ಬೆಂಗಳೂರು: ಅಂತರರಾಷ್ಟ್ರೀಯ ವಿದ್ಯಮಾನಗಳ ವಿಭಾಗದಲ್ಲಿ `ಅತ್ಯುತ್ತಮ ತನಿಖಾ ಪತ್ರಕರ್ತ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಬಿನೀಶ್ ಥಾಮಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಇಂಟರ್ನ್ಯಾಷನಲ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ ತಿಳಿಸಿದೆ.ಇಂಟರ್ನ್ಯಾಷನಲ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ ಸಂಸ್ಥೆಯು ಯುನೈಟೆಡ್ ನೇಷನ್ ಮತ್ತು ಇಂಟರ್ನಾ್ಯಷನಲ್ ಬಾರ್ ಅಸೋಸಿಯೇಷನ್ ಮಾನ್ಯತೆ ಪಡೆದ ಸಂಸ್ಥೆಯಾಗಿದೆ.
ಆಗಸ್ಟ್ 21ರಂದು ಹೊರಡಿಸಿರುವ ಪ್ರಕಟಣೆಯಲ್ಲಿ, ಸಂಸ್ಥೆಯ ತೀರ್ಪುಗಾರರ ಸಮಿತಿಯು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಬಿನೀಶ್ ಥಾಮಸ್ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದೆ.ಸಾರ್ವಜನಿಕ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಪತ್ರಿಕೋದ್ಯಮದಲ್ಲಿ ಅವರು ತೋರಿರುವ ಬದ್ಧತೆ, ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಹಿತಾಸಕ್ತಿ, ಜಾಗತಿಕ ಬೆದರಿಕೆಗಳು ಹಾಗೂ ಹೊಣೆಗಾರಿಕೆಗೆ ಸಂಬಂಧಿಸಿದ ವಿಷಯಗಳ ಕುರಿತು ನಡೆಸಿರುವ ವರದಿಗಾರಿಕೆಯನ್ನು ಸಂಸ್ಥೆ ಪ್ರಶಂಸಿಸಿದೆ. ಪತ್ರಿಕೋದ್ಯಮದ ನೈತಿಕ ಮೌಲ್ಯ ಹಾಗೂ ಸಮಗ್ರತೆಯನ್ನು ಕಾಪಾಡಿಕೊಂಡಿರುವುದು ಅವರ ವಿಶೇಷತೆ ಎಂದು ಹೇಳಿದೆ.ಸಂವೇದನಾಶೀಲ ವಿಷಯ ಗಳನ್ನು ವರದಿ ಮಾಡುವಾಗ ಪಕ್ಷಪಾತಕ್ಕೆ ಆದ್ಯತೆ ನೀಡದೆ, ವಿಷಯದ ಸತ್ಯಾಸತ್ಯತೆ ಹಾಗೂ ಸಾರ್ವಜನಿಕ ಹಿತಕ್ಕೆ ಹೆಚ್ಚಿನ ಮಹತ್ವ ನೀಡಿರುವುದು ಗಮನಾರ್ಹ. ಖಾಸಗಿ ಬದುಕಿನ ವಿಚಾರಗಳನ್ನು ದುರುಪಯೋಗಪಡಿಸಿಕೊಳ್ಳದೆ, ವದಂತಿ ಅಥವಾ ಬೆದರಿಕೆಯ ಸಾಧನವಾಗಿ ಪತ್ರಿಕೋದ್ಯಮವನ್ನು ಬಳಸದೆ ಅವರು ವೃತ್ತಿಪರ ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಭಾರತ ಹಾಗೂ ಆಫ್ರಿಕಾ ಖಂಡದಲ್ಲಿ ಪತ್ರಕರ್ತರ ರಕ್ಷಣೆಗೆ ಬಲವಾದ ಕಾನೂನುಗಳ ಅಗತ್ಯ ಕುರಿತು ಅವರು ನಡೆಸುತ್ತಿರುವ ನಿರಂತರ ಪ್ರಯತ್ನಗಳು, ಪತ್ರಕರ್ತರ ಸುರಕ್ಷತೆ, ಗೌರವ ಹಾಗೂ ವೃತ್ತಿಪರ ಸ್ವಾತಂತ್ರ್ಯ ಕ್ಕಗಿ ಮಾಡುತ್ತಿರುವ ನಿರಂತರ ಪ್ರಯತ್ನವನ್ನು ಸಂಸ್ಥೆ ಗುರುತಿಸಿದೆ.ಬಿನೀಶ್ ಥಾಮಸ್ ಅವರ ಬದ್ಧತೆ, ಧೈರ್ಯ, ಪ್ರಾಮಾಣಿಕತೆ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಇಂಟರ್ನ್ಯಾಷನಲ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ ಅಧ್ಯಕ್ಷ ಡಾ. ನೆಮ್ ಸಿಂಗ್ ಪ್ರೇಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು 2027ರ ಜನವರಿಯಲ್ಲಿ ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು, ಪ್ರಶಸ್ತಿ ಸ್ವೀಕರಿಸಲು ಬಿನೀಶ್ ಥಾಮಸ್ ಅವರನ್ನು ಆಹ್ವಾನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.