ಮಂದಗೆರೆ ಕಲೆ-ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಮತ್ತು ಮಂದಗೆರೆ ಮಾಧ್ಯಮ ಕೇಂದ್ರ ಇವರ ಆಶ್ರಯದಲ್ಲಿ ವಿಶೇಷವಾದ ಸಂಕ್ರಾಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮತ್ತಿಕೆರೆ ಬಳಿಯ ಲಲಿತ ಕಲಾ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವು ಶ್ರೀಮತಿ ಅಪರ್ಣ ಪುರುಷೋತ್ತಮ ಹಾಗೂ ಕುಮಾರಿ ಸಾನಿಧ್ಯವರ ಸವಿ ಗಾನದೊಂದಿಗೆ ಆರಂಭವಾಗಿ ಈ ಸುಂದರ ಕಾರ್ಯಕ್ರಮ ನಂತರ ಸುಶ್ರಾವ್ಯವಾದ ಮ್ಯಾಂಡೋಲಿನ್ ವಾದನ ಕಾರ್ಯಕ್ರಮವನ್ನು ಮ್ಯಾಂಡೋಲಿನ್ ವಾದಕ ಡಾ. ಅನೂಪ್ ಪಿ. ಪುಷ್ಕರ್ ಅವರು ನಡೆಸಿಕೊಟ್ಟರು.
ಸಭಿಕರು ಮಂತ್ರ ಮುಗ್ಧರಾಗಿ ಸಂಗೀತದ ಆನಂದವನ್ನು ಸವಿದರು. ಸಂಗೀತ ಮತ್ತು ಸಾಹಿತ್ಯದ ಸಮ್ಮಿಳನದ ಕಾರ್ಯಕ್ರಮವನ್ನು ಅಖಿಲ ಭಾರತ ಬ್ರಾಹ್ಮಣ ಮಹಾಸಭೆಯ ಉಪಾಕ್ಷರು ಮತ್ತು ನಗರದ ಪ್ರತಿಷ್ಠಿತ ಜುಪಿಟರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ|| ಮುರಳಿಧರರವರ ಸಭೆಯನ್ನು ದೀಪ ಬೆಳಗಿಸುವದರ ಜೊತೆಗೆ ಆರಂಭಿಸಿದರು.
ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲ ಅತಿಥಿಗಳು ಕಲಾವಿದರು ಸಾಹಿತಿಗಳನ್ನು ಶ್ರೀ ಮಂದಗೆರೆ ರಾಮಕುಮಾರ್ , ಸಂಸ್ಥೆಯ ಸಂಸ್ಥಾಪಕರು ಸ್ವಾಗತಿಸಿದರು. ಸಂಭ್ರಮದ ಈ ಸಂಕ್ರಾಂತಿಯ ಔಚಿತ್ಯವನ್ನು ಡಾ. ಅಭಿಷೇಕ್ ಭಾರದ್ವಾಜ್ ಬಿ.ಕೆಯವರು ವೇದ ಘೋಷಗಳಿಂದ ಸಂಕ್ರಾಂತಿಯ ವಿಶೇಷತೆ ಮತ್ತು ಎಳನ್ನು ಬಳಸುವ ಔಚಿತ್ಯ ಅದರ ಉದ್ದೇಶ ಮೊದಲಾದ ಧಾರ್ಮಿಕ ವಿಚಾರಗಳನ್ನು ಸೊಗಸಾಗಿ ಹೇಳಿದರು.
ಸಂಕ್ರಮಣದ ಮಹತ್ವವನ್ನು ತಿಳಿಸುತ್ತಿರುವ ಸಮಯದಲ್ಲಿ ಎಲ್ಲರಿಗೂ ಎಳ್ಳು-ಬೆಲ್ಲವನ್ನು ಹಂಚಲಾಯಿತು. ಕೆ.ಆರ್ ಪೇಟೆಯ ವಕೀಲರು ಕುಮಾರ್ರವರು ಕೂಡ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಉದ್ಘಾಟಕರ ಭಾಷಣ ಮಾಡಿದ ಡಾ|| ಮುರಳಿಧರ ಅವರು ಈ ರೀತಿಯ ಸಾಂಸ್ಕೃತಿಕ ಹಾಗೂ ನಮ್ಮ ಸಂಪ್ರದಾಯ ಪರಿಚಿಸುವ ಕಾರ್ಯಕ್ರಮಗಳ ಅಗತ್ಯತೆಯನ್ನು ಹೇಳಿ ಆಯೋಜಕರಾದ ಶ್ರೀಯುತ ಮಂದಗೆರೆ ರಾಮಕುಮಾರ್ ಅವರ ಕಾರ್ಯವನ್ನು ಶ್ಲಾಘಿಸಿದರು.
