ಕನಕಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕನಕಪುರ ತಾಲೂಕು ಬೆಟ್ಟೆಗೌಡನದೊಡ್ಡಿ ಗ್ರಾಮ ಘಟಕದ ಉದ್ಘಾಟನೆಯನ್ನು ಹಾಗೂ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಜನ್ಮದಿನಾಚರಣೆಯನ್ನು ಬೆಟ್ಟೆಗೌಡನದ ದೊಡ್ಡಿ ಗ್ರಾಮದಲ್ಲಿ ಆಚರಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ಮಾತನಾಡಿ, ರೈತ ಕುಲಕ್ಕೆ ಆಗುವ ಅನ್ಯಾಯಗಳನ್ನು ತಡೆಯುವ ನಿಟ್ಟಿನಲ್ಲಿ 1980ರಿಂದಲೂ ತನ್ನದೇ ಆದ ಹೋರಾಟವನ್ನು ಮುಂದುವರಿಸುತ್ತಾ ಬಂದಿದೆ. ಸರ್ಕಾರದ ರೈತ ವಿರೋಧ ನೀತಿಗಳನ್ನು ವಿರೋಧಿಸುವ ವಿರೋಧಪಕ್ಷವಾಗಿ ರೈತ ಸಂಘ ಕಾರ್ಯನಿರ್ವಹಿಸುತ್ತಿದೆ. ರೈತ ಸಂಘದ ಸಂಸ್ಥಾಪಕರಾದಂತಹ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ಸಿದ್ಧಾಂತಗಳನ್ನು ಜೀವಂತವಾಗಿರಿಸಿ ರೈತ ಈ ದೇಶದ ನೌಕರನಲ್ಲ ಮಾಲೀಕ ಎಂಬ ಮಾತನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರೈತ ಸಂಘ ಹೋರಾಡುತ್ತಿದೆ.
ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ರವರ ಕೊಡುಗೆ ರೈತ ಕುಲಕ್ಕೆ ಅಪಾರವಾದದ್ದು ವಿದೇಶದಲ್ಲೂ ಕೂಡ ರೈತ ಸಂಘಟನೆಯ ಹೆಸರನ್ನು ಪ್ರಹರಿಸುವಂತೆ ಮಾಡಿದರು. ಹುಟ್ಟು ಹೋರಾಟಗಾರರಾದ ಅವರು ಸಾಮಾಜಿಕ, ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಟದಲ್ಲಿ ತೊಡಗುತ್ತಿದ್ದರು.
ರೈತ ಕುಲಕ್ಕೆ ಆಗುವ ಅನ್ಯಾಯಗಳನ್ನು ತಡೆಯುವ ನಿಟ್ಟಿನಲ್ಲಿ 1980 ರಿಂದಲೂ ತನ್ನದೇ ಆದ ಹೋರಾಟವನ್ನು ಅಂಕಿ ಅಂಶಗಳ ಮೂಲಕ ರೈತರನ್ನು ಜಾಗೃತಿಗೊಳಿಸುವುದರಲ್ಲಿ ಶಕ್ತರಾಗಿದ್ದರು. ಪ್ರತಿಯೊಬ್ಬ ರೈತರ ಮನದಲ್ಲಿ ಆತ್ಮಸ್ಥೈರ್ಯ, ಸ್ವಾಭಿಮಾನವನ್ನು ಬಿತ್ತಿದ ವಿಶ್ವ ರೈತನಾಯಕ ಸಮಾಜಮುಖಿ ಹೃದಯವಂತ.
ನಂಜುಂಡಸ್ವಾಮಿ ರವರು ಮರುಜಪ್ತಿ ಚಳುವಳಿ, ನೀರ ಚಳುವಳಿ, ಗ್ರಾನೆಟ್ ಚಳುವಳಿಯಂತ ಅನೇಕ ಚಳುವಳಿಗಳ ಮುಂಚೂಣಿ ನಾಯಕರಾಗಿದ್ದರು. ಮೊಟ್ಟಮೊದಲ ಬಾರಿಗೆ ರೈತ ಈ ದೇಶದ ಮಾಲೀಕ, ರೈತ ಸಾಲಗಾರನಲ್ಲ ಸರ್ಕಾರವೇ ರೈತನಿಗೆ ಬಾಕಿದಾರ ಎಂದು ಮೊಟ್ಟಮೊದಲ ಬಾರಿಗೆ ರೈತರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದವರು, ರೈತ ಸಂಘಕ್ಕೆ ಅವರ ಕೊಡುಗೆ ಅಪಾರವಾದದ್ದು ಎಂದು ಸ್ಮರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷರಾದ ಕೆಬ್ಬಳ್ಳಿ ಶಿವರಾಜು ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಒಗ್ಗಟ್ಟಿನಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ, ಕೇಂದ್ರ ಸರ್ಕಾರ ಹಿಂಪಡೆದಿರುವ ರೈತ ವಿರೋಧಿ ಮೂರು ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದು ವಿಪರ್ಯಾಸವೇ ಸರಿ, ಮುಂದಿನ ದಿನಗಳಲ್ಲಿ ನಾವು ಸಂಘಟಿತರಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಕೋಡಿಹಳ್ಳಿ ಶಿವರಾಜು, ಅರುಣ ಗೌರಮ್ಮ, ಶೋಭಮ್ಮ ¨ಹಾಜರಿದ್ದರು. ಈ ಸಂದರ್ಭದಲ್ಲಿ ಬೆಟ್ಟೆಗೌಡನದೊಡ್ಡಿ ರವಿಕುಮಾರ್, ಕುಮಾರ, ಸ್ವಾಮಿ, ಕೆಂಪೇಗೌಡ, ನಾಗರಾಜು, ಪುಟ್ಟಸ್ವಾಮಿ ಮುಂತಾದವರು ರೈತ ಸಂಘಕ್ಕೆ ಸೇರ್ಪಡೆಯಾದರು.