ನೆಲಮಂಗಲ: ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುಟ್ಟಣ್ಣ ಪವಿತ್ರವಾದ ಶಿಕ್ಷಕರ ಕ್ಷೇತ್ರವನ್ನು ಅಪವಿತ್ರ ಗೊಳಿಸಿದ್ದಾರೆ, ಶಿಕ್ಷಕ ಸಮುದಾಯಕ್ಕೆ ದ್ರೋಹವೆಸಗಿ ಅಧಿಕಾರಕ್ಕಷ್ಟೇ ಸೀಮಿತರಾಗಿದ್ದ ಅವಕಾಶವಾದಿಯನ್ನು ದೂರವಿರಿಸಿ ನನಗೊಮ್ಮೆ ಅವಕಾಶ ನೀಡಿ ಈ ಬಾರಿ ನನ್ನನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎ.ಪಿ ರಂಗನಾಥ್, ಮತದಾರರಲ್ಲಿ ಮನವಿ ಮಾಡಿದರು.
ನೆಲಮಂಗಲ ನಗರದ ಮಾಜಿ ಶಾಸಕ ಡಾ. ಕೆ ಶ್ರೀನಿವಾಸ್ ಮೂರ್ತಿ ತೋಟದ ಮನೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಕರ ಕ್ಷೇತ್ರದ ಚುನಾವಣೆ ಶಿಕ್ಷಕರ ಹಿತಕ್ಕಾಗಿ ನಡೆಯುತ್ತಿಲ್ಲ. ಪುಟ್ಟಣ್ಣ ಅವರ ಹಿತಕ್ಕಾಗಿ ನಡೆಯುತ್ತಿದೆ. ಅವರು ಕಾಲಕ್ಕೆ ತಕ್ಕಂತೆ ಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರುತ್ತಿದ್ದಾರೆ.
ಪುಟ್ಟಣ್ಣ ಅವರ ಅಧಿಕಾರದ ದಾಹದಿಂದಾಗಿ ಈ ಉಪಚುನಾವಣೆ ನಡೆಯುತ್ತಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರದ ಜನತೆ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಶಿಕ್ಷಕರ ಕ್ಷೇತ್ರ ಬಿಜೆಪಿ ಹಾಗೂ ಜೆಡಿಎಸ್ ನ ಭದ್ರಕೋಟೆಯಾಗಿದ್ದು. ನನ್ನನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಡಾ. ಕೆ ಶ್ರೀನಿವಾಸಮೂರ್ತಿ ಮಾತನಾಡಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪುಟ್ಟಣ್ಣ ಅವರು ಇದೀಗ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಸಮಯಕ್ಕೆ ತಕ್ಕಂತೆ ಪಕ್ಷ ಬದಲಿಸುವ ಮೂಲಕ ಶಿಕ್ಷಕರಿಗೆ ಮೋಸ ಮಾಡುತ್ತಿರುವ ಇವರಿಗೆ ಪಾಠ ಕಲಿಸಲಿದೆ. ಶಿಕ್ಷಕರ ಕ್ಷೇತ್ರದ ಪಾವಿತ್ರ್ಯ ಅರಿಯದ ಇವರು ಹಣ ಸೇರಿದಂತೆ ಇನ್ನಿತರ ಆಮಿಷಗಳನ್ನು ಶಿಕ್ಷಕರಿಗೆ ಒಡ್ಡುತ್ತಿದ್ದಾರೆ. ಪಕ್ಷಾಂತರಿ ಪುಟ್ಟಣ್ಣ
ಅವರನ್ನು ಸೋಲಿಸುವ ಮೂಲಕ ಅನುಭವಶಾಲಿಯಾಗಿರುವ ವಕೀಲರು, ಪ್ರಭಾವಿಗಳಾಗಿರುವ ಎನ್ ಡಿ ಎ ಅಭ್ಯರ್ಥಿ ರಂಗನಾಥ್ ಅವರಿಗೆ ಮತ ನೀಡುವ ಮೂಲಕ ಶಿಕ್ಷಕರು ತಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ.ಇ ಕೃಷ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ತಿಮ್ಮರಾಯಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ, ಹೇಮಂತ್ ಕುಮಾರ್, ಬಿಜೆಪಿ ನಾಯಕ ಸಪ್ತಗಿರಿ ಶಂಕರ್ ನಾಯಕ್, ಬಿಜೆಪಿ ಮುಖಂಡರಾದ ಜಗದೀಶ್ ಚೌದ್ರಿ, ಭವಾನಿ ಶಂಕರ್ ಬೈರೇಗೌಡ, ಸುಬ್ಬಣ್ಣ, ನರಸೀಪುರ ನಾಗರಾಜು, ಭಾರತೀಪುರ ಮೋಹನ್ ಕುಮಾರ್,ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ, ಮುಖಂಡ ಟಿ.ಕೆ.ನರಸೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಕೆ.ಎಂ.ಶಿವಕುಮಾರ್, ಪಾಪಟ್ಟೆ ಹಾಗೂ ಜೆಡಿಎಸ್ ನಗರಸಭೆ ಸದಸ್ಯರು, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.