ರಾಮನಗರ: ಅಧಿಕಾರಿಗಳ ವಸೂಲಿ ಬಾಜಿ, ಮಧ್ಯವರ್ತಿಗಳ ಹಾವಳಿ ಆರೋಪಗಳ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ನಗರದ ಆರ್ಟಿಓ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿದ ವೇಳೆ ಹಲವು ನ್ಯೂನತೆಗಳು ಕಂಡುಬಂದು ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದಿದೆ.
ನಗರದ ಆರ್ಟಿಒ ಕಚೇರಿಗೆ ಶುಕ್ರವಾರ ಬೆಳಗ್ಗೆ 10.30ರ ವೇಳೆಗೆ ಆಗಮಿಸಿದ ಲೋಕಾಯುಕ್ತ ಎಸ್ಪಿ ಸ್ನೇಹಾ ನೇತೃತ್ವದ ಅಧಿಕಾರಿಗಳ ತಂಡವು ಸಂಜೆ 5ರವರೆಗೂ ಪರಿಶೀಲನೆ ನಡೆಸಿತು. ಈ ವೇಳೆ ಹಲವಾರು ಲೋಪದೋಷಗಳು, ನ್ಯೂನತೆಗಳು ಕಂಡುಬAದ ಹಿನ್ನೆಲೆಯಲ್ಲಿ ಆರ್ಟಿಓ ಸತೀಶ್ ಬಾಬು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಡ್ರೈವಿಂಗ್ ಸ್ಕೂಲ್ನವರ ಪ್ರಾಬಲ್ಯ: ಲೋಕಾಯುಕ್ತ ಅಧಿಕಾರಿಗಳು ದಾಳಿ ಆರಂಭಿಸುವಷ್ಟರಲ್ಲಿ ಚಾಲನಾ ಪರವಾನಗಿ ಪಡೆಯಲು ಒಂದಷ್ಟು ಮಂದಿ ಆಗಮಿಸಿದ್ದರು. ಲೋಕಾಯುಕ್ತರ ಕಂಡ ಬೆನ್ನಲ್ಲೇ ಆರ್ಟಿಒ ಸಿಬ್ಬಂದಿ ಅವರನ್ನೆಲ್ಲಾ ಸಾಲಾಗಿ ನಿಲ್ಲಿಸಿ, ಶಿಸ್ತು ಪ್ರದರ್ಶಿಸಲು ಯತ್ನಿಸಿದರು. ಈ ವೇಳೆ ಅಲ್ಲಿಗೆ ಆಗಮಿಸಿದ ಅಧಿಕಾರಿಗಳು ನೀವು ಯಾವ ಶಾಲೆಯಿಂದ ಬಂದಿದ್ದೀರಿ, ಯಾವುದಕ್ಕೆ ಪರವಾನಗಿ ಪಡೆಯಲು ಬಂದಿದ್ದೀರಿ, ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಕೆಲವರು ಅಗತ್ಯಕ್ಕಿಂತ ಹೆಚ್ಚು ಹಣ ನೀಡಿದ್ದೇವೆ ಎಂದು ಉತ್ತರಿಸಿದರು. ಅವರು ಯಾವ ಶಾಲೆಯವರು ಎಂಬುದನ್ನು ತಿಳಿದು, ಮಾಲೀಕರಿಗೆ ಅಗತ್ಯಕ್ಕಿಂತ ಹೆಚ್ಚು ಹಣ ಏಕೆ ಪಡೆದಿದ್ದೀರಿ ಎಂದು ಪ್ರಶ್ನಿಸಿ, ಅವರನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಸಾರ್ವಜನಿಕರು ಸುಳ್ಳು ಹೇಳುತ್ತಿರುವುದನ್ನು ಅರಿತ ಅಧಿಕಾರಿಗಳು ಯಾವುದಕ್ಕೆ ಎಷ್ಟು ಹಣ ನೀಡಬೇಕೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನಂತರ ನಿಗದಿತ ಶುಲ್ಕವನ್ನೇ ಪಾವತಿಸಬೇಕು. ಡ್ರೈವಿಂಗ್ಸ್ಕೂಲ್ನವರು ಕೇಳಿದಷ್ಟು ಹಣವನ್ನು ಕಣ್ಮುಚ್ಚಿ ನೀಡಿದರೆ ಅವರು ಶ್ರೀಮಂತರಾಗುತ್ತಾರೆ. ಸಮಾಜ ಪರಿವರ್ತನೆ ಆಗುವುದಿಲ್ಲ ಎಂದರು.
