ಬೆಂಗಳೂರು: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಂಘಸಂಸ್ಥೆಗಳ ಪಾತ್ರ ಹೆಚ್ಚು ಮಹತ್ವ ಪಡೆಯಲಿದ್ದು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದಲ್ಲಿ ಆ ಸಂಸ್ಥೆ ಮತ್ತು ಅದರ ಸೇವಕರನ್ನು ಸಮಾಜ , ಸರ್ಕಾರ ಗುರ್ತಿಸುತ್ತದೆ , ಗೌರವಿಸುತ್ತದೆ ಎಂದು ಗಾಂಧಿ ಭವನದ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಅಭಿಪ್ರಾಯ ಪಟ್ಟರು.
ಬೆಂಗಳೂರಿನ ಭರವಸೆ ತಂಡವು ಶೇಷಾದ್ರಿ ಪುರಂನ ಸನ್ಮಾನ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ತನ್ನ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಕವಿ, ಉದ್ಯಮಿ ಡಾ.ಕೃಷ್ಣ ಹಾನ್ ಬಾಳ್ ಅವರ ” ಮರಳಿ ಊರಿಗೆ” ಕಥಾ ಸಂಕಲನ ಮತ್ತು “ನಾ ಕಂಡದ್ದು ಕಂಡಂತೆ” ಕವನ ಸಂಕಲನ ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಇಂದು ಸಾಹಿತ್ಯ, ಸಂಸ್ಕೃತಿ ಸಂಘಟನೆ, ಹೋರಾಟ , ಪರರಿಗಾಗಿ ದುಡಿವ ಸೇವಾ ಮನೋಭಾವ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭರವಸೆ ತಂಡದ ಯುವಕರು ತಮ್ಮ ನಿಸ್ವಾರ್ಥ ಸೇವೆಯಿಂದ ಜನಮುಖಿ, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಡಾ.ಕೃಷ್ಣ ಅವರು ಸಂತೋಷ ವ್ಯಕ್ತಪಡಿಸಿದರು.
ಯುವ ಕವಿ , ಉದ್ಯಮಿ ಡಾ.ಕೃಷ್ಣ ಹಾನ್ ಬಾಳ್ ಅವರ ಎರಡು ಕೃತಿಗಳನ್ನು ಕುರಿತು ಮಾತನಾಡಿದ ವಿಜಯಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಆರ್.ವಾದಿರಾಜು ಅವರು ಪ್ರೀತಿ, ಪ್ರೇಮ, ಪ್ರಣಯ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಕವಿತೆ ಮತ್ತು ಕಥೆಗಳು ಜೀವನಾನುಭವದ ಅಂತಃಸತ್ವವನ್ನು ತೆರೆದಿಡುತ್ತವೆ, ಸಾಹಿತ್ಯ ನಿಂತ ನೀರಾಗಿದೆ ಸದಾ ಚಲನಶೀಲತೆಯಿಂದ ಕೂಡಿರಬೇಕಿದೆ. ಆ ನಿಟ್ಟಿನಲ್ಲಿ ಹಾನ್ ಬಾಳ್ ಅವರ ಕಥೆ, ಕವಿತೆಗಳು ಹಾಸನ ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ ಚಿತ್ರಣವನ್ನು ಕಾಣಬಹುದಾಗಿದೆ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಂಸ್ಕೃತಿಕ ಚಿಂತಕ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ಯುವ ಸಮುದಾಯವು ವಿವಿಧ ಆಸೆ, ಆಮಿಷ, ಕೆಟ್ಟ ಚಟಗಳಿಗೆ ಬಲಿಯಾಗಿ ದಿಕ್ಕು ತಪ್ಪಿ , ಜೀವನ ದಾರಿಯನ್ನು ಉಜ್ವಲಗೊಳಿಸಿಕೊಳ್ಳುವ ,ಭವಿಷ್ಯ ರೂಪಿಸಿಕೊಂಡು ಸಮಾಜದಲ್ಲಿ ಸನ್ಮಾರ್ಗ ತೋರುವುದು ಅನಿವಾರ್ಯವಾಗಿದೆ , ಹೀಗಾಗಿ ಭರವಸೆ ತಂಡದ ಸುನಿಲ್ ಗೌಡ ಮತ್ತು ಮಂಜೇಶ್ ಕುಮಾರ್ ಅವರು ಸೇರಿದಂತೆ ನಾಲ್ಕು ವರ್ಷಗಳಿಂದ ಸಮಾಜಕ್ಕೆ ನಿಜವಾದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.
ಕವಿ ಕೃಷ್ಣ ಹಾನ್ ಬಾಳ್ ಅವರು ತಮ್ಮ ಸಾಹಿತ್ಯಕ್ಕೆ ಪ್ರೋತ್ಸಾಹ, ಪ್ರೇರಣೆ ನೀಡಿದ ತಾಯಿ, ತಂದೆ, ಗುರು, ಸ್ನೇಹಿತರು ಹಾಗೂ ಸಕಲೇಶ್ವರದ ಸುತ್ತ ಮುತ್ತಲಿನ ಪರಿಸರವನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಡಾ.ವೂಡೇ ಪಿ ಕೃಷ್ಣ (ಸಮಾಜಸೇವೆ), ಡಾ.ಸಿಸಿರಾ (ಸಾಂಸ್ಕೃತಿಕ ಸೇವೆ), ಎಸ್.ಸಹನಾ (ಶೈಕ್ಷಣಿಕ ಸೇವೆ), ಕೃಷ್ಣ ಹಾನ್ ಬಾಳ್ (ಸಾಹಿತ್ಯ ಸೇವೆ),
ಮಂಜೇಶ್ ಕುಮಾರ್ ( ದೀನದಲಿತರ ಸೇವೆ) ಗಾಗಿ ವಾರ್ಷಿಕ ಪ್ರಶಸ್ತಿಯನ್ನು ರಾಜಾಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ವನಜಾಕ್ಷಿ ಹಳ್ಳಿಯವರ್ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಪೂಜಾ, ಜ್ಯೋತಿ, ಸಾಹಿತಿ ಡಾ.ಬೈರಮಂಗಲ ರಾಮೆಗೌಡರು, ಸನ್ಮಾನ್ ಹೋಟೆಲ್ ಮಾಲೀಕರಾದ ಬಿ.ಆರ್. ರಾಮಕೃಷ್ಣ ಭಟ್ , ಹಿರಿಯ ಪತ್ರಕರ್ತ ಡಾ.ಉದಯರವಿ, ಗಾಯಕಿ ಅಂಬುಜಾಕ್ಷಿ ಭೀರೇಶ್ ಮುಂತಾದವರಿದ್ದರು.