ನಂತರ ಕವಿಗೋಷ್ಠಿ ಆರಂಭವಾಯಿತು ಆಯ್ದ 25 ಕವಿಗಳಿಗೆ ವಿಶೇಷ ವಿಷಯನ್ನು ಕೊಟ್ಟು ಮೊದಲೇ ಕವನವನ್ನು ಆಹ್ವಾನಿಸಲಾಗಿತ್ತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಗರದ ರಾಜರಾಜೇಶ್ವರಿನಗರದ ಕ.ಸಾ.ಪದ ಅಧ್ಯಕ್ಷರಾದ ಉದಂತ ಶಿವಕುಮಾರ್ ಅವರು ವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಅನಿತಾ ಪಿಕೆ, ಕಾರ್ಯದರ್ಶಿಗಳು ವಹಿಸಿದ್ದರು. ನಿರೂಪಣೆಯ ಭಾರವನ್ನು ಕವಯಿತ್ರಿ ಬಂತನಾಳ ಶೋಭಾರಾಣಿಯವರು ಬಹಳ ಸೊಗಸಾಗಿ ನಿರ್ವಹಿಸಿದರು.
ಶ್ರೀಮತಿ ಗೀತಾ ರಂಗನಾಥ್ ಅವರು ವನ್ಯ ವನ್ಯ ಜೀವಿಗಳ ಉಳಿಸೋಣ ಕವನ, ಶ್ರೀಮತಿ ಗೀತಾ ಕೈಲ್ಕೆರೆಯವರ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಕನ್ನಡನಾಡಿನ ಹಿರಿಮೆಯ ಕವನ, ಶ್ರೀಮತಿ ಪಾರ್ವತಿ ಕಾರಂತ್ ನಾರಿ ವಿಶ್ವಕ್ಕೆ ಮಾದರಿ ಎಂಬ ವಿಷಯದ ಹೆಣ್ಣೆಂದರೆ ಎಂಬ ಸುಂದರ ಕವನವನ್ನು, ಶ್ರೀಮತಿ ಅಪರ್ಣಾದೇವಿಯವರು ಶಾಲೆಯ ಮಹತ್ವವನ್ನು ಸಾರುವ ಶಾಲೆಯ ದೇಗುಲ ಎಂಬ ಕವನವನ್ನು, ಶ್ರೀಮತಿ ನಳಿನಾ ದ್ವಾರಕಾನಾಥ್ ಅವರು ಮನುಷ್ಯನಲ್ಲಿ ಆತ್ಮಾಭಿಮಾನ ಇರಬೇಕಾದ ಕುರಿತಾದ ಆತ್ಮಾಭಿಮಾನ ಕವನವನ್ನು, ಶ್ರೀಮತಿ ರುಕ್ಮಿಣಿ ಎಸ್ ನಾಯರ್ ಅವರು ಮಾತೃ ಭಾಷೆ ಹಾಗೂ ಕನ್ನಡಾಭಿ ಮಾನದ ಕುರಿತಾದ ಭಾಷಾಭಿಮಾನ ಕವನವನ್ನು, ಶ್ರೀಮತಿ ರಮಾ ಸುದರ್ಶನ್ ಅವರು ಕವಿಎತೆಯೆಂದರೆ ಎಂಬ ಕವಿತೆಯ ಕುರಿತಾದ ಸೊಗಸಾದ, ಶ್ರೀಮತಿ ಮಧುರಾ ಗಾಂವ್ಕರ್ ಅನ್ನದಾತನಾದ ರೈತನ ಕೊಡುಗೆಯ ಬಗಗೆ ಸುಂದರವಾದ ಕವಿತೆಯ ವಾಚನ ಮಾಡಿದರು.
