LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Tumakuru

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ

ಕನ್ನಡ ಮಾಧ್ಯಮ ಮೀಸಲಾತಿ 25 ವರ್ಷ: ಚಿಂತನ ಸಮಾವೇಶದಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿಕೆ



ತುಮಕೂರು: ಕನ್ನಡ ಉಳಿಸುವ ಪ್ರಶ್ನೆ ಸವಾಲಾಗಿರುವ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಆದ್ಯತೆ ಕನ್ನಡದ ಉಳಿವಿಗೆ ಮುಖ್ಯವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಕನ್ನಡ ವಿರೋಧಿ ಶಿಕ್ಷಣ ಇಲಾಖೆ, ಇಲಾಖೆಯಲ್ಲಿ ನೌಕರರಶಾಹಿ ಆಡಳಿತ ನಡೆಸುತ್ತಿರುವುದರಿಂದಕನ್ನಡ ಸಂಕಷ್ಟದಲ್ಲಿದೆ. ರಾಜ್ಯ ಶಿಕ್ಷಣ ನೀತಿಯನ್ನು ಸರ್ಕಾರ ಬಹಿರಂಗಪಡಿಸಿ ಚರ್ಚೆಗೆ ಅವಕಾಶ ಮಾಡಿ, ಖಚಿತವಾಗಿ ರೂಪಿಸಬೇಕು ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.ಕನ್ನಡ ಮಾಧ್ಯಮ ಜಾರಿಯಾಗಿ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕನ್ನಡಪರ ಚಿಂತನ ವೇದಿಕೆ ಭಾನುವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಚಿಂತನ ಸಮಾವೇಶದಲ್ಲಿ ಆಶಯನುಡಿ ನುಡಿದ ಪ್ರೊ.ಬರಗೂರು, ರಾಜ್ಯದಲ್ಲಿರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಶಿಕ್ಷಣ ಇಲಾಖೆಯ ನೌಕರಶಾಹಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಬಾಗಿಲಿನಿಂದ ಅನುಷ್ಠಾನಗೊಳಿಸಲು ಹೊರಟಿದೆ. ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರದೆ, ಉಪಾಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿರುವುದು ಮಹಾನ್ ವಂಚನೆ ಎಂದು ಹೇಳಿದರು.ತಾವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಂದರ್ಭದಲ್ಲಿ ಜಾರಿಗೆ ಬಂದ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವೃತ್ತಿ ಶಿಕ್ಷಣದಲ್ಲಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಶೇಕಡ 5ರಷ್ಟು ಮೀಸಲಾತಿ ಜಾರಿಯಾಗಿದೆ. ಇದರಿಂದ ಇದೂವರೆಗೂ ಲಕ್ಷಾಂತರಜನ ಈ ಮೀಸಲಾತಿ ಸೌಲಭ್ಯ ಪಡೆದಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಗಳನ್ನು ಇಲ್ಲದಂತೆ ಮಾಡುವ ಕೆಪಿಎಸ್ ಶಾಲೆಗಳ ನೀತಿ ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತದೆ. ಹಳ್ಳಿಗಳ ಕಿರಿಯ ಪ್ರಾಥಮಿಕ ಶಾಲೆಗಳು ಕೇವಲ ಶಿಕ್ಷಣ ಕೇಂದ್ರಗಳಲ್ಲ, ಅವು ಸಾಂಸ್ಕೃತಿಕ ಕೇಂದ್ರ. ರಾಷ್ಟ್ರೀಯ, ನಾಡಹಬ್ಬಗಳನ್ನು ಆಚರಿಸುವ ಕೇಂದ್ರ, ಪ್ರಾಥಮಿಕ ಶಾಲೆಗಳನ್ನು ಉಳಿಸಿಕೊಂಡು ಕೆಪಿಎಸ್ ಮಾಡಲು ಸಾಧ್ಯವಿಲ್ಲವೆ ಚರ್ಚೆ, ಚಿಂತನೆ ನಡೆಯದಿದ್ದರೆಅದರ ಬಹುಮುಖತೆ ಹೇಗೆ ಅರ್ಥವಾಗುತ್ತದೆ ರಾಜ್ಯ ಶಿಕ್ಷಣ ಇಲಾಖೆ ತಮಗೆ ತೋಚಿದಂತೆ ಶಿಕ್ಷಣ ನೀತಿಜಾರಿ ಮಾಡುತ್ತಿದ್ದಾರೆಎಂದು ಬೇಸರ ವ್ಯಕ್ತಪಡಿಸಿದರು.ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಕನ್ನಡ ವಿಷಯ ಬೋಧಿಸಲು ಕನ್ನಡ ವಿಷಯದಲ್ಲಿ ಪದವಿ ಪಡೆದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನಮ್ಮಲ್ಲಿ ಕನ್ನಡ ಭಾಷೆಯ ಕಡೆಗಣನೆ ಆಗುತ್ತಿದೆ. ಸಮಾಜ ವಿಷಯ ಶಿಕ್ಷಕರು ಕನ್ನಡ ಬೋಧಿಸುವಂತಹ ಸ್ಥಿತಿಗೆ ತಂದಿದ್ದಾರೆ. ಕನ್ನಡವನ್ನು ಭಾಷೆಯಾಗಿ ಕಲಿಯಲೂ ಪ್ರೋತ್ಸಾಹವಿಲ್ಲ. ಕನ್ನಡ ಶಾಲೆಗಳನ್ನು ಉನ್ನತಿಕರಿಸಬೇಕು. ಕನ್ನಡ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಅಸ್ಮಿತೆ. ಅದನ್ನು ಉಳಿಸಲು ಕನ್ನಡಪರವಾದ ಶಿಕ್ಷಣ ನೀತಿರೂಪಿಸುವ ಅಗತ್ಯವಿದೆ. ಇದಕ್ಕಾಗಿ ಸಂಘಟನಾತ್ಮಕ, ರಚನಾತ್ಮಕ ಹೋರಾಟ ಮಾಡಬೇಕಾಗಿದೆ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಕರೆ ನೀಡಿದರು.ಕನ್ನಡ ಮೀಸಲಾತಿ ಕಲಿಕೆ-ಬಳಕೆ ಕೃತಿ ಬಿಡುಗಡೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮನೆ, ಬರಗೂರು ರಾಮಚಂದ್ರಪ್ಪನವರು ಇಲ್ಲಿ ಮಾಡಿದ ಭಾಷಣವನ್ನು ವಿಧಾನಸೌಧದಲ್ಲಿ ಮಾಡಿದ್ದರೆ ಕನ್ನಡ ಉಳಿಯುತ್ತಿತ್ತು ಎಂದರು.ಇಂದು ಶಿಕ್ಷಣದ ಮೂಲ ಆಶಯವೇ ಬದಲಾಗಿದೆ. ಬಂಡವಾಳ ಶಾಹಿಗಳು ಮಕ್ಕಳನ್ನು ವಿನಿಮಯದ ಸರಕು ಮಾಡಿಕೊಂಡಿದ್ದಾರೆ. ಸಾಹಿತಿಗಳು, ಚಿಂತಕರ ಮಾತು ಕೇಳಿಸಿಕೊಳ್ಳದಷ್ಟು ಶಿಕ್ಷಣ ಇಲಾಖೆಯ ಅಧಿಕಾರಿ ಶಾಹಿ ಬದಲಾಗಿದೆ. ಶಿಕ್ಷಣ ವ್ಯವಸ್ಥೆಗೆ ವೈಚಾರಿಕತೆಯ ಸ್ಪರ್ಶ ನೀಡಲು ಹೋರಾಡಿದ ಬರಗೂರು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿ ಸುವರ್ಣಕಾಲ.ಕನ್ನಡ ಮಾಧ್ಯಮ ಮೀಸಲಾತಿಯನ್ನು ಶೇಕಡ 5ರಿಂದ 20ಕ್ಕೆ ಏರಿಸಬೇಕಾಗುತ್ತದೆಎಂದರು.ತಾವು ಪ್ರಾಧಿಕಾರದ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಗೆ ಸಂಬAಧ ನಾಲ್ಕು ವರದಿಗಳನ್ನು ಸಲ್ಲಿಸಿದ್ದು ಅವುಗಳ ಬಗ್ಗೆಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ ಎಂದ ಡಾ.