ಮಾಗಡಿ: ತಾಲ್ಲೂಕಿನ ಬ್ಯಾಲದಕೆರೆ ಬಳಿಯಲ್ಲಿರುವ ಎಸ್.ಎಚ್.ಜಲ್ಲಿ ಕ್ರಷರ್ ಲಾರಿ ಚಾಲಕರು ಮನಸ್ಸೋಇಚ್ಚೆ ಅತಿವೇಗವಾಗಿ ಲಾರಿ ಮತ್ತು ಟ್ರಾಕ್ಟರ್ ಚಲಾಯಿಸುವ ಪರಿಣಾಮ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳ ಪ್ರಾಣ ಲೆಕ್ಕಕ್ಕಿಲ್ಲದಂತಾಗಿದೆ ಎಂದು ಖಂಡಿಸಿ ದಲಿತ ಯುವ ಮುಖಂಡರಾದ ಬ್ಯಾಲದಕೆರೆ ಚಿಕ್ಕರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಚಿಕ್ಕರಾಜು ಮಾತನಾಡಿ ಎಸ್.ಎಚ್.ಜಲ್ಲಿ ಕ್ರಷರ್ ಸಾಕಷ್ಟು ವರ್ಷಗಳಿಂದ ಇಲ್ಲಿ ನಡೆಯುತ್ತಿದ್ದು ಕ್ರಷರ್ ಆರಂಭಿಸುವ ಮುನ್ನಾ ಸರಕಾರದ ಎಲ್ಲಾ ನಿಭಂದನೆಗಳನ್ನು ಒಪ್ಪಿ ಇಲ್ಲಿ ಪ್ರಾರಂಭಿಸಲಾಯಿತು.ಆದರೆ ಇದೀಗ ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಈ ಭಾಗದ ಜನರ ಬದುಕು ಮತ್ತು ಶಾಲಾ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.
ಇದರಿಂದ ಗ್ರಾಮದ ಜನರು ಬದುಕಲು ಹಿಂಸೆಯಾಗುತ್ತಿದೆ.ನಮ್ಮಗಳ ತಾಳ್ಮೆಗೂ ಮಿತಿ ಇದ್ದು ಈ ರೀತಿಯ ದೌರ್ಜನ್ಯ ದಬ್ಬಾಳಿಕೆ ಹೀಗೆ ಮುಂದುವರೆದರೆ ಜಿಲ್ಲಾಧಿಕಾರಿ ಉಪ ವಿಭಾಗಾಧಿಕಾರಿಗಳನ್ನು ಪಾರ್ಟಿ ಮಾಡಿ ಹೈ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.
ರಸ್ತೆಯು ಕಿರಿದಾಗಿದ್ದು ಕ್ರಷರ್ ಲಾರಿ ಟ್ರಾಕ್ಟರ್ ಚಾಲಕರು ಅತಿ ವೇಗವಾಗಿ ಪಾದಚಾರಿಗಳು ಶಾಲಾ ಮಕ್ಕಳ ಮೇಲೆಯೇ ಬರುತ್ತಾರೆ.ಇದರಿಂದ ತಪ್ಪಿಸಿಕೊಳ್ಳಲು ರಸ್ತೆ ಬದಿಯ ಮುಳ್ಳಿನ ಗಿಡಗಳ ಬೀಳುವ ದುಸ್ಥಿತಿ ಬಂದೊದಗಿದೆ.ಕಳೆದ ಶುಕ್ರವಾರ ಮೂರು ಶಾಲಾ ವಿದ್ಯಾರ್ಥಿಗಳು ಲಾರಿ ಚಾಲಕನ ಅಹಂಕಾರದಿಂದ ಅಪಾಯದಿಂದ ಪಾರಾಗಿದ್ದಾರೆ.ಇದನ್ನು ಪ್ರಶ್ನಿಸಿದರೆ ವಿಡಿಯೋ ಫೋಟೋ ಇದೆಯಾ ಎಂಬ ಉಡಾಫೆ ಉತ್ತರವನ್ನು ನೀಡುತ್ತಾರೆ.
