ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯಲ್ಲಿ ನಡೆದಿರುವ ನೀಟ್ ಅಕ್ರಮದ ವಿರುದ್ಧದ ಪ್ರತಿಭಟನೆ ಅಡ್ಡಿ ಬಂದಿದೆ. ನಿನ್ನೆ ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ನಾಯಕರು ಜತೆ ಮಾತನಾಡಲು ಮುಖ್ಯಮಂತ್ರಿ ಮಾಜಿ ಸಿಎಂ ಕೆಪಿಸಿಸಿ ಅಧ್ಯಕ್ಷರು ದೆಹಲಿಗೆ ತೆರಳಿದ್ದರು. ನಿನ್ನೆ ಮಧ್ಯಾಹ್ನದ ವೇಳೆಗೆ ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ನಿವಾಸದಲ್ಲಿ ಅವರೊಂದಿಗೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಳುತ್ತಿದ್ದಾಗ ನೀಟ್ ಅಕ್ರಮದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಅಡ್ಡಿಯಾಯಿತು. ನಿನ್ನೆ ತಡರಾತ್ರಿಯವರೆಗೂ ನಡೆದ ಪ್ರತಿಭಟನಾ ಹಿನ್ನೆಲೆಯಲ್ಲಿ ಯಾವುದೇ ಮಾತುಕತೆ ನಡೆಸಲು ಸಾಧ್ಯವಾಗಿಲ್ಲ. ಇಂದು ಸಹ ಇದೇ ವಿಷಯದ ಸಂಬಂಧ ಸಂಸತ್ ಒಳಗೂ ಹೊರಗೂ ಧರಣಿ ನಡೆಯುತ್ತಿರುವ ಪರಿಣಾಮ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ರಾಜ್ಯದ ಮೂವರು ನಾಯಕರು ಯಾವುದೇ ಫಲಪ್ರದವಿಲ್ಲದೆ ಮಧ್ಯಾಹ್ನದ ವೇಳೆಗೆ ರಾಜ್ಯದತ್ತ ಹಿಂದಿರುಗಿದ್ದಾರೆ. ಮತ್ತೆ ಸಂಪುಟ ವಿಸ್ತರಣೆ ರಾಜ್ಯ ನಾಯಕರು ಹೈಕಮಾಂಡ್ನವರು ಕರೆದಾಗ ಹೋಗಲು ಸಿದ್ಧರಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಕಾರ್ಯ ನೆನೆಗುದಿಗೆ ಬಿದ್ದಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ನೂತನ ಮಂತ್ರಿಗಳ ಪ್ರಮಾಣ ವಚನ ಸ್ವೀಕಾರಕ್ಕೆ ಲೋಕಭವನದಲ್ಲಿ ಸಿದ್ಧತೆ ಮಾಡಲಾಗಿತ್ತು.