ಶ್ರೀಮತಿ ಶೃತಿ ಮಧುಸೂದನ್ ಅವರು ಸೈನಿಕರ ನುಡಿ ನಮನ ವೀರಪುತ್ರರ ಮರುಹುಟ್ಟು, ಶ್ರೀಮತಿ ಮಾಲಾ ಪ್ರಸಾದ್ ಅವರ ತುತ್ತಿನ ಮಹತ್ವ , ನಾರಾಯಣ ಸ್ವಾಮಿಯವರು ಬಾಲ ಕಾರ್ಮಿಕರ ಬವಣೆಯ ಕುರಿತು ಮಾರ್ಮಿಕ ಕವನವನ್ನು, ಶ್ರೀಮತಿ ಮಾಧುರಿ ದೇಶಪಾಂಡೆ ಜಿವನದಲ್ಲಿ ಭರವಸೆಯ ಬದುಕಿನ ಕವಿತೆಯನ್ನು, ಶ್ರೀಮತಿ ದಿವ್ಯಜ ಬಾಲಾಜಿ ಎ.ಎಸ್ ಅವರು ಬಾಲ್ಯದ ಸವಿನೆನಪುಗಳ ಸುಂದರ ಕವನವನ್ನು ವಾಚಿಸಿದರು, ಚೇತನ್ ಸಾಗರ್ ಗುರುವಿನ ಹಿರಿಮೆಯ ಕುರಿತಾದ, ಶ್ರೀಮತಿ ಶ್ರೀದೇವಿ ಓಂಕಾರ್ ಸಂಬಂಧಗಳ ಮೌಲ್ಯದ ,
ಶ್ರೀಮತಿ ಲತಾ ಹೆಗಡೆ ಕೆ.ಎಸ್ ಸಂಕ್ರಾಂತಿ ಬಂತು ಎಂಬ ಸಂಕ್ರಾಂತಿಯ ಕವಿತೆಯಯನ್ನು ಶ್ರೀ ಅವಿನಾಶ್ ಭಟ್ ಪೆರ್ಮುಖ ಅವರು ಸುಗ್ಗಿ-ಹುಗ್ಗಿಯನ್ನವ ಕವಿತೆಯನ್ನು , ಶ್ರೀಮತಿಸುಮಾ ಪ್ರಸಾದ್ ಅನಕ್ಷರತೆಯ ಕತ್ತಲು ತೊಲಗಲಿ ಎಂಬ ಕವಿತೆಯನ್ನು, ಶ್ರೀಮತಿ ಪುಷ್ಪಾ ಎಚ್ ಡಿ ನಮಗೆ ಜನ್ಮ ನೀಡಿ ಪೋಷಿಸಿದ ಕುರಿತಾಗಿ ಹೆತ್ತವರ ಋಣ ಎಂಬ ಕವಿತೆಯನ್ನು ಮತ್ತು ಶ್ರೀಮತಿ ತೇಜಸ್ವಿನಿ ಕೇಸರಿಯವರು ಶ್ರೀಗಂಧದ ನಾಡು ಎಂದು ನಾಡಿನ ಕುರಿತಾದ ಕವನಗಳನ್ನು ವಾಚಿಸಿದರು.
