ಮುಂಬೈ: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಸ್ಪಿನ್ನರ್ ಗಳಿಗೆ ಅನುಕೂಲವಾಗುವಂತೆ ಮೈದಾನದ ಪಿಚ್ ಬದಲಾಯಿಸಲಾಗುತ್ತಿದೆ ಎಂಬಂತಹ ವರದಿಗಳ ವಿರುದ್ಧ ಭಾರತದ ಕ್ರಿಕೆಟ್ ಲೆಜೆಂಡರಿ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.
ವಾಖಂಡೆ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಕೊನೆ ಗಳಿಗೆಯಲ್ಲಿ ಭಾರತ ತಂಡಕ್ಕೆ ಅನುಕೂಲವಾಗುವಂತೆ ಬಿಸಿಸಿಐ ಪಿಚ್ ಬದಲಾಯಿಸಲಾಗಿತ್ತು ಎಂಬಂತಹ ಆರೋಪ ಕೇಳಿಬಂದಿತ್ತು.
ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಸುನೀಲ್ ಗವಾಸ್ಕರ್, ಶಟ್ ಅಪ್, ಅಸಂಬದ್ದ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾರತ ಫೈನಲ್ ತಲುಪಿದಾಗ, ಅದು ಯಾವಾಗಲೂ ಹೆಮ್ಮೆಯ ವಿಷಯವಾಗಿರುತ್ತದೆ.
ಅಲ್ಲದೇ ಅದು ವಿಶ್ವಕಪ್ ಆಗಿದ್ದರೆ ಇನ್ನು ಹೆಚ್ಚು ವಿಶೇಷವಾಗಿರುತ್ತದೆ. ಭಾರತ ಅದನ್ನು ತನ್ನದೇ ಶೈಲಿಯಲ್ಲಿ ಅಚ್ಚುಕಟ್ಟಾಗಿ ಮಾಡಿದೆ. ಭಾರತ ತಂಡ 400 ರನ್ ಗಡಿಗೆ ತಲುಪಿದೆ. ಇದೊಂದು ಅದ್ಬುತ ಪಿಚ್ ಆಗಿದೆ. ಇದರಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ್ದೇವೆ. ಭಾರತದ ಸ್ಪಿನ್ನರ್ಗಳಿಗೆ ಅನುಕೂಲವಾಗುವಂತೆ ಪಿಚ್ ಸಿದ್ಧಪಡಿಸಲಾಗಿದೆ ಎಂಬುದು ಮೂರ್ಖತನದ ಹೇಳಿಕೆ ಎಂದು ಕಿಡಿಕಾರಿದರು.