ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿಚಾರದಲ್ಲಿ ಕುಮಾರಸ್ವಾಮಿ ರವರು ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ರದ್ದು ಮಾಡಿ ರೈತರ ಹಿತ ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಮತ್ತು ಡಿ.ಕೆ.ಶಿವಕುಮಾರ್ ರವರು ಯೋಜನೆ ಪೂರ್ಣಗೊಳಿಸಲು ಮುಂದಾಗಿರುವುದನ್ನು ಸಹಿಸದೆ ತಮ್ಮ ಕಾರ್ಯಕರ್ತರನ್ನು ಛೂ ಬಿಟ್ಟಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿರವರು ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಅನುಭವದ ಕೊರತೆಯಿಂದ ಬಿಡದಿ ಟೌನ್ ಶಿಪ್ ಘೋಷಣೆ ಮಾಡಿದ್ದರು. ಆನಂತರ 2018ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗಲಾದರು ರೈತರ ಹಿತ ಕಾಪಾಡುವ ಬದ್ಧತೆ ಇದ್ದಿದ್ದರೆ ಟೌನ್ ಶಿಪ್ ಯೋಜನೆ ಕೈ ಬಿಡಬಹುದಿತ್ತಲ್ಲ ಏಕೆ ಮಾಡಲಿಲ್ಲ. 19 ವರ್ಷಗಳಿಂದ ಭೂಮಿ ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ನ್ಯಾಯ ಒದಗಿಸಬೇಕು ಅಂತ ಈಗ ಕಾಂಗ್ರೆಸ್ ಸರ್ಕಾರ ಟೌನ್ ಶಿಪ್ ಯೋಜನೆಗೆ ವೇಗ ನೀಡಿದೆ ಎಂದರು.
ಕೇAದ್ರ ಸಚಿವ ಕುಮಾರಸ್ವಾಮಿ ಅಭಿವೃದ್ಧಿ ಕಡೆ ಗಮನ ಕೊಡದೆ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ರಾಮನಗರ ಮತ್ತು ಚನ್ನಪಟ್ಟಣದಿಂದ ಗೆದ್ದು 2 ಬಾರಿ ಮುಖ್ಯಮಂತ್ರಿಯಾಗಿ ಒಂದೇ ಒಂದು ನೀರಾವರಿ ಯೋಜನೆ ಮಾಡಲಿಲ್ಲ. ಆದರೆ, ಶಿಕ್ಷಕನ ಮಗ ಸಿ.ಪಿ.ಯೋಗೇಶ್ವರ್ ಆ ಕೆಲಸ ಮಾಡಿ ತೋರಿಸಿದರು ಎಂದು ಹೇಳಿದರು.
ಕುಮಾರಸ್ವಾಮಿ ರವರು ಡಿ.ಕೆ.ಶಿವಕುಮಾರ್ ಮತ್ತು ಸುರೇಶ್ ಅವರಿಗೆ ಬಂಡೆ ಹೊಡೆದು ಹಣ ಲೂಟಿ ಮಾಡಿದ್ದಾರೆಂದು ಹಗುರವಾಗಿ ಮಾತ ನಾಡುತ್ತಾರೆ. ಇದಕ್ಕೆ ಡಿ.ಕೆ.ಶಿವಕುಮಾರ್ ಅವರು ಉತ್ತರ ನೀಡಿದ್ದಾರೆ.
ಕುಮಾರಸ್ವಾಮಿರವರು 2004ರಲ್ಲಿ ರಾಮನಗರಕ್ಕೆ ಬಂದಾಗ ಅವರ ಆರ್ಥಿಕ ಪರಿಸ್ಥಿತಿ ಏನಿತ್ತು. ಈಗ ಏನಿದೆ ಎಂಬುದನ್ನು ಅವಲೋಕಿಸಲಿ.ಅನಿತಾ ಮತ್ತು ನಿಖಿಲ್ ಆಸ್ತಿ ಎಷ್ಟಿದೆ ಅಂತ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ. ಅವರಿಗೆ ನೂರಾರು ಕೋಟಿ ಮೌಲ್ಯದ ಆಸ್ತಿ ಎಲ್ಲಿಂದ ಬಂದಿತು. ಅವರು ನೂರಾರು ಕೋಟಿ ಲೂಟಿ ಮಾಡಿದರು ಸತ್ಯಾಹರಿಶ್ಚಂದ್ರರು. ಬೇರೆಯವರು ಆಸ್ತಿ ಮಾಡಿದರೆ ಲೂಟಿಕೋರರು. ಕುಮಾರಸ್ವಾಮಿ ಕುಟುಂಬದವರ ಬಳಿ ಅಷ್ಟೊಂದು ಆಸ್ತಿ ಎಲ್ಲಿಂದ ಬಂದಿತು ಎಂದು ಪ್ರಶ್ನಿಸಿದರು.
ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬದವರು ಕೇತಗಾನಹಳ್ಳಿ ತೋಟದಲ್ಲಿ ಆಲುಗಡ್ಡೆ ಬೆಳೆದು ಅಷ್ಟೊಂದು ಕೋಟಿ ಸಂಪಾದನೆ ಮಾಡಿದ್ದಾರ. ಸಂಕಷ್ಟದಲ್ಲಿರುವ ರೈತರಿಗೂ ಕೋಟಿ ಸಂಪಾದನೆ ಹೇಗೆ ಮಾಡುವುದೆಂದು ಹೇಳಿಕೊಡಲಿ ಎಂದು ಕೆ.ರಾಜು ವ್ಯಂಗ್ಯವಾಡಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ಮಾತನಾಡಿ, ಬಿಡದಿ ಟೌನ್ ಶಿಪ್ ಯೋಜನೆಗಾಗಿ ರೆಡ್ ಜೋನ್ ಮಾಡಿದರು. ಅಂದಿನಿAದ ಇಲ್ಲಿವರೆಗೆ ರೈತರ ಭೂಮಿ ಎಕರೆಗೆ 30 – 40 ಲಕ್ಷ ರುಪಾಯಿ ಇದೆ. ರೆಡ್ ಜೋನ್ ಮಾಡದೆ ಹೋಗಿದ್ದರೆ ಎಕೆರೆಗೆ 5 ರಿಂದ 6 ಕೋಟಿ ಬೆಲೆ ಸಿಗುತ್ತಿತ್ತು. ಈಗ ಶಿವಕುಮಾರ್ ರೈತರ ಜಮೀನು ಕಸಿದುಕೊಳ್ಳಲು ಹೋಗಿಲ್ಲ. ಒಳ್ಳೆಯ ಬೆಲೆ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಕುಟುಂಬದವರು ಯಾರೂ ಆಸ್ತಿ ಮಾಡಿದವರಂತೆ ನಟಿಸುತ್ತಿದ್ದಾರೆ. ಕುಮಾರಸ್ವಾಮಿ ಕೇತಗಾನಹಳ್ಳಿ ಮತ್ತು ಅನಿತಾ ಬೈರಮಂಗಲದಲ್ಲಿ ಭೂಮಿ ಕಬಳಿಸಿದ್ದಾರೆ. ರೈತರ ಬಗೆಗೆ ಮೊಸಳೆ ಕಣ್ಣೀರು ಹರಿಸುವುದು ಬಿಟ್ಟು ಆ ಕೃಷಿ ಜಮೀನನ್ನು ರೈತರಿಗೆ ವಾಪಸ್ ಕೊಟ್ಟು ಬಿಡಿ ನೋಡೋಣ ಎಂದು ಸವಾಲು ಹಾಕಿದರು.
ನಿಖಿಲ್ ಕುಮಾರಸ್ವಾಮಿ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಈಗಾಗಲೇ ಮೂರು ಕಡೆ ಸೋತಿದ್ದಾರೆ. ಮೊದಲು ಜನರಿಗೆ ಗೌರವ ಕೊಡುವುದನ್ನು ಕಲಿಯಲಿ.ಇದೇ ರೀತಿ ಮಾತನಾಡಿದರೆ ಮತ್ತೆ ಪಲ್ಟಿ ಹೊಡೆಯುತ್ತೀರಿ. 2028ರ ಚುನಾವಣೆ ಅಲ್ಲ ಡಿ.ಕೆ.ಶಿವಕುಮಾರ್ ತಮ್ಮ ಉಸಿರುವವರೆಗೂ ಮಾಜಿ ಆಗುವುದಿಲ್ಲ ಎಂದು ಪಿ.ನಾಗರಾಜ್ ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ರಮೇಶ್ ಮಾತನಾಡಿ, ಕುಮಾರಸ್ವಾಮಿರವರು 2007ರಲ್ಲಿ ಡಿಎಲ್ಎಫ್ ಕಂಪನಿ ಜೊತಗೆ ಹೊಂದಾಣಿಕೆ ಮಾಡಿಕೊಂಡರು. ಯೋಜನೆ ಕಾರ್ಯಗತ ಮಾಡಲಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ರವರು ಅಭಿವೃದ್ಧಿ ದೃಷ್ಟಿಯಿಂದ ಯೋಜನೆ ಜಾರಿ ಮಾಡಲು ಮುಂದಾಗಿದ್ದಾರೆ ಎಂದರು. ಬೆಂಗಳೂರಿನ ಮೂರು ಭಾಗ ಅಭಿವೃದ್ಧಿಯಾಗಿದೆ. ಕೆಂಗೇರಿ ದಾಟಿ ರಾಮನಗರ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ. ಮೊದಲೇ ಬಿಡದಿ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದ್ದರೆ ರಾಮನಗರದಂದ ಮೈಸೂರುವರೆಗೆ ಅಭಿವೃದ್ಧಿ ಆಗಿರುತ್ತಿತ್ತು.
