ಗೌರಿಬಿದನೂರು : ವಿದ್ಯಾರ್ಥಿಗಳು ಕ್ಷಣಿಕ ಸುಖಕ್ಕಾಗಿ ಮಾದಕ ವ್ಯಸನಗಳಿಗೆ ದಾಸರಾಗಬಾರದು ಎಂದು ಶಾಸಕ ಕೆ ಎಚ್ ಪುಟ್ಟಸ್ವಾಮಿಗೌಡ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ನಗರದ ಡಾ. ಎಚ್ ಎನ್ ಕಲಾಭವನದಲ್ಲಿ ಸೋಮವಾರ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಮಾಡಲು ಡ್ರಗ್ಸ್ ಬೇಡ ಬ್ರೋ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಕುತೂಹಲಕ್ಕೆ ಅಥವಾ ಕ್ಷಣಿಕ ಸುಖಕ್ಕೆ ಪ್ರಾರಂಭ ಮಾಡುವ ಡ್ರಗ್ಸ್ ಎಂಬ ಪಿಡುಗು ಜೀವನ ಪರ್ಯಂತ ಕುಟುಂಬ ಮತ್ತು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತದೆ, ಡ್ರಗ್ಸ್ ಗೆ ಒಮ್ಮೆ ದಾಸನಾದರೆ, ಬಡವ ಶ್ರೀಮಂತ ಎಂಬ ಬೇಧಭಾವ ವಿಲ್ಲದೆ ಇಡೀ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.ಡ್ರಗ್ಸ್ ಎಂಬ ಪಿಡುಗಿಗೆ ಇಂದು ಪ್ರಪಂಚವೇ ತತ್ತರಿಸುತ್ತಿದೆ, ಡ್ರಗ್ಸ್ ಪೆಡ್ಲರ್ ಗಳು ವಿದೇಶಗಳಿಂದ ಕಳ್ಳದಾರಿಗಳ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಸರಬರಾಜು ಮಾಡಿ ದೇಶದ ಯುವಕರನ್ನು ಡ್ರಗ್ಸ್ ಗೆ ದಾಸರನ್ನಾಗಿ ಮಾಡುತ್ತಿದ್ದಾರೆ, ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ಉತ್ತಮ ಸಹಪಾಠಿಗಳ ಸಹವಾಸ ಮಾಡಬೇಕು, ಮಾದಕ ವ್ಯಸನಿಗಳಿಂದ ಅಂತರ ಕಾಪಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು, ಹಾಗೂ ಡ್ರಗ್ಸ್ ತಡೆಗಟ್ಟಲು ಪೊಲೀಸರಿಂದ ಮಾತ್ರ ಸಾಧ್ಯವಾಗುವುದಿಲ್ಲ, ಸಾರ್ವಜನಿಕರುಪೊಲೀಸರೊಂದಿಗೆ ಕೈಜೋಡಿಸಿದಾಗ ಮಾತ್ರ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು.ಹೆಚ್ಚುವರಿ ಅಧೀಕ್ಷಕ ಜಗನ್ನಾಥ ರೈ ಮಾತನಾಡಿ, ಯುವಕರು ಹದಿಹರೆಯದ ವಯಸ್ಸಿನಲ್ಲಿ ಮಾದಕ ವ್ಯಸನಗಳಿಗೆ ದಾಸರಾದರೆ ಜೀವನವೇ ಹಾಳಾಗುತ್ತದೆ, ಮೋಜಿಗಾಗಿ ಪ್ರಾರಂಭ ಮಾಡುವ ವ್ಯಸನ ಕಾಲ ಕ್ರಮೇಣ ದಾಸರನ್ನಾಗಿ ಮಾಡಿಕೊಂಡು ಮೃತ್ಯುಕೂಪಕ್ಕೆ ತಳ್ಳುತ್ತದೆ, ಅನೇಕ ಕಡೆ ಕಾಲೇಜಿನ ವಿದ್ಯಾರ್ಥಿಗಳು ವಿದೇಶಿ ವಿದ್ಯಾರ್ಥಿಗಳ ಜೊತೆ ಸೇರಿ ಹೆಣ್ಣು ಗಂಡು ಬೇದ ಭಾವವಿಲ್ಲದೆ ಮದ್ಯದ ಪಾರ್ಟಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಪೆಡ್ಲರ್ ಗಳು ಡ್ರಗ್ಸ್ ಸಾಗಾಟ ಮಾಡಲು ಬೇರೆ ರೀತಿಯ ನೂತನ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ, ಸಾರ್ವಜನಿಕರು ಇಂತಹವರ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ ತಮ್ಮ ಜವಾಬ್ದಾರಿ ಮೆರೆಯಬೇಕು, ಹಾಗೂ ಸರ್ಕಾರ ವ್ಯಸನಿಗಳನ್ನು ವ್ಯಸನ ಮುಕ್ತ ಮಾಡಲು ಸನ್ಮಿತ್ರ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳನ್ನು ಸೇವಿಸಿದಾಗ ಮನುಷ್ಯನಲ್ಲಿರುವ ವಿಕೃತ ಮನಸ್ಸು ಜಾಗೃತಗೊಂಡು ಯಾವ ರೀತಿ ಸಮಾಜ ಘಾತುಕ ಕೆಲಸಗಳಿಗೆ ತೊಡಗಿಸಿಕೊಳ್ಳುತ್ತದೆ, ಅದರಿಂದ ಕುಟುಂಬದಲ್ಲಿ ಮತ್ತು ಸಮಾಜದ ಮೇಲೆ ಯಾವ ರೀತಿಯ ಪರಿಣಾಮಗಳು ಬೀರುತ್ತದೆ ಎನ್ನುವುದನ್ನು ನಾಟಕ ಮತ್ತು ಹಾಡುಗಳ ಮೂಲಕ ಗೌತಮ್ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಕಣ್ಣಿಗೆ ಕಟ್ಟುವ ಹಾಗೆ ನಡೆಸಿಕೊಡಲಾಯಿತು. ಪೊಲೀಸರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು, ಬಳಿಕ ಮಾದಕ ವಸ್ತುಗಳ ಬಗ್ಗೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯಿಂದ ಬಹುಮಾನ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಅಂಜನ್ ಕುಮಾರ್, ಪಿ ಎಸ್ ಐ ಗಳಾದ ವರಲಕ್ಷಿ÷್ಮ, ಲಲಿತಮ್ಮ, ಹರೀಶ್, ಮಮತಾ, ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.
ಮಾದಕ ವ್ಯಸನಗಳಿಗೆ ದಾಸರಾಗಬೇಡಿ-ಶಾಸಕ