ಇದು ಒಂದು ಭಾಗವಾದರೆ ಕ್ರಷರ್ ನ ಭಾರೀ ಸಿಡಿಮದ್ದಿನಿಂದಾಗಿ ಸಾಕಷ್ಟು ಮನೆಗಳ ಮೇಲ್ಚಾಚಣಿ ಮತ್ತು ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.ಇಲ್ಲಿ ಸಾಕಷ್ಟು ಸಾವುಗಳು ಸಂಭವಿಸಿದರೂ ಸಹ ವ್ಯವಸ್ಥಿತವಾಗಿ ಮುಚ್ಚಿಹಾಕಲಾಗುತ್ತಿದೆ.ಕ್ರಷರ್ ಮಾಲೀಕರು ಹಣದ ಆಮಿಷವೊಡ್ಡಿ ಗ್ರಾಮಸ್ಥರ ನಡುವೆ ಒಡಕು ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಗ್ರಾಪಂ ವತಿಯಿಂದ ಹಸುಗಳು ನೀರು ಕುಡಿಯಲು ಕಟ್ಟಿರುವ ತೊಟ್ಟಿಯನ್ನು ಮಾಲೀಕರು ಬಳಸುತ್ತಿದ್ದು ಇದನ್ನು ಪ್ರಶ್ನಿಸಿದರೆ ವಾಟರ್ ಮ್ಯಾನ್ ಮೇಲೆ ಹಲ್ಲೆ ಮಾಡುತ್ತಾರೆ.ಲಾರಿಗಳ ಓಡಾಟದಿಂದ ರಸ್ತೆಯಲ್ಲ ಗುಂಡಿಗಳಾಗಿವೆ.ಇದರಿಂದ ಓಡಾಡಲು ತೊಂದರೆಯಾಗಿದೆ.
ಇದು ಹೀಗೆ ಮುಂದುವರೆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಚಿಕ್ಕರಾಜು ಎಚ್ಚರಿಕೆ ನೀಡಿದರು.ಗ್ರಾಮದ ಮುಖಂಡ ಹೊನ್ನಸ್ವಾಮಿ ಮಾತನಾಡಿ ಕ್ರಷರ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ಬಹುತೇಕ ಹೊರ ರಾಜ್ಯದವರಾಗಿದ್ದು ಇವರ ಬಗ್ಗೆ ಯಾವುದೇ ಮಾಹಿತಿಯಿಲ್ಲ.ಕ್ರಷರ್ ಲಾರಿ ಟ್ರಾಕ್ಟರ್ ಗಳಲ್ಲಿ ಜಲ್ಲಿ ಡಸ್ಟ್ ಸಾಗಿಸುವಾಗ ದೂಳು ಏಳದಂತೆ ನೀರು ಟಾರ್ಪಲ್ ಮುಚ್ಚದೇ ಓಡಾಡುವುದರಿಂದ ಗ್ರಾಮಸ್ಥರು ಮತ್ತು ಸಮೀಪದಲ್ಲಿಯೇ ಸಿದ್ದಗಂಗಾ ಪ್ರೌಢಶಾಲೆ ಇದ್ದು ಅವರಿಗೂ ತೊಂದರೆಯಾಗುತ್ತಿದೆ.ಇದು ಕಣ್ಣಿದ್ದೂ ಜಾಣ ಕುರುಡನ್ನು ಕ್ರಷರ್ ಮಾಲೀಕರು ಮೆರೆಯುತ್ತಿದ್ದಾರೆ ಎಂದು ಹೊನ್ನಸ್ವಾಮಿ ಆಕ್ರೋಷ ವ್ಯಕ್ತಪಡಿಸಿದರು.
ಉಡಾಫೆ ಉತ್ತರ:ಕ್ರಷರ್ ಉಸ್ತುವಾರಿ ಪುಟ್ಟಸ್ವಾಮಿಸ್ಥಳಕ್ಕಾಗಮಿಸಿ ಅತಿ ವೇಗವಾಗಿ ಲಾರಿ ಚಲಾಯಿಸುವ ಚಾಲಕರು ಇಲ್ಲಿ ಬಂದರೆ ಪ್ರತಿಭಟನಾಕಾರಾರು ಹಲ್ಲೆ ನಡೆಸುತ್ತಾರೆ ಎಂಬ ಭಯದಿಂದ ಸ್ಥಳಕ್ಕಾಗಮಿಸಿಲ್ಲ. ಕೆಲಸ ಮಾಡುವ ಕೆಲಸಗಾರರ ಮಾಹಿತಿ ಕಚೇರಿಗೆ ರೈಟರ್ ಬೀಗ ಹಾಕಿಕೊಂಡು ಹೋಗಿದ್ದಾನೆ.ಲಾರೀ ಚಾಲಕನನ್ನು ಆಮೇಲೆ ಕರೆಯಿಸಿ ಕ್ಷಮೆ ಯಾಚಿಸುತ್ತೇನೆ ಎಂಬ ಉಡಾಫೆ ಉತ್ತರ ನೀಡಿದರು.ಗ್ರಾಪಂ ಸದಸ್ಯೆ ತೇಜಶ್ವಿನಿ,ಪ್ರತಿಭಟನಾಕಾರರಾದ ಶ್ರೀನಿವಾಸ್, ಮಹಾದೇವ್, ವೆಂಕಟೇಶ್, ಶ್ರೀನಿವಾಸ್, ಬಿ.ವಿ.ನಾಗರಾಜು, ನವೀನ್, ಮಲ್ಲಿಕಾರ್ಜುನ, ಸಿದ್ದಪ್ಪ, ಶಿವಲಿಂಗಯ್ಯ, ಯತೀಶ್, ಸೀನಪ್ಪ, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರಿದ್ದರು.