ನೆಲಮಂಗಲ: ಕನ್ನಡ ಬಾವುಟಗಳನ್ನು ಕಟ್ಟಿಕೊಂಡು ಹೊರಟ ಬೈಕ್ ರ್ಯಾಲಿ, ದೊಡ್ಡ ದೊಡ್ಡ ಬಾವುಟಗಳನ್ನು ಗಾಳಿಯಲ್ಲಿ ಹಾರಾಡಿಸುತ್ತಾ ಹೊರಟ ಆಟೋ ರ್ಯಾಲಿ, ಕನ್ನಡ ಧ್ವಜಗಳನ್ನು ಸಿಂಗರಿಸಿಕೊಂಡು ಹೊರಟ ಕಾರ್ ರ್ಯಾಲಿ, ಹೊಳೆಯುವ ಬೆಳ್ಳಿರಥದಲ್ಲಿ ತಾಯಿ ಭುವನೇಶ್ವರಿ ದೇವಿಯೊಂದಿಗೆ ತಾಲೂಕಿಗೆ ಕೀರ್ತಿ ತಂದ ಇಬ್ಬರು ಕವಿಗಳ ಮೆರವಣಿಗೆ, ಹೆಗಲ ಮೇಲೆ ಕನ್ನಡ ವಸ್ತ್ರವನ್ನು ಹಾಕಿಕೊಂಡು ಭುವನೇಶ್ವರಿ ದೇವಿಗೆ ಜೈಕಾರ ಹಾಕುತ್ತಾ ಹೊರಟ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಮತ್ತು ಶ್ರೀ ಅನ್ನಪೂರ್ಣೇಶ್ವರ ಬಳಗದ ಕಾರ್ಯಕರ್ತರ ಪಡೆ.
ಇದು ಕರ್ನಾಟಕ ರಕ್ಷಣಾ ವೇದಿಕೆಯ(ಶಿವರಾಮೇಗೌಡ ಬಣ) ವತಿಯಿಂದ ನಗರದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ವೈಭವದ ದೃಶ್ಯ. ಕಾಲ್ದಳ, ಅಶ್ವದಳ, ಗಜದಳಗಳೊಂದಿಗೆ ವಿಜಯದುಂಧುಬಿ ಮೊಳಗಿಸಲು ಜೈಕಾರ ಹಾಕುತ್ತ ಹೊರಟ ಸೈನ್ಯ ಪಡೆಯಂತೆ ಆ ದೃಶ್ಯ ಕಾಣುತ್ತಿತ್ತು.
ನಗರದ ಬೀದಿ, ಬೀದಿಗಳಲ್ಲಿ ಹೋರಾಟ ಮೆರವಣಿಗೆಗೆ ಜನರಿಂದ ಅಭೂತಪೂರ್ವವಾದ ಸ್ವಾಗತ. ಮನೆಗಳ ಮುಂದೆ ಜನಗಳು ನೆರೆದು, ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಮೆರೆದು, ಬೆಳ್ಳಿರಥಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ, ಕೈ ಮುಗಿಯುವುದರ ಮೂಲಕ, ತಾಯಿ ಭುವನೇಶ್ವರಿಗೆ ತಮ್ಮ ಗೌರವ ಸಮರ್ಪಿಸಿದರು. ತಮ್ಮ ಮೊಬೈಲ್ಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು ಸಂಭ್ರಮಿಸಿದರು.
ಶ್ರೀ ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು, ನಗರದ ಕವಾಡಿ ಮಠದಲ್ಲಿ ಅನ್ಯ ಭಾಷೆಯ ನಾಮಫಲಕಗಳಿಗೆ ಸಾಂಕೇತಿಕವಾಗಿ ಮಸಿ ಬಳಿಯುವುದರ ಮೂಲಕ, ಬೆಳ್ಳಿ ರಥದ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಕನ್ನಡದ ಅಸ್ಮಿತೆ ಬಗ್ಗೆ ತಿಳಿಸಿದರು.
ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಸುರೇಶ್ ಅವರು ಮಾತನಾಡಿ “ಅನ್ಯ ರಾಜ್ಯದಿಂದ ಬಂದು ನೆಲೆಸಿರುವ ಅನ್ಯ ಭಾಷೆಯ ಜನರು ಇಲ್ಲಿನ ಭಾಷೆ ಕಲಿಯದೆ ಕನ್ನಡದ ಅಳಿವಿಗೆ ಕಾರಣರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಎಲ್ಲಿ ನೋಡಿದರೂ ಇತರೆ ಭಾಷೆಯ ನಾಮಪಲಕಗಳೇ ಕಾಣಿಸುತ್ತಿವೆ. ಹಾಗಾಗಿ ಸಾಂಕೇತಿಕವಾಗಿ ಮಸಿ ಬಳಿಯುವುದರ ಮೂಲಕ ಈ ಅನ್ಯಾಯವನ್ನು ಪ್ರತಿಭಟಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಮಳಿಗೆಗಳ ನಾಮಫಲಕಗಳನ್ನು ಕನ್ನಡದಲ್ಲಿಯೇ ಇರುವಂತೆ ಮಾಡಲಾಗುವುದು. ಹಾಗೆಯೇ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಹಂಬಲದಿಂದ ಇಬ್ಬರು ಕವಿಗಳನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುತ್ತಿದ್ದೇವೆ. ಇವರು ನಮ್ಮ ತಾಲೂಕಿಗೆ ಕಿರೀಟವಿದ್ದಂತೆ” ಎಂದರು.
ಬೆಳ್ಳಿರಥದಲ್ಲಿ ತಾಯಿ ಭುವನೇಶ್ವರಿ ದೇವಿಯೊಂದಿಗೆ ತಾಲೂಕಿಗೆ ಕೀರ್ತಿ ತಂದ ಲೇಖಕ, ಚಿಂತಕ, ಅಂಕಣಕಾರ ಮಣ್ಣೆ ಮೋಹನ್ ಮತ್ತು ಗಜಲ್ ಕವಿ ಸಿರಾಜ್ ಅಹಮದ್ ಅವರನ್ನು ಮೆರವಣಿಗೆ ಮಾಡಲಾಯಿತು. ಇನ್ಸ್ಪೆಕ್ಟರ್ ಶಶಿಧರ್, ಕರವೇ ಗೌರವಾಧ್ಯಕ್ಷ ವಕೀಲ ರಘುನಾಥ್, ಶ್ರೀ ಅನ್ನಪೂರ್ಣೇಶ್ವರಿ ಬಳಗದ ಅಧ್ಯಕ್ಷರಾದ ರಂಗಸ್ವಾಮಿ ಟಿ, ಸದಸ್ಯರಾದ ಕನಕರಾಜು, ಜಿ ಎನ್, ರುದ್ರಸ್ವಾಮಿ ಬಿ, ದ್ರುವಕುಮಾರ್, ಮಧು, ರಮೇಶ್, ಲೋಕೇಶ್, ರಾಮಕೃಷ್ಣ, ವಿನೋದ್, ಗಣೇಶ್, ಕಾಂತರಾಜ್, ಕೃಷ್ಣಮೂರ್ತಿ, ರಾಜ್ಯ ಒಕ್ಕಲಿಗರ ಒಕ್ಕೂಟದ ಮಧುಸೂದನ್, ಚನ್ನಪ್ಪ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್, ಸಮರ ಸೇನೆ ತಾಲೂಕು ಅಧ್ಯಕ್ಷ ಪುಟ್ಟಂಜನೇಯ, ಉಪಾಧ್ಯಕ್ಷ ನರಸಿಂಹಮೂರ್ತಿ, ಕಾರ್ಮಿಕ ಘಟಕದ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷ ರವಿಕುಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರೆಹಮಾನ್, ನಗರ ಘಟಕದ ಅಧ್ಯಕ್ಷ ಯಶವಂತ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಂಜು, ನಗರ ಅಧ್ಯಕ್ಷ ಚಂದ್ರಜೀರಾವ್, ಆಟೋ ಗಂಗಾಧರ್, ಪ್ರಕಾಶ್, ಮತ್ತಿತರರಿದ್ದರು.