ಬೆಂ.ಗ್ರಾ.ಜಿಲ್ಲೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳ ಸಬಲೀಕರಣ ಘಟಕದ ಸಂಯುಕ್ತ ಆಶ್ರಯದಲ್ಲಿ ಹಣಬೆ ಗ್ರಾಮ ಪಂಚಾಯತಿಯಲ್ಲಿ `ವರದಕ್ಷಿಣೆ’ ಒಂದು ಸಾಮಾಜಿಕ ಪಿಡುಗು ವಿಷಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ರೂಪಶ್ರೀ ಅವರು, ವರದಕ್ಷಿಣೆ ಎಂಬುದು ಸಮಾಜಕ್ಕೆ ಕಂಟಕವಾಗಿರುವ ಸಾಮಾಜಿಕ ಪಿಡುಗಾಗಿದ್ದು, ಇದರ ಪರಿಣಾಮ ಅನೇಕ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದೆ. ಮದುವೆಯ ಸಂದರ್ಭದಲ್ಲಿ ವಧುವಿನ ಕುಟುಂಬವು ವರ ಅಥವಾ ಅವರ ಕುಟುಂಬಕ್ಕೆ ಹಣ, ಆಸ್ತಿ, ಒಡವೆ ಅಥವಾ ಅಮೂಲ್ಯ ವಸ್ತುಗಳನ್ನು ನೀಡುವುದನ್ನು ವರದಕ್ಷಿಣೆ ಎಂದು ಕರೆಯಲಾಗುತ್ತದೆ ಎಂದರು.
ಭಾರತ ಸರ್ಕಾರವು ವರದಕ್ಷಿಣೆ ತಡೆಯುವ
ಉದ್ದೇಶದಿಂದ 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು, ವರದಕ್ಷಿಣೆ ಕೇಳುವುದು, ನೀಡುವುದು ಅಥವಾ ಸ್ವೀಕರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕಿರುಕುಳಗಳಿಗೆ ಐದು ವರ್ಷ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ವರದಕ್ಷಿಣೆ ವಿರುದ್ಧ ಗ್ರಾಮ ಮಟ್ಟದಿಂದಲೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮವೂ ಆಯೋಜಿಸಲಾಯಿತು ಎಂದು ತಿಳಿಸಿದರು.
ಮಿಷನ್ ಶಕ್ತಿ ಸಂಯೋಜಕ ರಾಜಶೇಖರ ಎನ್., ಮಾತನಾಡಿ 1961ರಲ್ಲಿ ಜಾರಿಗೆ ಬಂದ ವರದಕ್ಷಿಣೆ ನಿಷೇಧ ಕಾಯ್ದೆಯ ಬಗ್ಗೆ ಇಂದಿಗೂ ಅರಿವು ಮೂಡಿಸುವ ಅಗತ್ಯ ಇರುವುದೇ ವಿಷಾದನೀಯ ಸಂಗತಿ. ಗ್ರಾಮೀಣ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಜೊತೆಗೆ ವರದಕ್ಷಿಣೆ, ಬಾಲ್ಯ ವಿವಾಹ, ಮರ್ಯಾದೆ ಹತ್ಯೆ, ಲಿಂಗಾನುಪಾತ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಹಣಬೆ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಮೇಲ್ವಿಚಾರಕಿ ಜಯಲಕ್ಷಿ÷್ಮ, ಅಣಬೆ ವೃತ್ತ ಅಕೌಂಟೆAಟ್ ಸುರೇಶ್, ಮಹಿಳಾ ಸಬಲೀಕರಣ ಘಟಕದ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
`ವರದಕ್ಷಿಣೆ’ ಒಂದು ಸಾಮಾಜಿಕ ಪಿಡುಗು-ಜಾಗೃತಿ ಕಾರ್ಯಕ್ರಮ