ನಡು ನಡುವೆ ಅತಿಥಿಗಳ ಸನ್ಮಾನ, ಮ್ಯಾಂಡೋಲಿನ್ ವಾದನ, ಶ್ರೀ ಕುಮಾರ್ ವಕೀಲರು ಕೆ.ಆರ್ ಪೇಟೆ ಇವರ ಏಕಪಾತ್ರಾಭಿನಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೊಗಸಾದ ಕಾರ್ಯಕ್ರಮವು ನಡೆಯಿತು. ಭೋಜನದ ನಂತರ ಸಣ್ಣ ಮಕ್ಕಳು ಏಕಪಾತ್ರಾಭಿನಯವನ್ನು ಮಾಡಿದರು ನಂತರ ಕವಿಗೋಷ್ಠಿಯ ಅಧ್ಯಕ್ಷರಾದ ಉದಂತ ಶಿವಕುಮಾರ್ರವರು ಕವಿ ಗೋûಷ್ಠಿಯ ಅತ್ಯುತ್ತಮ ಮೂರು ಜನ ಕವಿಗಳ ಕವಿತೆಯ ಬಗೆಗೆ ಮಾತನಾಡಿ ಹೇಗೆ ಹಳೆಯ ಕಾಲದ ಕವಿಗಳು ಮತ್ತು ಪ್ರಸ್ತುತ ಇಂದಿನ ಕವಿಗಳ ಕವನಗಳನ್ನು ಓದಿ ಕವನಗಳನ್ನು ಬರೆಯ ಬೇಕು ಹಾಗೂ ಗೇಯ ರೂಪದಲ್ಲಿ ಹಾಡಬಹುದಾದ ಕವನಗಳು ಮಹತ್ವವನ್ನು ಪಡೆಯುತ್ತದೆ ಎಂದು ಹೇಳಿದರು.
ಕವಿ ಗೋಷ್ಠಿಯಲ್ಲಿ ಮೊದಲನೆಯ ಬಹುಮಾನ ಶ್ರೀಮತಿ ಶೃತಿ ಮಧುಸೂಧನ್ಅವರ ವೀರಪುತ್ರರ ಮರುಹುಟ್ಟು ಎಂಬ ಸೈನಿಕರ ನುಡಿ ನಮನದ ಕವನಕ್ಕೆ, ಎರಡನೇ ಬಹುಮಾನವು ಬಾಲ ಕಾರ್ಮಿಕರ ಪರಿಸ್ಥಿತಿಯನ್ನು ಹೇಳುವ ನಾರಾಯಣ ಸ್ವಾಮಿಯವರ ಕವನಕ್ಕೆ ದೊರೆತರೆ ಮೂರನೆ ಬಹುಮಾನವು ಬಾಲ್ಯದ ಸವಿ ನೆನಪನ್ನು ಸಂಭ್ರಮಿಸುವ ಬಾಲ್ಯ ನೆನಪು ಕವಿತೆಗೆ ಶ್ರೀಮತಿ ದಿವ್ಯಜ ಬಾಲಾಜಿ ಎ ಎಸ್ ಅವರಿಗೆ ದೊರೆಯಿತು. ಇನ್ನೆರಡು ಅದೃಷ್ಟದ ಲಕ್ಕಿ ಡಿಪ್ ಬಹುಮಾನವು ಶ್ರೀಮತಿ ಅಪರ್ಣಾ ದೇವಿ ಹಾಗೂ ಮಧುರಾ ಗಾಂವ್ಕರ್ ಅವರಿಗೆ ದೊರೆಯಿತು. ಎಲ್ಲ ಕವಿಗಳ ಕವಿತೆಗಳೂ ಚೆನ್ನಾಗಿದೆ ಎಂದು ಹೇಳಿ ಎಲ್ಲರಿಗೂ ಅಧ್ಯಕ್ಷರು ಪ್ರೋತ್ಸಾಹಿಸಿದರು.
ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಸಹಕಾರ ಸಂಘದ ಅಧ್ಯಕ್ಷರೂ ಬಹುಮುಖ ಪ್ರತಿಭೆಯಾಗಿರುವ ಡಾ. ಅಂಬರೀಷ್ ಜಿ ರವರು ಕಾರ್ಯಕ್ರಮದ ಪೂರ್ಣ ಅವಧಿಯಲ್ಲಿದ್ದು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಸಂಸ್ಥೆಯ ಸದಸ್ಯತ್ವ ಅಭಿಯಾನದಲ್ಲಿ ಅನೇಕ ಜನರು ಸದಸ್ಯತ್ವ ಸ್ವೀಕಾರ ಮಾಡಿದರು. ಸಂಸ್ಥೆಯ ಕಾರ್ಯಕರ್ತರು, ಪದಾಧಿಕಾರಿಗಳು ಕವಿಗಳು ಹಾಗೂ ಸಂಗೀತಗಾರರನ್ನು ಸನ್ಮಾನಿಸಲಾಯಿತು.
-ಮಾಧುರಿ ದೇಶಪಾಂಡೆ, ಬೆಂಗಳೂರು