ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ಖದೀಮರು ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಬರೋಬ್ಬರಿ 700 ಗ್ರಾಂ ಚಿನ್ನಾಭರಣ,60 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಪೀಣ್ಯದಲ್ಲಿ ನಡೆದಿದೆ.
ಪೀಣ್ಯದ ಹೆಚ್ಎಂಟಿ ಲೇಔಟ್ನ ಎಸ್.ಎನ್.ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿ ಮಾಲೀಕ ಮನೋಹರ್ ಎಂಬುವವರ ಮನೆಗೆ ನುಗ್ಗಿದ ಖದೀಮರು ಕೃತ್ಯ ಎಸಗಿದ್ದಾರೆ. ಘಟನೆ ವೇಳೆ ಉದ್ಯಮಿ ಪುತ್ರ ರೂಪೇಶ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ 7.30ರ ಸುಮಾರಿಗೆ, ಮನೆಯಲ್ಲಿ ಉದ್ಯಮಿ ಮನೋಹರ್ ಅವರು ಇಲ್ಲದ ಸಮಯದಲ್ಲಿ 5 ರಿಂದ 6 ಮಂದಿ ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿ ಕೇವಲ ಮನೋಹರ್ ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಮಾತ್ರ ಇದ್ದರು. ಉದ್ಯಮಿ ಮನೋಹರ್ ರವರ ಅಣ್ಣ ತಮ್ಮಂದಿರ ನಡುವೆ ಹಲವು ವಿಚಾರಗಳಲ್ಲಿ ಕಲಹವಿದೆ.
ಹೀಗಾಗಿ ಅದೇ ವಿಚಾರಕ್ಕೆ ಪೊಲೀಸರು ಬಂದಿರುವುದಾಗಿ ರೂಪೇಶ್ ಅಂದುಕೊಂಡಿದ್ದಾರೆ. ಆದರೆ ಮನೆಯೊಳಗೆ ಬರುತ್ತಿದ್ದಂತೆ ಪೊಲೀಸರ ವೇಶದಲ್ಲಿ ಬಂದಿದ್ದ ಖದೀಮರು ಏಕಾಏಕಿ ಡ್ರಾಗರ್ ಹಾಗೂ ಮಚ್ಚುಗಳನ್ನು ತೋರಿಸಿ ಹೆದರಿಸಿದ್ದಾರೆ. ನಂತರ ರೂಪೇಶ್ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ನಗದು ಲೂಟಿ ಮಾಡಿದ್ದಾರೆ.
700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗದು ದರೋಡೆ ಮಾಡಿ ಕೃತ್ಯದ ಬಳಿಕ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಸಮೇತ ಎಸ್ಕೇಪ್ ಆಗಿದ್ದಾರೆ. ಉದ್ಯಮಿ ಪುತ್ರ ರೂಪೇಶ್ಗೆ ಘಟನೆ ವೇಳೆ ಸಣ್ಣ ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.