ವಿಧಾನಪರಿಷತ್, ಸುವರ್ಣಸೌಧ ಹಣಕಾಸಿನ ಸ್ಥಿತಿ-ಗತಿ, ನೌಕರರ ಸಂಖ್ಯೆಯ ಮಾಹಿತಿ ಪಡೆದು, ಅನುದಾನಿತ ಶಾಲೆ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ ಅವರಿಗೆ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿ, ಕಳೆದ 8 ವರ್ಷದಿಂದ ರಾಜ್ಯದಲ್ಲಿ ಯೋಜನೆ ಜಾರಿಯಲ್ಲಿದ್ದು, ಸುಮಾರು 369 ಆಸ್ಪತ್ರೆಯಲ್ಲಿ ಮಾರಣಾಂತಿಕ ಕಾಯಿಲೆಗೆ ಸರಾಸರಿ ನೌಕರರು ಚಿಕಿತ್ಸೆ ಪಡೆಯಬಹುದಾಗಿದೆ. ಈಗಾಗಲೇ 22.90 ಕೋಟಿ ರೂ.ಕ್ಲೇಮ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಿಎಂ ಉತ್ತರಕ್ಕೆ ಪ್ರತಿಕ್ರಿಯಿಸಿದ ಸದಸ್ಯರಾದ ಹೇಮಲತಾ ನಾಯಕ, ಡಾ.ವೈ.ನಾರಾಯಣಸ್ವಾಮಿ, ಜೆಡಿಎಸ್ ನ ಮರಿತಿಬ್ಬೇಗೌಡ, ಈ ದೇಶದಲ್ಲಿ ರೈತರು- ಕೂಲಿ ಕಾರ್ಮಿಕರು ಸೇರಿ ಎಲ್ಲ ವರ್ಗದ ಜನರಿಗೆ ಆರೋಗ್ಯ ವಿಮಾ ಯೋಜನೆ ಇವೆ. ಆದರೆ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಯಾವುದೇ ಆರೋಗ್ಯ ವಿಮಾ ಯೋಜನೆ ಇಲ್ಲ. ಈ ಹಿನ್ನೆಲೆ ಸರಕಾರ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ಸಿಎಂ, ಪಿಎಂ- ಆರೋಗ್ಯ ಯೋಜನೆ, ಸಿಎಂ- ಆರೋಗ್ಯ ಯೋಜನೆಯಡಿ ಎಪಿಎಲ್ ಮತ್ತು ಬಿಪಿಎಲ್ ವರ್ಗದವರಿಗೆ ವಿಮೆ ದೊರೆಯುತ್ತದೆ ಎಂದರು. ಇದಕ್ಕೆ ಆಕ್ಷೇಪಿಸಿದ ಮರಿತಿಬ್ಬೇಗೌಡ, ಅನುದಾನಿತ ಶಿಕ್ಷಕರಿಗೆ ಇದು ಯಾವುದೂ ಲಾಗೂ ಆಗುವುದಿಲ್ಲ ಎಂದಾಗ, ನಿಮ್ಮ ಎಲ್ಲ ಸಲಹೆ ತಲೆಯಲ್ಲಿ ಇಟ್ಟುಕೊಂಡು, ಹಣಕಾಸಿನ ಲಭ್ಯತೆ ನೋಡಿಕೊಂಡು ಪರಿಶೀಲಿಸಲಾಗುವುದು ಎಂದು ತಿಳಿಸಿದರು.