ಆ ಕೆಲಸವನ್ನು ಎರಡು ಬಾರಿ ಮುಖ್ಯಮಂತ್ರಿಯಾದವರು ಮಾಡಲಿಲ್ಲ. ಅವರ ಕೊಡುಗೆ ಏನಿದೆ ಅಂತ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರೊಂದಿಗೆ ಬೇಡ ನಮ್ಮೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಎನ್.ನರಸಿಂಹಯ್ಯ ಮಾತನಾಡಿ, ಕುಮಾರಸ್ವಾಮಿರವರು ಘನತೆಗೆ ತಕ್ಕಂತೆ ಮಾತನಾಡಬೇಕು. ಬೇರೊಬ್ಬರ ಬಗ್ಗೆ ಲಘುವಾಗಿ ಮಾತನಾಡದೆ ಬದ್ಧತೆಯಿಂದ ಮಾತನಾಡಬೇಕು. ಡಿಕೆಶಿ ಅವರನ್ನು ಜೋಡೆತ್ತು ಎಂದು ಕೊಂಡಾಡಿದ್ದರು. ಈಗ ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ಇಷ್ಟಬಂದAತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿರವರು ಮುಖ್ಯಮಂತ್ರಿ ಯಾಗಿ ಮಾಡಲಾಗದಷ್ಟು ಕೆಲಸ ವನ್ನು ಡಿ.ಕೆ.ಶಿವಕುಮಾರ್ ರವರು ಉಪ ಮುಖ್ಯಮಂತ್ರಿಯಾಗಿ ಮಾಡುತ್ತಿದ್ದಾರೆ. ಈಗ ನೀವು ಕೇಂದ್ರ ಸಚಿವರಾಗಿದ್ದೀರಿ ತಾಕತ್ತಿದ್ದರೆ ಜಿಲ್ಲೆಗೊಂದು ಕೈಗಾರಿಕೆ ತನ್ನಿ. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ರೈತರನ್ನು ಎತ್ತಿಕಟ್ಟುವುದನ್ನು ಬಿಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ಕುಮಾರ್, ನಿರ್ದೇಶಕ ಪರ್ವೀಜ್ ಪಾಷ, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸದಸ್ಯರಾದ ನಿಜಾಮುದ್ದೀನ್, ಆಯಿಷಾ ಬಾನು, ಬೈರೇಗೌಡ, ನಾಗಮ್ಮ, ನಗರಸಭೆ ಮಾಜಿ ಅಧ್ಯಕ್ಷ ರವಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ಮುಖಂಡರಾದ ಸಿಎನ್ಆರ್ ವೆಂಕಟೇಶ್, ಸಿ.ರಾಮಯ್ಯ, ಜಯರಾಮಯ್ಯ, ಪ್ರಾಣೇಶ್, ಪ್ರಭಣ್ಣ, ವೀರಭದ್ರಸ್ವಾಮಿ (ಬೋರ್ವೆಲ್ ಸ್ವಾಮಿ) ರೈಡ್ ನಾಗರಾಜ್, ಕೆ.ರವಿ, ಗುರುಪ್ರಸಾದ್, ನರಸಿಂಹಯ್ಯ, ನಾಗೇಶ್, ರಘು, ಹರಳಪ್ಪ, ಭದ್ರಯ್ಯ, ರಂಜಿತ್, ರೇವಣ್ಣ, ಉಮೇಶ್, ದೇವರಾಜು, ಗುಡ್ಡೆ ವೆಂಕಟೇಶ್, ಕೃಷ್ಣ, ಶಿವಶಂಕರ್, ಶಿವಲಿಂಗಯ್ಯ, ಲೋಕೇಶ್, ಚಂದ್ರು, ಮಲ್ಲೇಗೌಡ, ದಾಸೆಗೌಡ, ಗಿರೀಶ್, ಗೋವಿಂದರಾಜ್, ರಾಮು, ಅಣ್ಣು, ಭೂಷಣ್, ಎಟಿಎಂ ಸುನಿ, ನದೀಮ್, ಗೋವಿಂದಯ್ಯ, ಪಾರ್ಥಸಾರಥಿ, ಚಂದ್ರಮ್ಮ ಸೇರಿದಂತೆ ಮುಂತಾದವರಿದ್ದರು.
`ಎಚ್ಡಿಕೆ ಅಭಿವೃದ್ಧಿ ಕಡೆ ಗಮನ ಕೊಡದೆ ಜನರಿಗೆ ಮನರಂಜನೆ ನೀಡುತ್ತಿದ್ದಾರೆ’



