ಕನಕಪುರ: ಬೆಳ್ಳಂಬೆಳಗ್ಗೆ ರೆಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಒಂಟಿ ಸಲಗ ದಾಳಿ ಮಾಡಿದ್ದು ಘಟನೆಯಲ್ಲಿ ರೈತನ ಎಡ ತೋಳು ಮತ್ತು ಬಲ ಕಾಲಿಗೆ ತೀವ್ರತರವಾದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ತಾಲೂಕಿನ ಕಸಬಾ ಹೋಬಳಿಯ ಟಿ. ಬೇಕುಪ್ಪೆ ಗ್ರಾಮದ ಶಿವಲಿಂಗಯ್ಯ ಅಲಿಯಾಸ್ ರಾಮಚಂದ್ರ (45) ಕಾಡಾನೆ ದಾಳಿಯಿಂದ ಗಾಯಗೊಂಡ ರೈತ ಎಂದು ತಿಳಿದು ಬಂದಿದೆ.
ಶ್ರೀನಿವಾಸನಹಳ್ಳಿ ಗ್ರಾಮದ ಸಮೀಪದ ರೇಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಒಂಟಿ ಸಲಗ ರೈತನ ಮೇಲೆ ದಾಳಿ ನಡೆಸಿದೆ.ರೈತ ಶಿವಲಿಂಗಯ್ಯ ಎಂದಿನಂತೆ ತನ್ನ ರೇಷ್ಮೆ ತೋಟಕ್ಕೆ ತೆರಳಿ ಅಲ್ಲಿ ಕೆಲಸ ಮಾಡುತ್ತಿದ್ದ ಸೋಮವಾರ ಬೆಳ್ಳಂ ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ರೇಷ್ಮೆ ತೋಟ ಕ್ಕೆ ತೆರಳಿದಾಗ ಅಲ್ಲೇ ಇದ್ದ ಒಂಟಿ ಸಲಗ ರೈತನ ಮೇಲೆ ದಾಳಿ ನಡೆಸಿದೆ.
ರೈತನ ಚೀರಾಟ ಕೇಳಿದ ಅಕ್ಕಪಕ್ಕದ ರೈತರು ನೆರವಿಗೆ ಬಂದಾಗ ಕಾಡಾನೆ ಸ್ಥಳದಿಂದ ಕಾಲ್ಕಿತ್ತಿದೆ ಈ ಘಟನೆಯಲ್ಲಿ ರೈತನ ಎಡ ತೋಳು ಮತ್ತು ಬಲ ಕಾಲಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ.ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕೋಡಿಹಳ್ಳಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಅಂತೋಣಿ ರೇಗೋ ಹಾಗು ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ತಕ್ಷಣ ಗಾಯಗೊಂಡ ರೈತನಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯ ವಾಗಿದೆ.ಈ ಸಂಬಂಧ ಕೋಡಿಹಳ್ಳಿ ವನ್ಯಜೀವಿ ವಲಯಾರಣ್ಯದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಚಿಕಿತ್ಸೆ ಹಾಗು ಪರಿಹಾರವನ್ನು ನಿಡುವ ಭರವಸೆ ನೀಡಿದ್ದಾರೆ.