ಬೆಂಗಳೂರು: ನಗರದ ಮಾರತಹಳ್ಳಿಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಸಿಎಂಆರ್ಐಟಿ ರಾಷ್ಟ್ರೀಯ ಸೇವಾ ಯೋಜನೆ, ರೋಟ್ರ್ಯಾಕ್ಟ್ ಕ್ಲಬ್ ಹಾಗೂ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ದಿನಾಂಕ:-11.12.2023 ರಂದು ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಮನುಷ್ಯನ ದೇಹದ ಜೀವನಾಡಿಯಾದ ರಕ್ತವು ಅಮೂಲ್ಯವಾದ ಜೀವ ರಕ್ಷಕ. ಇದನ್ನು ಮುಖ್ಯವಾಗಿಸಿಕೊಂಡ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು 160 ಯೂನಿಟ್ ರಕ್ತವನ್ನು ದಾನ ಮಾಡಿ ಸಾರ್ಥಕತೆ ಮೆರೆದರು. ಅಲ್ಲದೆ ರಕ್ತದಾನ-ಜೀವದಾನ ಎಂಬ ಮಾನವೀಯ ಸಂದೇಶವನ್ನು ರಕ್ತದಾನಿಗಳು ಸಾರಿದರು.
ಇನ್ನೂ ರಕ್ತದಾನದ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣು, ಇಎನ್ಟಿ, ಚರ್ಮರೋಗ, ಹೃದಯ ಕಾಯಿಲೆ, ಮನೋವಿಜ್ಞಾನ, ಅಪೌಷ್ಟಿಕತೆ ಸೇರಿದಂತೆ ಹಲವು ವಿಭಾಗಗಳ ನುರಿತ ವೈದ್ಯರ ತಂಡ 500 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಿತು.
ಸಿಎಂಆರ್ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಜಯ್ ಜೈನ್ ಮಾತನಾಡಿ ರಕ್ತದಾನ ಶಿಬಿರದಲ್ಲಿ ಬೃಹತ್ ಸಂಖ್ಯೆಯ ಯುವಜನರು ಪಾಲ್ಗೊಂಡು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹಾಕಾರ್ಯಕ್ಕೆ ಕೈಜೋಡಿಸಿದ್ದಾರೆ. ಈ ಮೂಲಕ ಸಮಾಜಕ್ಕೆ ಜೀವದಾನದ ಮಹತ್ವವನ್ನು ಸಾರಿದ್ದಾರೆ ಎಂದು ರಕ್ತದಾನ ಶಿಬಿರವನ್ನು ಶ್ಲಾಘಿಸಿದರು.
ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ದಾನಿಯೊಬ್ಬರು ಮಾತನಾಡಿ “ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಆಯೋಜನೆಗಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ. ಅಗತ್ಯವಿರುವವರಿಗೆ ನಾವು ನೀಡುವ ರಕ್ತದಾನ ಜೀವ ಉಳಿಸುವುದರ ಜೊತೆಗೆ ಜಾತಿ,ಧರ್ಮದ ಗೊಡೆಯನ್ನು ಕೆಡವಿ ಮನುಷ್ಯ ಸಂಬಂಧವನ್ನು ಬೆಸಯುವಲ್ಲಿ ಮಹತ್ವದ್ದಾಗಿದೆ ಎಂದರು.