರದರ್ಶನ ಮಾಡಲಾಗಿದೆ. ಇಂದಿಗೆ ಒಟ್ಟು 43 ಸ್ಥಳಗಳಲ್ಲಿ ಪ್ರದರ್ಶನ ಪೂರ್ಣಗೊಳ್ಳುತ್ತಿದೆ.
ಇದು ನನ್ನ ಸ್ವಯಂಪ್ರೇರಿತ ದೇವರ ಕಾರ್ಯವಾಗಿದ್ದು, ಯಾವುದೇ ಸಂಘ-ಸಂಸ್ಥೆಗಳಿಗೆ ಸಂಬಂಧಿಸಿದ್ದಲ್ಲ ಎಂದರು. ಮಂದಿರದ ಮಾದರಿಯಲ್ಲಿ ಸುಮಾರು 40 ಬಿಡಿ ಭಾಗಗಳು ಇದ್ದು, ಅವುಗಳನ್ನು ಕಳಚಿ ಒಂದು ಜಾಗದಿಂದ ಮತ್ತೊಂದು ಜಾಗದಲ್ಲಿ ಜೋಡಣೆ ಮಾಡುತ್ತಿದ್ದೇನೆ. ಬೆಂಗಳೂರಿನ ಖಾಸಗಿ ಶಾಲೆಯ ಆವರಣದಲ್ಲಿ ಈ ಮಾದರಿಯನ್ನು ಎರಡೂವರೆ ತಿಂಗಳ ಅವಧಿಯಲ್ಲಿ ತಯಾರು ಮಾಡಿದ್ದೇನೆ.
2022ರ ಡಿ.31ರಿಂದ ಪ್ರದರ್ಶನದ ಪಯಣ ಪ್ರಾರಂಭ ಮಾಡಿದ್ದೇನೆ ಎಂದರಲ್ಲದೆ ಗೂಗಲ್ ಮೂಲಕ ಮೂಲ ಶ್ರೀ ರಾಮಮಂದಿರ ವಿನ್ಯಾಸ ಅಧ್ಯಯನ ಮಾಡಿ ಮಾದರಿ ಸಿದ್ಧಪಡಿಸಿದೆ. ದೈವ ಪ್ರೇರಣೆಯಿಂದ ಈ ಕಾಯಕ ಈಕೈಗೆತ್ತಿಕೊಂಡಿದ್ದೇನೆ. ಒಂದೊಂದು ಸ್ಥಳದಲ್ಲಿ ಒಂದು ವಾರ ಕಾಲ ಪ್ರದರ್ಶನಕ್ಕೆ ಇಡುತ್ತಿದ್ದೇನೆ. ಸನಾತನ ಧರ್ಮ, ರಾಮನ ಆದರ್ಶದ ಬಗ್ಗೆಯೂ ವೀಕ್ಷಣೆಗೆ ಬರುವ ಭಕ್ತರಿಗೆ ವಿವರಣೆ ನೀಡುತ್ತಿದ್ದೇನೆ. ಮುಂದಿನ ಬುಧವಾರದವರೆಗೆ ವಿಜಯನಗರದ ಶ್ರೀ ಸಪ್ತಮಾತೃಕಾ ದೇವಾಲಯದಲ್ಲಿ ರಾಮ ಮಂದಿರದ ಮಾದರಿಯ ದರ್ಶನ ಪಡೆಯಲು ಅವಕಾಶವಿದೆ ಎಂದು ವಿವರಿಸಿದರು.