ಬೆಂಗಳೂರು: ಇಂದು ಬೆಳಿಗ್ಗೆ ನಿಗದಿತ ಸಮಯಕ್ಕೆ ವಿಧಾನಸಭೆ ಕಲಾಪ ಆರಂಭಗೊಂಡು ಮೊದಲಿಗೆ ನೂತನ ಸಚಿವರ ಪರಿಚಯ ಅಥವಾ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯ ಕೈಗೆತ್ತಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಕೆಲ ಕಾಲ ಜಿಜ್ಞಾಸೆ ನಡೆಯಿತು. ಸ್ಪೀಕರ್ ಸ್ಥಾನದಲ್ಲಿ ಹಂಗಾಮಿ ಸ್ಪೀಕರ್ ಮೊದಲಿಗೆ ನೂತನ ಸಚಿವ ಪರಿಚಯ ಹಾಗೂ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ವಿಷಯವನ್ನು ಕೈಗೆತ್ತಿಕೊಳ್ಳಲು ಮುಂದಾದರು.ಈ ಸಂದರ್ಭದಲ್ಲಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್ ಅಶೋಕ್, ಕಲಾಪದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಡೆಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಸಂತಾಪ ಸೂಚಕ ಮತ್ತು ಸಚಿವರ ಪರಿಚಯ ಎರಡನ್ನು ಒಟ್ಟಿಗೆ ಕೈಗೆತ್ತಿಕೊಳ್ಳುವುದು ಸರಿಯಲ್ಲ. ಒಂದೆಡೆ ಸಚಿವರ ಪರಿಚಯ ಖುಷಿಯ ವಿಚಾರ. ಮತ್ತೊಂದೆಡೆ ಅಗಲಿದ ಗಣ್ಯರಿಗೆ ಸಂತಾಪ ದುಃಖದ ವಿಷಯ. ಎರಡನ್ನು ಒಟ್ಟಿಗೆ ಸೇರಿಸುವುದು ಸರಿಯಾದ ಕ್ರಮವಲ್ಲ. ಮೊದಲಿಗೆ ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಳ್ಳಿ. ಸಚಿವರ ಪರಿಚಯ ಬೇಕಾದರೆ ನಾಳೆ ಮಾಡಬಹುದುಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಪಕ್ಷದವರ ಭಾವನೆಗಳಿಗೆ ನಾವು ಗೌರವ ಕೊಡುತ್ತೇವೆ. ಅವರ ಭಾವನೆಯಂತೆ ಮೊದಲಿಗೆ ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಳ್ಳಿ. ನಾಳೆ ಬೇಕಾದರೆ ಸಚಿವರ ಪರಿಚಯ ಮಾಡಬಹುದು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರು ತಾವು ಕೈಗೊಂಡ ಕ್ರಮದ ಬಗ್ಗೆ ಮಾತನಾಡಿ, ಸದನಕ್ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಮೊದಲಿಗೆ ಸಂತಾಪ ಸೂಚಕನಿರ್ಣಯವನ್ನು ಕೈಗೆತ್ತಿಕೊಂಡರು. ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಚಿವರಾದ ಡಿ.ಸುಧಾಕರ್, ವೆಂಕಟರಮಣ್ಣಪ್ಪ ಸೇರಿದಂತೆ ಹೆಸರಾಂತ ಹಿನ್ನೆಲೆ ಗಾಯಕಿ ಎಸ್.ಜಾನಕಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ದೇವೇಗೌಡ ಹಾಗೂ ಇತರೆ ಗಣ್ಯರ ಸೇವಾಕಾರ್ಯವನ್ನು ತಿಳಿಸಿ ಸಂತಾಪ ಸೂಚಕ ಮಂಡಿಸಿದರು. ಸಭಾಧ್ಯಕ್ಷರು ಮಂಡಿಸಿ ನಿರ್ಣಯದ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರರು ಮಾತನಾಡಿ, ಮೃತರ ಸೇವಾಕಾರ್ಯಗಳನ್ನು ಸ್ಮರಿಸಿದರು.