ಇದನ್ನೆಲ್ಲಾ ನೋಡಿದ ಇನ್ನಿತರೆ ಶಾಲೆಗಳವರು ತಮ್ಮವನ್ನು ಕಚೇರಿ ಕಡೆ ಬರದಂತೆ ತಡೆದರು. ವಿವಿಧ ಪರವಾನಗಿ ಪಡೆಯಲು ಆಗಮಿಸಿದ್ದ 35 ಮಂದಿ ಪೈಕಿ ಕೇವಲ ಒಬ್ಬರೇ ಒಬ್ಬರು ಮಾತ್ರವೇ ಸ್ವತಂತ್ರವಾಗಿ ಬಂದಿದ್ದರು. ಉಳಿದವರೆಲ್ಲರೂ ವಿವಿಧ ಚಾಲನಾ ತರಬೇತಿ ಶಾಲೆಗಳ ಮೂಲಕ ಬಂದವರಾಗಿದ್ದರು.
ತಾಯಿ ಬದಲಿಗೆ ಮಗಳ ಕರ್ತವ್ಯ : ಕಚೇರಿಯ ಒಳಗಡೆ ಪ್ರವೇಶಿಸಿದ ಅಧಿಕಾರಿಗಳಿಗೆ ತಾಯಿಯ ಬದಲು ಮಗಳು ಕಾರ್ಯ ನಿರ್ವಹಿಸುತ್ತಿರುವುದು ಕಂಡುಬAತು. ಆಕೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮೌಖಿಕವಾಗಿ ಪುತ್ರಿ ಕೆಲಸ ಮಾಡಲು ಅವಕಾಶ ನೀಡಿದ್ದೇನೆ ಎಂದರು. ಇದಕ್ಕೆ ಯಾವ ಕಾನೂನಿನ ಅಡಿ ಅವಕಾಶವಿದೆ ಎಂದು ಲೋಕ ಪ್ರಶ್ನೆಗೆ ತಬ್ಬಿಬ್ಬುಗೊಂಡ ಆರ್ಟಿಒ ಸತೀಶ್ ಬಾಬು ಈ ರೀತಿ ಮಾಡದಂತೆ ಮರ್ನಾಲ್ಕು ಬಾರಿ ಎಚ್ಚರಿಕೆ ನೀಡಿದ್ದೇನೆ ಎಂದು ಸಬೂಬು ಹೇಳಿದರು. ಇದಕ್ಕೆ ಕುಪಿತಗೊಂಡ ಲೋಕ ಅಧಿಕಾರಿಗಳು ಲಿಖಿತವಾಗಿ ಏನಾದರೂ ನೀಡಿದ್ದೀರಾ, ಕೂಡಲೇ ಅವರಿಗೆ ಮೆಮೋ ನೀಡಿ ಎಂದು ಸೂಚನೆ ನೀಡಿದರು.
ದಾಳಿ ವೇಳೆ ಹಲವು ಅಕ್ರಮ ಬೆಳಕಿಗೆ: ಆರ್ಸಿ ಕಾರ್ಡ್, ಚಾಲನಾ ಪರವಾನಗಿ ಕಾರ್ಡ್ ಸೇರಿದಂತೆ ಕಚೇರಿಯಿಂದ ನೀಡುವ ವಿವಿಧ ಸ್ಮಾರ್ಟ್ ಕಾರ್ಡ್ಗಳು, ಇನ್ನಿತರ ದಾಖಲಾತಿಗಳನ್ನ ವಾಹನ ಮಾಲೀಕರ, ಚಾಲಕರ ಮನೆಗಳಿಗೆ ತಲುಪಿಸಲು, ಚಲನ್ ಪಾವತಿ ಮಾಡುವಾಗಲೇ ಕಾರ್ಡ್ ಹಾಗೂ ಮನೆಗೆ ತಲುಪಿಸಲು ತಗಲುವ ಅಂಚೆ ವೆಚ್ಚವನ್ನೂ ಪಡೆಯಲಾಗುತ್ತದೆ.
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಪ್ರಿಂಟ್ ಆದ ಕಾರ್ಡ್ಗಳು ಇಲ್ಲಿನ ಕಚೇರಿಗೆ ಬಂದ ನಂತರ ಅವುಗಳನ್ನು ಪೋಸ್ಟ್ ಮೂಲಕ ಮನೆಗಳಿಗೆ ತಲುಪಿಸಬೇಕು. ಆದರೆ, 6 ತಿಂಗಳ ಹಿಂದೆಯೇ ಬಂದಿರುವ ಕಾರ್ಡ್ಗಳನ್ನು ಮನೆಗಳಿಗೆ ಕಳುಹಿಸದೆ ಬೀರುವಿನಲ್ಲೇ ಇಟ್ಟುಕೊಂಡಿದ್ದನ್ನು ನೋಡಿ ಲೋಕಾಯುಕ್ತರು ಕೆಂಡಾಮಂಡಲರಾದರು.
