ತಿ.ನರಸೀಪುರ: ಪುರಾತನ ಪ್ರಸಿದ್ಧವಾದ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಶನಿವಾರ ಶ್ರೀ ಸಂತಾನಗೋಪಾಲ ಸ್ವಾಮಿಯವರ ಬ್ರಹ್ಮೋತ್ಸವ ವಿಜೃಂಭಣೆಯಿಂದ ನಡೆಯಿತು.ಸೋಸಲೆ ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ವಿವಿಧ ಬಣ್ಣದ ವಸ್ತ್ರ ಪಟಗಳು ಹಾಗೂ ಹೂವುಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ಶ್ರೀ ರುಕ್ಮಿಣಿ ಅಮ್ಮನವರ ಸಮೇತ ಪೀಠಾರೋಹಣಗೊಂಡು ವಾಲಿ ವಾಲಾಡಿ ಬರುತ್ತಿದ್ದ ಶ್ರೀ ಸಂತಾನಗೋಪಾಲ ಸ್ವಾಮಿಯವರ ದಿವ್ಯ ರಥೋತ್ಸವದ ವೈಭವವನ್ನು ಕಣ್ತುಂಬಿಕೊAಡ ನೆರೆದಿದ್ದ ಭಕ್ತರು, ಹಣ್ಣು ಧವನವನ್ನ ಅರ್ಪಿಸಿ, ಧೂಪ ಹಾಕಿ ಇಷ್ಟಾರ್ಥವನ್ನು ಸಿದ್ಧಿಸುವಂತೆ ಪ್ರಾರ್ಥಿಸಿದರು.ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಗಳು, ದೇವರ ದರ್ಶನ ನಡೆದವು. ರಥೋತ್ಸವದ ಪೂರ್ವದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಂಟಪೋತ್ಸವ ನಡೆಯಿತು. ಪರಾಭವ ನಾಮ ಸಂವತ್ಸರ ಉತ್ತರಾಯಣ ಮೇಷ ಶುಕ್ಲ ಬರಲಿ ನಕ್ಷತ್ರದ ಶುಭದಿನದಂದು ದಿವ್ಯ ಮುಹೂರ್ತದಲ್ಲಿ ರಥದಲ್ಲಿ ಪೀಠಾರೋಹಣ ನೆರವೇರಿಸಲಾಯಿತು. ರಥೋತ್ಸವಕ್ಕೂ ಮೊದಲು ಸಂತಾನ ಪ್ರಾಪ್ತಿಗೆ ಹರಕೆ ಹೋತ್ತಿದ್ದ ನೊಂದಾಯಿತ ದಂಪತಿಗಳಿಗೆ ರಥ ಪ್ರಸಾದವನ್ನು ವಿತರಿಸಲಾಯಿತು. ಬಳಿಕ ವಿದ್ಯುಕ್ತವಾಗಿ ರಥೋತ್ಸವ ಆರಂಭಗೊAಡಿತು.
ಶ್ರೀ ಸಂತಾನ ಗೋಪಾಲ ಸೇವಾಭಿವರ್ಧೀನಿ ಸಭಾ ಅಧ್ಯಕ್ಷ ಕೆ.ಆರ್.ಸಂತಾನ ಮಾತನಾಡಿ, ಧಾರ್ಮಿಕ ವೈಶಿಷ್ಟತೆಯನ್ನ ಹೊಂದಿರುವ ಶ್ರೀ ಸಂತಾನಗೋಪಾಲ ಸ್ವಾಮಿಯವರ ಬ್ರಹ್ಮೋತ್ಸವ ಗ್ರಾಮದ ಕೆಲಸಮುದಾಯಗಳ ಸಹಕಾರದಿಂದ ಅಚ್ಚುಕಟ್ಟಾಗಿ ಆಯೋಜನೆಗೊಳ್ಳುತ್ತದೆ. ಮಕ್ಕಳಾಗದ ದಂಪತಿಗಳಿಗೆ ಸಂತಾನ ಪ್ರಾಪ್ತಿಗಾಗಿ ರಥಪ್ರಸಾದವನ್ನ ನೀಡುವುದು ಪ್ರಸಿದ್ಧಿಯನ್ನ ಪಡೆದಿದೆ. ಈ ಹಿನ್ನೆಲೆಯಲ್ಲಿ ಕಳೆದ ಐದಾರು ದಿನಗಳಿಂದ ದೇವಾಲಯದಲ್ಲಿ ನೋಂದಾಯಿತ ದಂಪತಿಗಳ ಹೆಸರಿನಲ್ಲಿ ಹೋಮ ಹವನವನ್ನು ನೆರವೇರಿಸಲಾಗಿದೆ ಎಂದು ತಿಳಿಸಿದರು.ಅರ್ಚಕರಾದ ಕೇಶವ ಭಟ್ಟ ಸೇರಿದಂತೆ ಅರುಣ್ ಕುಮಾರ್, ಕಾರ್ತಿಕ್ ಹಾಗೂ ಶೇಷಾದ್ರಿ ಭಟ್ಟ ನೇತೃತ್ವದ ತಂಡ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಕೃಷ್ಣಾಪುರ ಗ್ರಾಮದ ವಿವಿಧ ಸಮುದಾಯಗಳ ಯಜಮಾನರು, ಮುಖಂಡರು ಹಾಗೂ ಭಕ್ತರು ಇದ್ದರು.
ವಿಜೃಂಭಣೆಯಿಂದ ನಡೆದ ಶ್ರೀಸಂತಾನಗೋಪಾಲಸ್ವಾಮಿ ಬ್ರಹ್ಮೋತ್ಸವ



