ಶಿಡ್ಲಘಟ್ಟ: ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಯಲ್ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ಪ್ರತಿಭಾವಂತ 20 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರಾದ ದೇವರಾಜ್ ತಿಳಿಸಿದ್ದಾರೆ.
ನಿನ್ನೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪರೀಕ್ಷೆಗಳ ಪ್ರಾರಂಭೋತ್ಸವ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಈ ಯೋಜನೆಗೆ 50 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುವ ಮೂಲಕ ಸಮಾಜಕ್ಕೆ ನನ್ನಿಂದಾಗುವ ಕೊಡುಗೆ,ಸೇವೆ ನೀಡುವ ಉದ್ದೇಶ ನನ್ನದಾಗಿದೆ ಎಂದು ಹೇಳಿದರು.
ಮಾಜಿ ಶಾಸಕರಾದ ಎಂ ರಾಜಣ್ಣ, ಹಾಗೂ ನಿವೃತ್ತ ಸೇನಾಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತರಾದ ಸ್ವಿ ಅಯ್ಯರ್ ರವರು ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆಯ ಸೂತ್ರವನ್ನು ಈ ವರ್ಷ ಹಿಡಿದು ಮುನ್ನಡೆಸುತ್ತಿರುವ ವ್ಯಕ್ತಿ ದೇವರಾಜ್! ನಗರದ ಬಸ್ ನಿಲ್ದಾಣದಲ್ಲಿ, ನಗರದ ಚಿಕ್ಕಬಳ್ಳಾಪುರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಇವರು ಅತಿ ಆಧುನಿಕ ಫ್ಲೆಕ್ಸ್ ಘಟಕವನ್ನು ಸ್ಥಾಪಿಸಿದ್ದಾರೆ. ಇವರನ್ನು ನಾನು ಬಹಳ ವರ್ಷಗಳಿಂದ ಬಹಳ ಹತ್ತಿರದಿಂದ ನೋಡಿದ್ದೇನೆ. ಇವರ ಕ್ರಿಯಾಶೀಲತೆ ಮತ್ತು ಉತ್ಸಾಹ ಹಿಂದಿನ ಕಾಲೇಜು ಹುಡುಗರಿಗೆ ಮತ್ತು ಯುವಕರಿಗೆ ಸ್ಪೂರ್ತಿದಾಯಕ. ಬಸ್ ನಿಲ್ದಾಣದಲ್ಲಿ ಇವರ ತಂದೆ ಎಲೆ -ಅಡಿಕೆ ಅಂಗಡಿ ಹಾಕಿಕೊಂಡಿದ್ದರು. ಹೈ ಸ್ಕೂಲ್ ದಿನಗಳಿಂದ ಅವರನ್ನು ನಾನು ಪ್ರತಿದಿನ ನೋಡುತ್ತಿದ್ದೆ. ಅವರ ಕರ್ತವ್ಯ ಮತ್ತು ಸಮಯ ಪಾಲನೆ ನನ್ನಂತವನಿಗೆ ಪ್ರೇರಣೆ ಆಗಿತ್ತು. ಅವರೊಂದಿಗೆ ಒಂದಿಷ್ಟು ಸಮಯ ನಾನು ಕುಳಿತು ಮಾತನಾಡುತ್ತಿದ್ದೆ. ಅವರಲ್ಲಿ ನಾನು ದೇವರನ್ನು ಕಾಣುತ್ತಿದ್ದೆ. ಈಗ ಅವರು ನೆನಪಾಗಿ ಕಾಡುತ್ತಿದ್ದಾರೆ. ಅವರ ಮಗ ದೇವರಾಜ್.
