ಮಾಗಡಿ: ನ್ಯಾಯ ಕೊಡಿಸುವಂತೆ ಕುದೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಹೋದರೆ ಠಾಣೆಯ ಇನ್ಸ್ಪೆಕ್ಟರ್ ನವೀನ್ ಕುಮಾರ್ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಹುಳ್ಳೇನಹಳ್ಳಿ ಗ್ರಾಮದ ಮುಳಕಟ್ಟಮ್ಮ ದೇವಾಲಯದ ಅರ್ಚಕ ಎಚ್.ಪಿ.ಮಹೇಶ್ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಳ್ಳೇನಹಳ್ಳಿ ಗ್ರಾಮದಲ್ಲಿ ಮುಳಕಟ್ಟಮ್ಮ ದೇವಾಲಯವು ಪುರಾತನ ದೇವಾಲಯವಾಗಿದೆ.ಇಲ್ಲಿ ಹೊನ್ನಗಂಗರಾಜು,ಹಾಗೂ ಎಚ್.ಪಿ.ಮಹೇಶ್ ಆದ ನಾನು ದೇವಾಲಯದ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮ ದಾಯಾದಿಗಳಾದ ಆರ್.ಗಂಗಹುಚ್ಚಯ್ಯ, ಎಚ್.ಆರ್.ಹುಚ್ಚಪ್ಪ, ರಂಗಸ್ವಾಮಿ ಶಾಂತಕುಮಾರಿ, ಎಚ್.ಜಿ.ಹೊನ್ನಗಂಗರಾಜು ಸೇರಿದಂತೆ ಹನ್ನೊಂದು ಮಂದಿ ಪೂಜೆ ನಡೆಸಲು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಈ ಸಂಬಂಧಿಸಿದಂತೆ ನಾವು ದೂರಿ ನೀಡಿ ನ್ಯಾಯ ಒದಗಿಸುವಂತೆ ಕುದೂರು ಪೊಲೀಸ್ ಠಾಣೆಗೆ ಹೋದರೆ ಇನ್ಸ್ಪೆಕ್ಟರ್ ನವೀನ್ ಕುಮಾರ್ ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈಯುವುದಲ್ಲದೇ ನಿಮ್ಮನ್ನು ಬೂಟ್ ಕಾಲಿನಿಂದ ಒದ್ದು ನಿಮ್ಮ ವಿರುದ್ದ ಎಫ್.ಐ.ಆರ್.ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ.ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,ಲೋಕಾಯುಕ್ತ, ಪೊಲೀಸ್ ಪ್ರಾಧಿಕಾರಕ್ಕೆ ಇನ್ಸ್ಪೆಕ್ಟರ್ ವಿರುಧ್ಧ ದೂರು ನೀಡಲಾಗಿದೆ. ಆದರೂ ದೇವಾಲಯ ಮತ್ತು ನಮ್ಮ ಮನೆಯ ಬಳಿಗೆ ಬಂದು ನಮ್ಮನ್ನು ಹುಡುಕಿ ಬಂಧಿಸಲು ಮುಂದಾಗಿದ್ದಾರೆ ಎಂದು ಮಹೇಶ್ ದೂರಿದರು.
