ಬೆಳಗಾವಿ: ಇಂದಿನಿಂದ ಕುಂದಾನಗರಿ ಎಂದೇ ಪ್ರಸಿದ್ಧಿಯಾಗಿರುವ ಬೆಳಗಾವಿಯಲ್ಲಿ ವಿಧಾನಮಂಡಲದ ಕಲಾಪ ಆರಂಭಗೊಂಡಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಕಲಾಪದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಲಾಪದ ವೇಳೆ ಪ್ರತಿಪಕ್ಷಗಳು ಪ್ರಸ್ತಾಪ ಮಾಡುವ ವಿಷಯಗಳಿಗೆ ಉತ್ತರ ನೀಡಲು ಸರ್ಕಾರ ತಯಾರಿದೆ ಎಂದಿದ್ದಾರೆ.
ಈ ಬಾರಿಯ ಕಲಾಪದಲ್ಲಿ ಬಹುತೇಕ ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲಾಗುವುದು ಎಂದು ಸಹ ಅವರು ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ನಿನ್ನೆ ಪ್ರಕಟಗೊಂಡ ನಾಲ್ಕು ಚುನಾವಣಾ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಘೋಷಣೆಗಳ ಸಂಬಂಧ ಫಲಿತಾಂಶದಲ್ಲಿ ಪರಿಣಾಮ ಬೀರಲಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ತೆಲಂಗಾಣದಲ್ಲಿ ಬಂದ ಫಲಿತಾಂಶವೇನು ಎಂದು ಸುದ್ದಿಗಾರರ ಪ್ರಶ್ನೆಗೆ ತಿರುಗೇಟು ನೀಡಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿಯವರು ಸಹ ಗ್ಯಾರಂಟಿಗಳ ಘೋಷಣೆ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ಏನು ಇಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಬಡವರು, ಸಾಮಾನ್ಯರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಡವರ ಪರವಾಗಿರುವ ಕಾರ್ಯಕ್ರಮಗಳಿಗಾಗಿ ಗ್ಯಾರಂಟಿ ಹೆಸರಿಡಲಾಗಿದೆ ಎಂದು ತಿಳಿಸಿದರು.
ಸದನದಲ್ಲಿ ಬಿಜೆಪಿ-ಜೆಡಿಎಸ್ನವರು ಜಂಟಿ ಹೋರಾಟ ಮಾಡುತ್ತಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ, ಅವರು ಜಂಟಿಯಾಗಾದರೂ ಮಾಡಲಿ, ಯಾವರೀತಿಯಾದರೂ ಮಾಡಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ತಯಾರಿದ್ದೇವೆ. ಬಿಜೆಪಿಯವರು ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಆರು ತಿಂಗಳು ತೆಗೆದುಕೊಂಡಿದ್ದಾರೆ. ಅವರು ನಮಗೇನು ಹೇಳುವುದು ಎಂದು ವಾಗ್ದಾಳಿ ನಡೆಸಿದರು.