ಪುರುಷೋತ್ತಮ ಬಿಳಿಮನೆ, ದೇವಸ್ಥಾನ, ಕೋಟೆಗಳು ಪರಂಪರೆಯ ಭಾಗವಾದರೆ ನೂರು ವರ್ಷ ಪೂರೈಸಿದ ಶಾಲೆಗಳೂ ಪರಂಪರೆಯ ಭಾಗವಲ್ಲವೆ. ಆ ಶಾಲೆಗಳನ್ನು ಪರಂಪರೆ ಶಾಲೆಗಳೆಂದು ಗುರುತಿಸಿ, ಅಭಿವೃದ್ಧಿಪಡಿಸಿ, ಶಾಲೆಯಲ್ಲಿ ಓದಿದ ಮಹನೀಯರ ಹೆಸರು ಇಟ್ಟು ಪ್ರೇರಣೆ ಆಗಬೇಕು ಎಂದರು.ಸಮಾರಂಭದ ಅಧ್ಯಕ್ಷತೆವಹಿಸಿದ್ದ ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಕನ್ನಡ ಉಳಿವಿಗೆ ಸರ್ಕಾರದ ಮಟ್ಟದಲ್ಲಿ ನೀತಿನಿಯಮಗಳನ್ನು ರೂಪಿಸಬೇಕಾಗಿದೆ.ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಸಭೆ ನಡೆಸಿ ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಮಂಡನೆ ಮಾಡಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡೋಣ. ಆಡಳಿತದ ಲೋಪದೋಷಗಳನ್ನು ಚರ್ಚಿಸಿ ಸರಿಪಡಿಸೋಣ ಎಂದರು.ಬರಗೂರು ರಾಮಚಂದ್ರಪ್ಪನವರು ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರಾಗುತ್ತಾರೆ. ಆಗ ಅವರ ಕನ್ನಡಪರ ಅಭಿಪ್ರಾಯಗಳನ್ನು ಸರ್ಕಾರಕ್ಕೆ ನೇರ ತಲುಪಿಸಲು ಸಾಧ್ಯವಾಗುತ್ತದೆ ಎಂದಕೆ. ಎನ್. ರಾಜಣ್ಣ,  ಶಿಕ್ಷಣ ಸಚಿವರು, ಇಲಾಖೆ ಮುಖ್ಯಸ್ಥರೊಂದಿಗೆ ಕನ್ನಡ ಕಾಳಜಿಯ ಚಿಂತಕರ ಸಮಿತಿ ರಚನೆ ಆಗಬೇಕು ಎಂದ ಸಲಹೆ ನೀಡಿದರು.ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ್ ಬಿಳಿಮನೆ ಅಧ್ಯಕ್ಷತೆಯಲ್ಲಿ ನಡೆದ ಸಂವಾದಗೋಷ್ಠಿಯಲ್ಲಿ ಕನ್ನಡ ಮಾಧ್ಯಮ ಮೀಸಲಾತಿಯ ಫಲಾನುಭವಿಗಳು ಅನುಭವ, ಅಭಿಪ್ರಾಯ ಹಂಚಿಕೊಂಡರು. ಲೇಖಕ ಡಾ.ರಾಜಪ್ಪ ದಳವಾಯಿ ಸಂವಾದ ಸಮನ್ವಯಕಾರರಾಗಿದ್ದರು. ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಡಾ.ಎಚ್.ನಟರಾಜ್, ಮನೋವೈದ್ಯಾಧಿಕಾರಿ ಡಾ.ಶಮಾ ಬಿ.ಆರ್, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವಲ ನಾಯ್ಕ್, ವೈದ್ಯಾಧಿಕಾರಿ ಡಾ.ಟಿಪ್ಪು ಸುಲ್ತಾನ್, ಶಿಕ್ಷಣ ಇಲಾಖೆ ಅಧಿಕಾರಿಕೆ.ಎಸ್. ಮಧುಸೂದನ್ ಅವರು ಕನ್ನಡ ಮಾಧ್ಯಮ ಮೀಸಲಾತಿಯ ಅನುಭವ ಹಂಚಿಕೊಂಡರು.ಸಂಘಟಕರಾದ ಹೆಚ್.ಗೋವಿಂದಯ್ಯ, ಎ. ರಾಮಚಂದ್ರಪ್ಪ, ಅಶ್ವತ್ಥನಾರಾಯಣ ಗುಟ್ಟೆ, ನಾಗಭೂಷಣ್ ಬಗ್ಗನಡು, ಡಾ.ಶೈಲಾ ನಾಗರಾಜ್, ಡಾ.ಓ.ನಾಗರಾಜು, ಸತೀಶ್ ಸಿ.ಜಿ, ರಂಗದಾಸಪ್ಪ, ಎಂ.ಜೆ.ಶಿವಣ್ಣ ಸೇರಿದಂತೆ ವಿವಿಧ ಸಾಹಿತಿಗಳು, ಚಿಂತಕರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST