ಬೆಂಗಳೂರು: ನಾಗಾರ್ಜುನ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ” ಸಂವರ್ತನ “ ಪದವಿ ಪ್ರಧಾನ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ವಾಣಿಜ್ಯ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಹರೀಶ್ ಬಾಬು. ಎಸ್ ಅವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ವಿದ್ಯಾವಂತರಿಗೆ ಸಮಾಜದಲ್ಲಿ ಎಲ್ಲೆಡೆ ಗೌರವ ದೊರೆಯುತ್ತದೆ. ನಮ್ಮ ದೇಶವು ಅಭಿವೃದ್ಧಿಯತ್ತ ಸಾಗುತ್ತಿದ್ದು ಇನ್ನಷ್ಟು ಪ್ರಗತಿ ಸಾಧಿಸಲು ಯುವಜನರು ಸಶಕ್ತರಾಗಬೇಕು ಮತ್ತು ಸಮರ್ಥರಾಗಬೇಕು ಎಂಬ ಹಿತವಚನವನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಸಂಸ್ಥೆಯ ಮಾಜಿ ಚೇರ್ಮನ್ ಎಂ.ಎಸ್.ಆರ್. ಸತ್ಯನಾರಾಯಣ ಅವರು ಭಾಗವಹಿಸಿ ಮಾತನಾಡುತ್ತಾ ಪ್ರಾಂಶುಪಾಲರು ಹಾಗೂ ಶಿಕ್ಷಕರು ತಮ್ಮ ಅನುಭವದ ಮೂಲಕ ನೀಡಿರುವ ಬೋಧನೆ ಮತ್ತು ಮಾರ್ಗದರ್ಶನದ ಸಾರವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಮತ್ತೋರ್ವ ಅತಿಥಿ ಸೆಮಿನಾರ್ ರೂಮಿನ ಕಾರ್ಯನಿರ್ವಾಹಕ ಅಧಿಕಾರಿ ಪುನೀತ್ ರಾಜ್ ಅವರು ಸತತ ಪ್ರಯತ್ನ ಮತ್ತು ದೃಢ ಸಂಕಲ್ಪದ ಮೂಲಕ ಜೀವನದಲ್ಲಿ ನಿಗದಿಪಡಿಸಿಕೊಂಡ ಗುರಿಯನ್ನು ಸಾಧಿಸಬಹುದು ಎಂದು ತಿಳಿಸಿ ಇದಕ್ಕೆ ಸಂಬಂಧಿಸಿದೆ ಹಲವು ಉದಾಹರಣೆಗಳನ್ನ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಉದ್ಯೋಗ ನಿಯೋಜನಾಧಿಕಾರಿ ಮಾಲಿನಿ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಜೀವನ ಯಶಸ್ವಿಯಾಗಲಿ ಎಂದು ಆಶಿಸಿದರು.