ಸಣ್ಣ ಎಲೆ ಅಡಿಕೆ ಅಂಗಡಿಯ ಮೇಲೆ ದೇವರಾಜ್ ಫೋಟೋ ಸ್ಟುಡಿಯೋ ಇಟ್ಟು ಕೊಂಡಿದ್ದರು. ಇಬ್ಬರು ಯುವಕರಿಗೆ ಜೊತೆಯಲ್ಲಿಟ್ಟುಕೊಂಡು ಅವರಿಗೆ ಫೋಟೋಗ್ರಫಿ ತೆಗೆಯುವ ವಿದ್ಯೆ ಕಲಿಸುತ್ತಿದ್ದರು. ಇವರ ಒಳ್ಳೆಯತನಕ್ಕೆ ಇವರೊಂದಿಗೆ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಯಿತು. ಹೀಗಾಗಿ ಇವರು ಪ್ಲೆಕ್ಸ್ ತಯಾರಿಕಾ ಘಟಕವನ್ನು ಸ್ಥಾಪಿಸಿದರು. ಅಲ್ಲಿ ನಾಲ್ಕಾರು ಮಂದಿಗೆ ಉದ್ಯೋಗ ನೀಡಿದರು. ಈ ಘಟಕವನ್ನು ವಿಸ್ತರಣೆ ಮಾಡಿದಂತೆ ಬೆಳೆಯುತ್ತಾ ಹೋದವು. ಈಗ ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುವ ಹೆದ್ದಾರಿಯ ಪಕ್ಕದಲ್ಲಿ ಮತ್ತೊಂದು ಫ್ಲೆಕ್ಸ್ ತಯಾರಿಕಾ ಘಟಕ ಸ್ಥಾಪಿಸಿದ್ದಾರೆ. ಇವರೊಂದಿಗೆ ಮಾತನಾಡಿದಾಗಲೆಲ್ಲ ಯಾವುದಾದರೂ ಒಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗೆ ಮಾತನಾಡಿದಂತೆ ಅನುಭವವಾಗುತ್ತದೆ. ಸದಾ ಕರ್ತವ್ಯ ಕಾಯಕ ಮತ್ತು ಸಮಾಜ ಹಿತ ಚಿಂತನೆ ಮಾಡುವ ಇವರಿಗೆ ಅನೇಕ ಹಿರಿಯ ಅಧಿಕಾರಿಗಳ ಸಂಪರ್ಕವಿದೆ. ಸಮಾಜದ ಅಭಿವೃದ್ಧಿಗಾಗಿ ಸದಾ ಕ್ರಿಯಾಶೀಲವಾಗಿ ಇರಬೇಕು ಎನ್ನುವ ಇವರು ಸಹಕಾರಿ ಸಂಘಗಳ ಚುನಾವಣೆಯಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು. ಇದೀಗ ಇವರು ಬೂದಾಳ ಬಳಿ ಇರುವ ರಾಯಲ್ ಪಬ್ಲಿಕ್ ಸ್ಕೂಲ್ ವಿದ್ಯಾ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ನಿನ್ನೆಯ ದಿನ ಈ ಶಾಲೆ ಒಂದು ಮಹತ್ಕಾರ್ಯವನ್ನು ಹಮ್ಮಿಕೊಂಡಿತ್ತು. ಅದೇನೆಂದರೆ 20 ಮಂದಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಉಚಿತ ಶಿಕ್ಷಣ ನೀಡುವ ಅರ್ಥಪೂರ್ಣ ಯೋಜನೆ. ಈ ಕಾರ್ಯಕ್ರಮವನ್ನು ಉದ್ಘಾಟಿಸಲು ನಿವೃತ್ತ ಸೇನಾಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತರಾದ ಎಸ್.ವಿ.ಅಯ್ಯರ್ ಹಾಗೂ ಮಾಜಿ ಶಾಸಕ ಎಂ ರಾಜಣ್ಣ ರವರನ್ನು ಆಹ್ವಾನಿಸಲಾಗಿತ್ತು. ರಾತ್ರಿ ನನಗೆ ದೂರವಾಣಿ ಮಾಡಿ ಖಂಡಿತ ಬರಬೇಕು ಎಂದು ಹೇಳಿದ್ದರಿಂದ ನಾನು ಕಾರ್ಯಕ್ರಮದಲ್ಲಿ ಹಾಜರಾಗಿದ್ದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿದ್ದರು. ರಾಯಲ್ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಅತ್ಯಂತ ಪ್ರಭುದ್ಧರು ಹಾಗೂ ತಿಳುವಳಿಕೆ ಉಳ್ಳವರು. ಕಾರ್ಯಕ್ರಮದ ನಿರೂಪಣೆ ಸೇರಿದಂತೆ ಪ್ರತಿಯೊಂದು ಹಂತದಲ್ಲಿಯೂ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಿಸ್ತು ಮತ್ತು ಅಧ್ಯಯನ ಬೋಧಿಸುವ ನಿಟ್ಟಿನಲ್ಲಿ ಈ ಸಂಸ್ಥೆಯ ಶಿಕ್ಷಕರ ಪಾತ್ರ ಮಹತ್ವದ್ದು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ 50 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುವ ಸಾರ್ಥಕ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ದೇವರಾಜ್ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿಶೇಷವಾಗಿ ಇವರಿಗೆ ಇರುವ ಪರಿಸರ ಕಾಳಜಿ ಮತ್ತು ಸಾಮಾಜಿಕ ಪ್ರಜ್ಞೆ ಅನನ್ಯವಾದದು.
`ರಾಯಲ್ ಪಬ್ಲಿಕ್ ಶಾಲೆಯಲ್ಲಿ ಪ್ರತಿಭಾವಂತ 20 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ’