ಹೊರಗುತ್ತಿಗೆ ನೌಕರರ ಪಾರುಪತ್ಯ: ಈ ವೇಳೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಹೊರಗುತ್ತಿಗೆ ಸಿಬ್ಬಂದಿಗೆ ವಹಿಸಲಾಗಿದೆ ಎಂದು ಸಬೂಬು ಹೇಳಿ ನುಣುಚಿಕೊಳ್ಳಲು ಸರ್ಕಾರಿ ಅಧಿಕಾರಿಗಳು ಯತ್ನಿಸಿದರು. ಸಬೂಬು ಒಪ್ಪದ ಅಧಿಕಾರಿಗಳು ಇದು ನಿಮ್ಮ ಕೆಲಸ ನೀವು ಏಕೆ ಮಾಡಿಲ್ಲ ಎಂದು ಖಾರವಾಗಿ, ಏರಿದ ಧ್ವನಿಯಲ್ಲಿ ಪ್ರಶ್ನಿಸಿದರೂ ಸಿಬ್ಬಂದಿ ಮರುಮಾತಾಡದೆ ನಿಂತೇ ಇದ್ದರು. ಆರ್ಟಿಒ ಸಿಬ್ಬಂದಿಗಳಿಗಿAತ ಹೊರಗುತ್ತಿಗೆ ನೌಕರರ ಪಾರುಪತ್ಯ ಕಂಡು ಲೋಕ ಅಧಿಕಾರಿಗಳು
ದಿಗ್ಭ್ರಮೆಗೊಂಡರು. ಈ ವೇಳೆ ಚಾಲನಾ ಪರವಾನಗಿ ನವೀಕರಣಕ್ಕೆ ಆರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ಕಾರ್ಡ್ ಕೊಟ್ಟಿಲ್ಲ ಎಂದು ಸಾರ್ವಜನಿಕರೊಬ್ಬರು ದೂರಿದರು. ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ದೂರು ದಾಖಲಿಸಿಕೊಂಡರು.
ಮಧ್ಯವರ್ತಿಗಳ ಹಾವಳಿ: ಕಚೇರಿಯಲ್ಲಿ ನಡೆಯುತ್ತಿರುವ ವಸೂಲಿಬಾಜಿ, ಮಧ್ಯವರ್ತಿಗಳ ಹಾವಳಿ ಬಗ್ಗೆ ಲೋಕಾಯುಕ್ತ ಎಸ್ಪಿ ಸ್ನೇಹಾ ಅವರು ಆರ್ಟಿಒ ಅಧಿಕಾರಿಯನ್ನು ಪ್ರಶ್ನಿಸಿದರು. ಮಧ್ಯವರ್ತಿಗಳನ್ನು ಕಚೇರಿ ಒಳಗೆ ಏಕೆ ಸೇರಿಸುತ್ತೀರಿ, ಸ್ಮಾರ್ಟ್ ಕಾರ್ಡ್ಗಳನ್ನು ಏಕೆ ತಲುಪಿಸಿಲ್ಲ, ಕಚೇರಿ ಒಳಗೆ ನಡೆದಿರುವ ಗಲಾಟೆ ಬಗ್ಗೆ ಪೊಲೀಸರಿಗೆ ಏಕೆ ದೂರು ನೀಡಿಲ್ಲ ಎಂದು ಪ್ರಶ್ನಿಸಿದರು. ಇಂದೇ ಪೊಲೀಸರಿಗೆ ದೂರು ನೀಡು ವುದಾಗಿ ಆರ್ಟಿಒ ಸತೀಶ್ ಬಾಬು ತಿಳಿಸಿದರು.
ಸಾರ್ವಜನಿಕರ ದೂರಿನ ಹಿನ್ನೆಲೆ ದಾಳಿ: ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಕಚೇರಿ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗುತ್ತಿದೆ. ದಾಳಿ ವೇಳೆ ಹಲವಾರು ಲೋಪದೋಷಗಳು ಕಂಡು ಬಂದಿವೆ. ಮಧ್ಯವರ್ತಿಗಳ ಹಾವಳಿಯೂ ಸೇರಿದಂತೆ ಸ್ಮಾರ್ಟ್ ಕಾರ್ಡ್ಗಳನ್ನು ತಲುಪಿಸದಿರುವುದು, ವಸೂಲಿಬಾಜಿ ಆರೋಪಗಳು ಕೇಳಿ ಬಂದಿವೆ. ತಾಯಿಯ ಪರವಾಗಿ ಮಗಳು ಕಾರ್ಯ ನಿರ್ವಹಿ ಸುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದರು.
ಆರ್ಟಿಓ ಕಚೇರಿ ಮೇಲೆ ಲೋಕಾಯುಕ್ತರಿಂದ ದಿಢೀರ್ ದಾಳಿ



