ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಗಂಗವಾಡಿಯಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ ಹಾಗೂ ಬಿಡದಿ-ಕೂಟಗಲ್ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಗಂಗಾಧರ್ ಗೌಡ ಬುಧವಾರ ಭೂಮಿ ಪೂಜೆ ನೆರವೇರಿಸಿದರು.ದೊಡ್ಡಗಂಗವಾಡಿ ಗ್ರಾಮದಲ್ಲಿರುವ 5 ಗುಂಟೆ ಸ್ವಂತ ಜಮೀನನ್ನು ಡಿ.ಎಂ.ಮಹದೇವಯ್ಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕಾಗಿ ದಾನ ಮಾಡಿದ್ದು, ಆ ಜಾಗದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿ ಡಿ.ಎಂ.ಮಹದೇವಯ್ಯ, ದೊಡ್ಡಗಂಗವಾಡಿಯಲ್ಲಿ ಆರೋಗ್ಯ ಕೇಂದ್ರ ಇರಲಿಲ್ಲ. ಗ್ರಾಮದ ಜನರು ಅನಾರೋಗ್ಯ ಪೀಡಿತರಾದರೆ ಜಾಲಮಂಗಲ, ಅಕ್ಕೂರು ಗ್ರಾಮದ ಆಸ್ಪತ್ರೆಗೆ ಹೋಗಬೇಕಾಗಿತ್ತು. ಇದನ್ನು ಶಾಸಕ ಬಾಲಕೃಷ್ಣ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೂ ತರಲಾಗಿತ್ತು. ಆದರೆ, ಜಾಗದ ಸಮಸ್ಯೆಯಿಂದ ಆರೋಗ್ಯ ಕೇಂದ್ರ ನಿರ್ಮಾಣ ಕಾರ್ಯ ಸಾಧ್ಯವಾಗಿರಲಿಲ್ಲ ಎಂದರು.ಆರೋಗ್ಯ ಕೇಂದ್ರಕ್ಕಾಗಿ ನಾನೇ 5 ಗುಂಟೆ ಜಮೀನನ್ನು ದಾನ ಮಾಡಿ, ಶಾಸಕರ ಮೇಲೆ ಒತ್ತಡ ಹೇರಿ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿದ್ದೇನೆ. ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ವಿಶೇಷ ಕಾಳಜಿ ವಹಿಸಿದ್ದರು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸುಮಾರು 70 ಲಕ್ಷ ರುಪಾಯಿ ವೆಚ್ಚದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣವಾಗಲಿದೆ ಎಂದು ಹೇಳಿದರು. ಬಿಡದಿ-ಕೂಟಗಲ್ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಗಂಗಾಧರ್ ಗೌಡ ಮಾತನಾಡಿ, ದೊಡ್ಡಗಂಗವಾಡಿಯಲ್ಲಿ ಆರೋಗ್ಯ ಕೇಂದ್ರ ಇಲ್ಲದಿರುವ ಕಾರಣ ಗ್ರಾಮಸ್ಥರು ಜಾಲಮಂಗಲ ಮತ್ತು ಅಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದರು. ಇಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರಿ ಜಮೀನು ಇರಲಿಲ್ಲ. ಇದನ್ನು ಮನಗಂಡು ಡಿ.ಎಂ.ಮಹದೇವಯ್ಯರವರು ತಮ್ಮ ಸ್ವಂತ 5 ಗುಂಟೆ ಜಮೀನನ್ನು ದಾನ ಮಾಡಿ ಔದಾರ್ಯ ಮೆರೆದಿದ್ದಾರೆ ಎಂದು ತಿಳಿಸಿದರು.ಶಾಸಕ ಬಾಲಕೃಷ್ಣ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರ ಗಮನಕ್ಕೆ ತಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಪ್ರಯತ್ನದಿಂದಾಗಿ ಆಯುಷ್ಮಾನ್ ಆರೋಗ್ಯ ಕೇಂದ್ರ ಸ್ಥಾಪನೆಯಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಹುಚ್ಚಪ್ಪ, ಶ್ರೀಕಾಂತ್, ಮೃತ್ಯುಂಜಯ್ಯ, ದಾಸಪ್ಪ, ರೇಣುಕಾ ಪ್ರಸಾದ್, ಉಮೇಶ್, ಶಾಸಕ ಬಾಲಕೃಷ್ಣರವರ ಆಪ್ತ ಸಹಾಯಕ ರವಿ (ರಂಗಸ್ವಾಮಿ) ಮತ್ತಿತರರು ಹಾಜರಿದ್ದರು.