ಆರ್.ಗಂಗಹುಚ್ಚಯ್ಯ ಮತ್ತು ಕುಟುಂಬದವರು 100 ವರ್ಷಗಳ ಹಿಂದೆ ಇವರ ಪೂರ್ವಿಕರಿಗೆ ಸಮಾನವಾದ ಜಮೀನು ನೀಡಲಾಗಿದೆ. ಸದರಿ ಜಮೀನನ್ನು ಮಾರಾಟ ಮಾಡಿಕೊಂಡಿದ್ದಾರೆ.ಈಗ ನಮಗೂ ಪೂಜೆ ಮಾಡಲು ಹಕ್ಕು ಬೇಕು ಎಂದು 2009 ರಲ್ಲಿ ಮಾಗಡಿ ನ್ಯಾಯಾಲಯದಲ್ಲಿ ದಾವೆಹೂಡಿ ಒಬ್ಬೊಬ್ಬರು ಐದು ವರ್ಷ ಪೂಜಾ ಕಾರ್ಯಕ್ರಮ ನಡೆಸುವಂತೆ ಆದೇಶ ನೀಡಿದೆ. ಆದರೆ ಯಾರ್ಯಾರು ಯಾವ ವರ್ಷ ಪೂಜೆ ಮಾಡಬೇಕೆಂದು ನ್ಯಾಯಾಲಯ ಯಾವುದೇ ಸಂಪೂರ್ಣ ಆದೇಶ ನೀಡಿಲ್ಲ. ಈ ಆದೇಶವನ್ನು ಆರ್ ಎ.6/2024 ರಲ್ಲಿ ನ್ಯಾಯಾಲಯದಲ್ಲಿ ಹೊನ್ನಗಂಗರಾಜು, ಗಂಗಾಧರಸ್ವಾಮಿ, ಮಹೇಶ ಎಂಬುವರು ಅರ್ ಗಂಗಹುಚ್ಚಯ್ಯ ಸೇರಿದಂತೆ ಹದಿನೈದು ಮಂದಿ ವಿರುದ್ದ ಮೇಲ್ಮನವಿ ಸಲ್ಲಿಸಿ ನ್ಯಾಯಾಲಯದ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದರು.
ಕಾನೂನನ್ನು ಧಿಕ್ಕರಿಸಿ ಆರ್ ಗಂಗಹುಚ್ಚಯ್ಯ ಮತ್ತು ಅವರ ಕುಟುಂಬದವರು ಸೇರಿ ದೇವಾಲಯದ ಬೀಗ ಮುರಿದು ಅಕ್ರಮವಾಗಿ ದೇವಾಲಯ ಪ್ರವೇಶಿಸಿಸಲು ಮುಂದಾಗಿದ್ದಾರೆ.ಈ ಸಂಬಂಧ ಕುದೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಸಂಬಂಧಪಟ್ಟವರನ್ನು ಕರೆಸಿ ನಮಗೆ ನ್ಯಾಯ ಕೊಡಿಸಲು ಮುಂದಾಗದೇ ದೂರು ಕೊಟ್ಟವರಾದ ನಮ್ಮಗಳಿಗೆ ಇನ್ಸ್ಪೆಕ್ಟರ್ ನವೀನ್ ಕುಮಾರ್ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರಲ್ಲದೇ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ.
ಅರ್ಚಕ ಹಾಗೂ ವಕೀಲನಾಗಿರುವ ನನಗೆ ಬೂಟ್ ಕಾಲಿನಿಂದ ಒದೆಯುವುದಾಗಿ ಬೆದರಿಸಿ ನಮ್ಮ ಸಂಘಕ್ಕೆ ದೂರು ನೀಡಿ ವಕೀಲಿ ವೃತ್ತಿಯಿಂದ ವಜಾಗೊಳಿಸುವ ಬೆದರಿಕೆ ಹಾಕಿ ನನ್ನ ವಕೀಲಿ ವೃತ್ತಿಗೆ ಅವಮಾನ ಮಾಡಿದ್ದಾರೆ ಎಂದು ಮಹೇಶ್ ಆರೋಪಿಸಿದರು.
ಹೊನ್ನಗಂಗರಾಜು, ವಸಂತಕುಮಾರಿ, ಮಹೇಶ್, ಹುಚ್ಚಮ್ಮ, ಉಮಾದೇವಿ, ಹೊನ್ನಮ್ಮ, ಪ್ರದೀಪಕುಮಾರ್, ಲಕ್ಷ್ಮೀದೇವಿ, ಕಿಶೋರ್, ಗಂಗಾಧರಮೂರ್ತಿ, ಗಂಗಾಧರಸ್ವಾಮಿ ಮತ್ತಿತರಿದ್ದರು.