ಕ್ರಿಕೆಟ್ ಜಗತ್ತಿನ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಕಳೆದೊಂದು ವರ್ಷದಿಂದ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಈತನನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಿ ಎಂದು ಭಾರತ ತಂಡದ ಮಾಜಿ ನಾಯಕರಾದ ಕೃಷ್ಣಮಾಚಾರಿ ಶ್ರೀಕಾಂತ್, ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ದಿಗ್ಗಜ ಆಟಗಾರರು ಒತ್ತಾಯಿಸಿದ್ದರೂ ಬಿಸಿಸಿಐ ಆಯ್ಕೆ ಮಂಡಳಿ ಮಾತ್ರ ಕಿವುಡಾಗಿಯೇ ಕುಳಿತಿದೆ.ಐಪಿಎಲ್ 2026 ಸೀಸನ್ನಲ್ಲಿ ಬರೋಬ್ಬರಿ 776 ರನ್ ಕಲೆಹಾಕಿ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಭಾರತ ತಂಡದ ಪರ ಯಾವಾಗ ಆಡಲಿದ್ದಾರೆ ಎಂಬ ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ. ಸೂರ್ಯವಂಶಿ ಭವಿಷ್ಯದ ಸೂಪರ್ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಶೀಘ್ರವಾಗಿ ಟೀಂ ಇಂಡಿಯಾದಲ್ಲಿ ಆಡಿಸಿ ಎಂಬ ಒತ್ತಾಯ ದಿನದಿಂದ ದಿನಕ್ಕೆ ಜೋರಾಗುತ್ತಿವೆ. ಇದೀಗ ಭಾರತ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಅವರು ಸಹ ಈ ಬಗ್ಗೆ ಧ್ವನಿಯೆತ್ತಿದ್ದಾರೆ.ತಾನು ಈ ಬಗ್ಗೆ ನೇರವಾಗಿಯೇ ಅಜಿತ್ ಅಗರ್ಕರ್ ಅವರನ್ನು ಪ್ರಶ್ನಿಸಿರುವುದಾಗಿ ತಿಳಿಸಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಇಬ್ಬರು ಮಾಜಿ ಸಹ ಆಟಗಾರರು ಭೇಟಿಯಾದಾಗ, ಸೂರ್ಯವಂಶಿ ಪರವಾಗಿ ತಾವು ಅಗರ್ಕರ್ ಬಳಿ ಗಟ್ಟಿಯಾಗಿ ವಾದ ಮಂಡಿಸಿರುವುದಾಗಿ ಜಡೇಜಾ ಅವರೇ ಒಪ್ಪಿಕೊಂಡಿದ್ದಾರೆ. ಅಹಮದಾಬಾದ್ ನಲ್ಲಿ ಮೇ 31ರ ಭಾನುವಾರದಂದು ನಡೆದ ಐಪಿಎಲ್ ಫೈನಲ್ ಪಂದ್ಯದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಯುವಕ ಭಾರತ ತಂಡಕ್ಕೆ ಆಯ್ಕೆಯಾಗಲು ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದರು.ಆಶ್ಚರ್ಯಕರವೆಂಬAತೆ, ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರಿಗೂ ಮಾಧ್ಯಮ ಪ್ರತಿನಿಧಿಗಳು ಇದೇ ಪ್ರಶ್ನೆಯನ್ನು ಕೇಳಿತು. ಅದಕ್ಕವರು, ” ವೈಭವ್ ಸೂರ್ಯವಂಶಿ ಉದಯೋನ್ಮುಖ ಮತ್ತು ಅದ್ಭುತ ಆಟಗಾರನಾಗಿದ್ದು, ಆತನಿಗೆ ಉಜ್ವಲ ಭವಿಷ್ಯವಿದೆ. ಆತನನ್ನು ಕ್ರಿಕೆಟ್ನ ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಿಸಿಸಿಐ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದೆ,” ಎಂದು ಹೇಳಿದರು. ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ, ವೈಭವ್ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎಂಬುದನ್ನು ಅಜಿತ್ ಅಗರ್ಕರ್ ಅವರು ಒಪ್ಪಿಕೊಂಡಿದ್ದರು. ಆದರೆ ಅವರ ಮುಂದೆ ಇನ್ನೂ ಹಲವು ಹಿರಿಯ ಆಟಗಾರರು ಲೈನ್ನಲ್ಲಿದ್ದಾರೆ ಎಂಬುದನ್ನು ಅವರು ನೆನಪಿಸಿದ್ದರು. ಅವರು ಯುವ ಮತ್ತು ಅಪಾರ ಭರವಸೆಯ ಆಟಗಾರನಾಗಿರುವುದರಿಂದ ನಾವು ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಈ ಯುವಕರಿಗೆ ಅಂತಾರಾಷ್ಟ್ರೀಯ ಮಟ್ಟದ ಅನುಭವ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಯಶಸ್ವಿ ಜೈಸ್ವಾಲ್ ಈಗಾಗಲೇ ಏಕದಿನ ತಂಡದ ಭಾಗವಾಗಿದ್ದಾರೆ. ಸೂರ್ಯವಂಶಿ ಎಷ್ಟು ಪ್ರಭಾವಶಾಲಿಯಾಗಿದ್ದಾರೋ, ಅಷ್ಟೇ ಪ್ರಬಲವಾಗಿ ಪ್ರದರ್ಶನ ನೀಡಿದ ಇತರ ಆಟಗಾರರೂ ಇದ್ದಾರೆ. ಅವರ ಬಗ್ಗೆ ನಮಗೆ ತುಂಬಾ ಉತ್ಸಾಹವಿದೆ ಮತ್ತು ಎ ತಂಡದೊಂದಿಗೆ ಪ್ರಯಾಣಿಸುವಾಗ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದು ಭಾವಿಸುತ್ತೇವೆ ಎಂದು ಅಗರ್ಕರ್ ಹೇಳಿದ್ದರು.



