`ಮಹಿಪತಿದಾಸರು” ಚಿತ್ರ ವೀಕ್ಷಿಸಿದ ಗಣ್ಯರು “ಕಾಖಂಡಕಿ ಶ್ರೀ ಮಹಿಪತಿದಾಸರು” ಚಿತ್ರವನ್ನು ಮಧುಸೂದನ ಹವಾಲ್ದಾರ್ ನಿರ್ದೇಶನ ಮಾಡಿದ್ದಾರೆ.
ಡಾ||ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಕಥೆ ಸಂಭಾಷಣೆ ಬರೆದಿದ್ದು, ಚಿತ್ರಕಥೆ ಜೆ.ಎಂ.ಪ್ರಹ್ಲಾದ್ ಹಾಗೂ ಮಧುಸೂದನ್ ಹವಾಲ್ದಾರ್ ಅವರದು. ಇತ್ತೀಚೆಗೆ ಈ ಚಿತ್ರದ ಟೆಕ್ನಿಕಲ್ ಶೋ ನಡೆಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ, ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ , ಸುಧೀಂದ್ರ ವೆಂಕಟೇಶ್, ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಚಿತ್ರವನ್ನು ವೀಕ್ಷಿಸಿದರು. ನನ್ನ ನಿರ್ದೇಶನದ ಐದನೇ ಹರಿದಾಸರ ಚಿತ್ರ ಇದು. ಮಾತಾಂಬುಜ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ವಿಜಯಾನಂದ ನಾಯಕ್ ಮಹಿಪತಿದಾಸರ ಪಾತ್ರ ನಿರ್ವಹಣೆ ಮಾಡಿದ್ದಾರೆ. ಪುರಂದರದಾಸರ ಹಾಗೂ ಕನಕದಾಸರ ನಂತರ ದಾಸ ಪರಂಪರೆಗೆ ಬಂದವರು ಮಹಿಪತಿ ದಾಸರು. ಭಾಸ್ಕರ್ ಗುರೂಜಿ ಹಾಗೂ ಶಾನುಂಗ (ಸೂಫಿ ಸಂತ) ಇವರ ಪರಿಣಾಮ ಹೆಚ್ಚು ಬೀರಿ, ಅದಿಲ್ ಷಾ ನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಇವರು ಮಹಿಪತಿದಾಸರಾಗುತ್ತಾರೆ. ಯೋಗ ಸಾಧನೆಯಿಂದ ಹರಿದಾಸರಾದ ಮಹಿಪತಿದಾಸರ ಪುಣ್ಯಸ್ಥಳವಿರುವುದು ವಿಜಾಪುರ ಜಿಲ್ಲೆಯ ಕಾಖಂಡಕಿಯಲ್ಲಿ. ಈಗಾಗಲೇ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅಕ್ಟೋಬರ್ ವೇಳೆಗೆ ತೆರೆಗೆ ಬರಲಿದೆ. ಯಾವುದೇ ಒಂದು ಐತಿಹಾಸಿಕ ಹಾಗೂ ಒಬ್ಬ ಸಾಧಕರ ಕುರಿತು ಸಿನಿಮಾ ಮಾಡಿದಾಗ ಮೊದಲು ಟೆಕ್ನಿಕಲ್ ಶೋ ಆಯೋಜಿಸಿ ಸಂಬಂಧಪಟ್ಟವರಿಗೆ ಹಾಗೂ ಗಣ್ಯರಿಗೆ ತೋರಿಸುವುದು ವಾಡಿಕೆ. ಏಕೆಂದರೆ ಚಿತ್ರದಲ್ಲಿ ಏನಾದರೂ ಸ್ವಲ್ಪ ಬದಲಾವಣೆ ಇದ್ದರೆ ಮಾಡಿಕೊಳ್ಳಬಹುದು ಎಂದು. ಆದರೆ ನಮ್ಮ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಆಡಿದ ಪ್ರಶಂಸೆಯ ನುಡಿಗಳನ್ನು ಕೇಳಿ ನನ್ನ ಮನತುಂಬಿ ಬಂತು ಎನ್ನುತ್ತಾರೆ ನಿರ್ದೇಶಕ ಮಧುಸೂದನ್ ಹವಾಲ್ದಾರ್.