ಚಿಕ್ಕಬಳ್ಳಾಪುರ: ಕುಡಿಯುವ ನೀರಿನ ಪೂರೈಕೆಯಲ್ಲಿ ಯವುದೇ ಕಾರಣಕ್ಕೂ ಜಿಲ್ಲೆಯಲ್ಲಿ ವೆತ್ಯಯ ಆಗಬಾರದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ “ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶದ ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಕಂಡು ಬಂದರೆ ತುರ್ತು ಕ್ರಮವಾಗಿ ಕೂಡಲೆ “ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲು ಕ್ರಮ ವಹಿಸಬೇಕು. ಬೇಸಿಗೆಯ ತೀವ್ರತೆ ಹೆಚ್ಚುತ್ತಿದ್ದು, ಯಾವ ಕೊಳವೆ ಬಾವಿ ನೀರು ಯಾವ ಸಂದರ್ಭದಲ್ಲಿ ನಿಂತು ಹೋಗಲಿದೆ ಹೇಳಲಿಕ್ಕೆ ಆಗುವುದಿಲ್ಲ. ಆದ್ದರಿಂದ ಟ್ಯಾಂಕರ್ ಮೂಲಕವಾಗಲಿ ಅಥವಾ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸುವ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಆ ನಂತರ ಜಲಜೀವನ್ ಮಿಷನ್ ಯೋಜನೆಯಡಿ ಅಥವಾ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಅನುಮೋದನೆ ಪಡೆದುಕೊಂಡು ಕೊಳವೆ ಬಾವಿ ಕೊರೆದು ನೀರಿನ ಸಮಸ್ಯೆ ನೀಗಿಸಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯ್ತಿಗಳ ಕಾರ್ಯ ನಿರ್ವಹಣಾಧಿಕಾರಿಗಳು, ನಗರಾಡಳಿತ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ತಾಲ್ಲೂಕು ತಹಸೀಲ್ದಾರರು ಹೆಚ್ಚಿನ ನಿಗಾವಹಿಸಿ ದಿನ ನಿತ್ಯದ ನೀರಿನ ಪೂರೈಕೆ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.ಪ್ರಸ್ತುತ ಚಿಕ್ಕಬಳ್ಳಾಪುರ ತಾಲ್ಲೂಕಿನ ಕವರನಹಳ್ಳಿ, ಕಣಿತಹಳ್ಳಿ, ನಕ್ಕಲಹಳ್ಳಿ ಮತ್ತು ಮಧುರೇನಹಳ್ಳಿ. ಚಿಂತಾಮಣಿ ತಾಲ್ಲೂಕಿನ ಗೌಡನಹಳ್ಳಿ, ಶೆಟ್ಟಿಹಳ್ಳಿ, ಮಲ್ಕಪುರ ಮತ್ತು ಕೃಷ್ಣಮ್ಮನ ಹೊಸಹಳ್ಳಿ. ಬಾಗೇಪಲ್ಲಿ ತಾಲ್ಲೂಕಿನ ಚಾಮಲವಾರಿಪಲ್ಲಿ, ಯಲಗಲಪಲ್ಲಿ, ವೀರಾಪುರ, ಮಲ್ಲೆಪಲ್ಲಿ ಮತ್ತು ಗಂಗರೆಡ್ಡಿಪಲ್ಲಿ. ಶಿಡ್ಲಘಟ್ಟ ತಾಲ್ಲೂಕಿನ ವಲ್ಲಪ್ನಹಳ್ಳಿ, ಚೀಮಂಗಲ, ಹೇಮಾರ್ಲಹಳ್ಳಿ, ಜಂಗಮಕೋಟೆ, ಭಕ್ತರಹಳ್ಳಿ, ಪಲಿಚೆರ್ಲು, ತದೂರು ಮತ್ತು ಮುಗಲಪಡಿ. ಗೌರಿಬಿದನೂರು ತಾಲ್ಲೂಕಿನ ಸಿದ್ದೇನಹಳ್ಳಿ. ಗುಡಿಬಂಡೆ ತಾಲ್ಲೂಕಿನ ಚಿನ್ನಹಳ್ಳಿ ಸೇರಿದಂತೆ ಒಟ್ಟು 23 ಗ್ರಾಮಗಳಿಗೆ ಕುಡಿಯುವ ನೀರನ್ನು ಖಾಸಗಿ ಕೊಳವೆ ಬಾವಿಗಳ ಮಾಲೀಕರ ಸಹಕಾರ ಪಡೆದು ನೀರು ಪೂರೈಸಲಾಗುತ್ತಿದೆ. ಬಾಗೇಪಲ್ಲಿ ತಾಲ್ಲೂಕಿನ ಮಲ್ಲೆಪಲ್ಲಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಪ್ರಸ್ತುತ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ ಗ್ರಾಮಗಳನ್ನು ಮುನ್ನೆಚ್ಚರಿಕೆಯಾಗಿ ಗುರ್ತಿಸಲು ನಿರಂತರ ನಿಗಾ ಇಡಲು ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಸೂಚಿಸಿದರು.ಇನ್ನೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ಗೌರಿಬಿದನೂರು ನಗರದ 4 ವಾರ್ಡ್ ಗಳು, ಶಿಡ್ಲಘಟ್ಟ ನಗರದ 6 ವಾರ್ಡ್ ಗಳು, ಚಿಂತಾಮಣಿಯ 4 ವಾರ್ಡ್ ಗಳು ಹಾಗೂ ಬಾಗೇಪಲ್ಲಿಯ 4 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸದ್ಯಕ್ಕೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ ಈ ವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಎದುರಾಗಿಲ್ಲ ಎಂದು ತಿಳಿಸಿದರು.ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಎಲ್ಲ ತಾಲ್ಲೂಕುಗಳ ತಹಸೀಲ್ದಾರರು, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿಗಳು, ನಗರಾಡಳಿತ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು ಹಾಜರಿದ್ದರು.
ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು: ಜಿಲ್ಲಾಧಿಕಾರಿ ಜಿ.ಪ್ರಭು



