ಹೊಸಕೋಟೆ: ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಜನರು ಕೃಷಿಆಧಾರಿತ ಜೀವನಕ್ರಮವನ್ನು ಅನುಸರಿಸುತ್ತಿದ್ದಾರೆ. ಇಂತಹ ರೈತರ ಬಾಳನ್ನು ಬೆಳಗಿಸಲು ವಿಧ್ಯಾರ್ಥಿಗಳು ಪಣತೊಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ವಿಧ್ಯಾರ್ಥಿಗಳಿಗೆ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಲಕ್ಕೊಂಡಹಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾ ಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರು, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಧ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ 90 ದಿನಗಳ “ಕೃಷಿ ವೈಶಿಷ್ಟ್ಯ” ತಂತ್ರಜ್ಞಾನಗಳ ಅಳವಡಿಕೆ, ಕೃಷಿ ಮೇಳ, ವಸ್ತು ಪ್ರದರ್ಶನ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ ಪಡೆದ ನಂತರ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಚಿಂತನೆ ನಡೆಸಿ ಉದ್ಯೋಗ ಸೃಷ್ಟಿ ಮಾಡುವ ಕಾರ್ಯ ಮಾಡಬೇಕಾಗಿದೆ. ನಮ್ಮ ದೇಶಕ್ಕೆ ಉದ್ಯೋಗ ಹುಡುಕಿಕೊಂಡು ಹೋಗುವ ಯುವಕರ ಅಗತ್ಯವಿಲ್ಲ ಉದ್ಯೋಗ ಸೃಷ್ಟಿ ಮಾಡುವ ಒಂದು ಶಕ್ತಿಯಾಗಿ ನೀವೆಲ್ಲರೂ ಹೊರಹೊಮ್ಮಬೇಕು.
ಅಂತರ್ಜಲ ಕುಸಿತ, ಪ್ರಕೃತಿ ವಿಕೋಪ, ಕ್ರಿಮಿಕೀಟಗಳ ಹಾವಳಿಯಂತಹ ಈ ಎಲ್ಲಾ ಸಂಕಷ್ಟದ ಮಧ್ಯೆ ಯಾವುದೇ ಒಂದು ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಬೆಳೆ ಬೆಳೆಯುತ್ತಿರುವ ರೈತರ ಬಾಳನ್ನು ಬೆಳಗಿಸಿ ಅವರನ್ನು ಸದೃಡರಾಗಿಸಲು ಒಗ್ಗೂಡಿ ಶ್ರಮಿಸಬೇಕು. ಇದರಿಂದ ಮಾತ್ರ ಶಿಕ್ಷಣ ಸಾರ್ಥಕವಾಗಲಿದೆ. ರೈತರು ಸಹ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ರಂಗದಲ್ಲಿ ಬದಲಾವಣೆಯ ಹಾದಿ ತುಳಿಯಬೇಕಿದೆ ಎಂದು ತಿಳಿಸಿದರು.
ಇನ್ನೆರಡು ದಿನಗಳಲ್ಲಿ ಬರ ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗಲಿದೆ. ಹಿಂದಿನ ಸರ್ಕಾರಗಳಲ್ಲಿ ಅಧಿಕಾರಿಗಳು ಬರ ಪರಿಹಾರ ವೀಕ್ಷಣೆ ಮಾಡಿ ಅವರು ನೀಡಿದ ವರದಿಯ ಆಧಾರದ ಮೇಲೆ ಬರ ಪರಿಹಾರದ ಹಣ ತಲುಪುತ್ತಿತ್ತು. ಆದರೆ ಬದಲಾವಣೆಯ ಹಾದಿ ತುಳಿದಿರುವ ರಾಜ್ಯ ಸರಕಾರ ರೈತರು ಫಹಣಿಯಲ್ಲಿ ಘೋಷಣೆ ಮಾಡಿರುವ ಬೆಳೆಗಳ ಆಧಾರದ ಮೇಲೆ ಇಳುವರಿ ಭೂಮಿಯ ಮಾಹಿತಿ ಪಡೆದು ನೇರವಾಗಿ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮೆ ಮಾಡಲಿದೆ. ಅನ್ನದಾತನ ಜೀವನ ಸುಧಾರಣೆಗೆ ರಾಜ್ಯ ಕಾಂಗ್ರೆಸ್ ಸರಕಾರ ಬದ್ಧವಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಸಂಶೋದಕರು ಗಳಾದ ಡಾ.ನಟರಾಜ್, ಡಾ.ಎಂ.ಬಿ. ಪ್ರಕಾಶ್,ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಲಕ್ಕೊಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ದೇವ ರಾಜ್, ಉಪಾಧ್ಯಕ್ಷೆ ಪಾರ್ವತಮ್ಮ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮುನಿರಾಜು, ಕೃಷಿ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಸೊಣ್ಣಹಳ್ಳಿಪುರ ಶ್ರೀನಿವಾಸಮೂರ್ತಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆನಂದ್, ಹಸಿಗಾಳ ರಾಧಾಕೃಷ್ಣ, ಮುಖಂಡರಾದ ಲಕ್ಕೊಂಡಹಳ್ಳಿ ಮಂಜುನಾಥ್, ವಾಬಸಂದ್ರ ದೇವರಾಜ್, ಕಮ್ಮಸಂದ್ರ ದೇವರಾಜ್, ಗಣೇಶ್ಪ್ರಸಾದ್ ಹಾಗೂ ಗ್ರಾಪಂ ಸದಸ್ಯರು, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು .