ಬೆಂಗಳೂರು: ರಾಜ್ಯಸಭೆ ನಾಲ್ಕು ಸ್ಥಾನಗಳಿಗೆ ಇಂದು ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದ್ದು, ಸೋಲುಗೆಲುವಿನ ಬಗ್ಗೆ ರಾಜಕೀಯ ವಲಯದಲ್ಲಿ ತಮ್ಮದೇ ಆದ ಲೆಕ್ಕಾಚಾರ ಹಾಕಲಾಗುತ್ತಿದೆ. ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಮೂರು ಪಕ್ಷಗಳ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಬಿಜೆಪಿ ವತಿಯಿಂದ ಕುಪೇಂದ್ರರೆಡ್ಡಿ ಕಣದಲ್ಲಿದ್ದು, ಅವರ ಸೋಲು ಗೆಲುವಿನ ಬಗ್ಗೆ ತೀವ್ರ ಕುತೂಹಲ ಉಂಟುಮಾಡಿದೆ. ಮೂರು ಪಕ್ಷಗಳವರು ತಮ್ಮ ಅಭ್ಯರ್ಥಿಗಳನ್ನು ಕಾಯ್ದಿಟ್ಟುಕೊಂಡು ತಾವಿದ್ದ ಹೋಟೆಲ್ಗಳಿಂದಲೇ ನೇರವಾಗಿ ಶಾಸಕರು ವಿಧಾನಸೌಧಕ್ಕೆ ಬಂದು ಮತದಾನ ನಡೆಯುತ್ತಿರುವಲ್ಲಿಗೆ ತೆರಳಿ ಮತ ಚಲಾಯಿಸಿದ್ದಾರೆ.
ಮಧ್ಯಾಹ್ನದ 12 ಗಂಟೆ ವೇಳೆಗೆ 112 ಶಾಸಕರು ಮತ ಚಲಾಯಿಸಿದ್ದರು ಎಂದು ಹೇಳಲಾಗಿದೆ. ಇಂದು ಸಂಜೆ ನಾಲ್ಕು ಗಂಟೆವರೆಗೂ ಮತದಾನ ನಡೆಯಲಿದ್ದು, 5 ಗಂಟೆಯಿಂದ ಮತ ಎಣಿಕೆಕಾರ್ಯ ನಡೆಯಲಿದೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದ್ದು, ಯಾರಿಗೆ ಹಿನ್ನೆಡೆ, ಮುನ್ನಡೆ ಎಂಬುದು ತಿಳಿಯಲಿದೆ.