ಮೈಸೂರು: ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಮೈಸೂರಿನಿಂದ ಹೊರಗೆ ತೆರಳಬೇಡಿ ಎಂದು ಪ್ರಕರಣದಲ್ಲಿ ಆರೋಪಿಯಾಗಿರುವ ಮನೋರಂಜನ್ ಕುಟುಂಬಕ್ಕೆ ಗುಪ್ತಚರ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಮೈಸೂರಿನ ವಿಜಯನಗರದಲ್ಲಿರುವ ಆರೋಪಿ ಮನೋರಂಜನ್ ಕುಟುಂಬಸ್ಥರಿಗೆ ಈಗ ಸಂಕಷ್ಟ ಎದುರಾಗಿದೆ. ನಿನ್ನೆಯಷ್ಟೇ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದ ಗುಪ್ತಚರ ಇಲಾಖೆ ಅಧಿಕಾರಿಗಳು ಅವರನ್ನು ಮೈಸೂರು ಬಿಟ್ಟು ಎಲ್ಲೂ ತೆರಳದಂತೆ ಸೂಚನೆ ನೀಡಿದ್ದಾರೆ.
ನಮ್ಮ ಸೂಚನೆ ಬರುವವರೆಗೂ ಮೈಸೂರಿನಿಂದ ಹೊರಗಡೆ ತೆರಳಬೇಡಿ. ತೀರಾ ತುರ್ತು ಇದ್ದರೆ ನಮ್ಮ ಗಮನಕ್ಕೆ ತಂದು ಅನುಮತಿ ಮೇಲೆ ತೆರಳಿ.ಮನೆಗೆ ಯಾವ ಸಂಬಂಧಿಕರಿಗೂ ಸದ್ಯಕ್ಕೆ ಬಾರದಂತೆ ಸೂಚನೆ ಕೊಡಿ. ಪ್ರತಿ ನಿತ್ಯ ನಿಮಗೆ ಬರುವ ಕರೆಗಳ ಮಾಹಿತಿಯನ್ನು ಕಡ್ಡಾಯವಾಗಿ ನಮಗೆ ತಿಳಿಸಿ.
ಎಲ್ಲಾ ಕರೆಗಳನ್ನು ತಪ್ಪದೆ ಸ್ವೀಕರಿಸಬೇಕು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಮನೋರಂಜನ್ ಕುಟುಂಬದವರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.ಮುಂದಿನ ಸೂಚನೆ ನೀಡುವ ವರೆಗೂ ಮನೆಯಲ್ಲಿರುವ ಯಾವುದೇ ಪತ್ರಿಕೆ, ಹಳೆಯ ಪುಸ್ತಕ ಮಾರಾಟ ಮಾಡಬೇಡಿ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.