ತಿ.ನರಸೀಪುರ: ಕಳಪೆ ಬಿತ್ತನೆ ಬೀಜ, ಸರ್ವೇ ಇಲಾಖೆ ಕರ್ತವ್ಯ ವಿಳಂಬ ನೀತಿ, ರೈತರ ಸಮಸ್ಯೆಗೆ ಸ್ಪಂದಿಸದ ಕಂದಾಯ ಇಲಾಖೆಯ ನಿರ್ಲಕ್ಷ÷್ಯವನ್ನು ಖಂಡಿಸಿ ತಾಲ್ಲೂಕು ಆಡಳಿತದ ವಿರುದ್ಧ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ವಿದ್ಯೋದಯ ವೃತ್ತದಿಂದ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಜಮಾವಣೆಗೊಂಡು ವಿದ್ಯೋದಯ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ನಡೆಸಿ ತಾಲೂಕು ಆಡಳಿತದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು.
ಪ್ರತಿಭಟನೆ ಮೆರವಣಿಗೆ ತಾಲ್ಲೂಕು ಕಚೇರಿ ತಲುಪಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತದ ವೈಫಲ್ಯವನ್ನು ಖಂಡಿಸಿ ಘೋಷಣೆ ಕೂಗಿ ರೈತರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳನ್ನು ಬದಲಾಯಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು. ನಂತರ ಗ್ರೇಡ್ -2 ತಹಸೀಲ್ದಾರ್ ರಾಜಕಾಂತ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಕುರಿತು ಜಿಲ್ಲಾಧ್ಯಕ್ಷರಾದ ಪ್ರಭುಸ್ವಾಮಿ ಮಾತನಾಡಿ, ರೈತರು ಬೆಳೆದ ಆಹಾರ ಪದಾರ್ಥಗಳ ಸಾಗಣೆ ಮಾಡಲು ರಸ್ತೆಗಳಿಲ್ಲದೆ ಸಾಕಷ್ಟು ತೊಂದರೆ ಉಂಟಾಗಿದ್ದು, ಈ ಬಗ್ಗೆ ತಹಸೀಲ್ದಾರ್ ಅವರಿಗೆ ನಕಾಶೆಯಲ್ಲಿರುವ ಬಂಡಿದಾರಿ, ರಸ್ತೆಗಳ ಒತ್ತುವರಿಯನ್ನು ಬಿಡಿಸುತ್ತಿಲ್ಲ. ತಾಲೂಕಿನ ಬಹುಪಾಲು ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ. ಇದರಿಂದ ರೋಗಿಗಳು ಸಂಕಷ್ಟ ಎದುರಾಗಿದೆ. ಅಲ್ಲದೆ ಸರ್ವೇ ಇಲಾಖೆ ಕಳೆದ 3 ತಿಂಗಳಿಂದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಪರವಾನಗಿ ಭೂಮಾಪಕರು ಧರಣಿಯಿಂದ ಸಾಕಷ್ಟು ಕಡತಗಳು ಬಾಕಿ ಉಳಿದಿವೆ. ಇದರಿಂದ ಸಬ್ ರಿಜಿಸ್ಟರ್ ನೋಂದಣಿ ಕಾರ್ಯ ಕೂಡ ಕುಸಿದಿದೆ. ಈ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಸರ್ಕಾರಿ ಕೆಲಸಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದು ತಪ್ಪಿಲ್ಲ. ತಹಸೀಲ್ದಾರ್ ಅವರಿಗೆ ಚೆಕ್ ಡ್ಯಾಮ್, ರಸ್ತೆ, ಬಂಡಿದಾರಿ, ಸ್ಮಶಾನದ ಒತ್ತುವರಿ ಬಿಡಿಸುವಲ್ಲಿ ತಾಲೂಕು ಆಡಳಿತ ವಿಫಲ. ಕಬ್ಬು ಬೆಳೆಗೆ ಸರ್ಕಾರ 50ರೂ ಹೆಚ್ಚುವರಿ ಹಣವನ್ನು ನೀಡಿದೆ. ಆದರೆ ಅದು ರೈತರಿಗೆ ತಲುಪಿಲ್ಲ.ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಬೇಕು ಎಂದು ಅಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ನಾಗಲಗೆರೆ ಶಿವಕುಮಾರ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಲಂಚಗುಳಿತನ ತಾಂಡವಾಡುತ್ತಿದೆ. ಸಾರ್ವಜನಿಕ ಕೆಲಸದ ವಿಳಂಬಕ್ಕೆ ಕಾರಣ ಯಾರು, ರಾಜಕಾರಣಿಗಳು ತಮ್ಮ ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಸಾರ್ವಜನಿಕರು ತೆರಿಗೆ ಪಾವತಿಸಿಯೂ ಕೆಲಸ ನಡೆಯದೆ ಇರುವುದರಿಂದ ರೈತರು ಅನಾಥ ಪ್ರಜ್ಞೆ ಕಾಡುತ್ತಿದೆ.ಎಲ್ಲ ಇಲಾಖೆಗಳಲ್ಲೂ ಲಂಚಗುಳಿತನ ಎಲ್ಲೆ ಮೀರಿದೆ.ಅಧಿಕಾರಿಗಳು ಕೆಲಸ ಮಾಡಲು ಲಂಚದ ಅನಿವಾರ್ಯತೆ ಇದ್ದರೆ ಪ್ರಮಾಣದ ಪಟ್ಟಿಯನ್ನು ಸರ್ಕಾರಿ ಕಚೇರಿಗಳಲ್ಲಿ ಪ್ರಕಟಿಸಬೇಕು. ಜನರು ಅಷ್ಟು ಹಣವನ್ನು ಕೊಟ್ಟು ಜನರು ಕೆಲಸ ಮಾಡಿಕೊಳ್ಳತ್ತಾರೆ ಎಂದರು
ಪ್ರಾಂತ್ಯ ಮಹಿಳಾ ಪ್ರಮುಖ ಪುಟ್ಟಮ್ಮ ಮಾತನಾಡಿ, ಭಾರತೀಯ ಕಿಸಾನ್ ಸಂಘ ಪ್ರತಿ ತಿಂಗಳು ಸಭೆ ನಡೆಸಿ ಕಂದಾಯ ಇಲಾಖೆಗೆ ನಕ್ಷೆಯಲ್ಲಿರುವ ಬಂಡಿದಾರಿ, ಸರ್ಕಾರಿ ಗೋಮಾಳಗಳನ್ನು ತೆರವು ಮಾಡಿಸುವಂತೆ ಮನವಿ ಸಲ್ಲಿಸಿದರೂ ಇಲ್ಲಿ ತನಕ ಕಾರ್ಯೋ ನ್ಮುಖರಾಗಿಲ್ಲ. ಕೃಷಿ ಅಧಿಕಾರಿಗಳು ಕಂಪನಿಗಳ ಮುಖೇನ ಕಳಪೆ ಬಿತ್ತನೆ ಬೀಜ ಸರಬರಾಜು ಮಾಡುತ್ತಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ರಸಗೊಬ್ಬರ, ಬಿತ್ತನೆ ಬೀಜ ಅಕ್ರಮ ದಾಸ್ತಾನು ಮಾಡಲಾಗುತ್ತಿದೆ. ಇದರಿಂದ ತಾಲೂಕು ಆಡಳಿತ ಸಂಪೂರ್ಣ ವೈಫಲ್ಯವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ್ಯ ಸದಸ್ಯ ಶ್ರೀಕಂಠೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ, ರವಿ ಗಂಡತೂರು, ಉಪಾಧ್ಯಕ್ಷ ಬೆನಕನಹಳ್ಳಿ ಪರಮೇಶ್, ಮಾಲಂಗಿ ಪ್ರಭುರಾಜ್, ಕಾರ್ಯದರ್ಶಿ ದೊಡ್ಡನಹುಂಡಿ ಪ್ರಭಾಕರ್, ಕೊಳತ್ತೂರು ಜ್ಯೋತಿ ರಮೇಶ್, ಬನ್ನಳ್ಳಿ ಹುಂಡಿ ಜಯಶೀಲ, ಮಂಜೇಶ್, ನಾಗರಾಜು ಚಿಮ್ಮಿಲಿ ನಾರಾಯಣ, ಸಿದ್ದರಾಜು, ಮಹೇಶ್, ಶಶಿಕುಮಾರ್, ದರ್ಶನ್, ಮಹಾಂತೇಶಪ್ಪ, ನಟರಾಜ್, ಕಾರ್ ಮಲಪ್ಪ, ಮಹಿಳಾ ಯುವ ಘಟಕದ ರೂಪಶ್ರೀ, ನಾಯಕರ ಸಂಘದ ಸಿದ್ದರಾಜು, ಅಕ್ಕೂರು ದೊಡ್ಡಿ ಶಂಕರ, ಹಲವಾರ ಅನಿಲ್, ನಿಲಸೋಗೆ ಸಿದ್ದರಾಜು, ಚಿಕ್ಕ ಕಲ್ಕುಣಿ ಸಿದ್ದರಾಜು, ನಾಗಲಗೆರೆ ಗುರುಮಲ್ಲಯ್ಯ, ರಾಜಪ್ಪಾಜಿ, ಮುಕುಂದ,ರಾಜೇAದ್ರ ಸಂಘದ ಸದ್ಯಸರುಗಳು ಭಾಗವಹಿಸಿದ್ದರು.
ತಿ.ನರಸೀಪುರ ತಾಲ್ಲೂಕು ಆಡಳಿತದ ವಿರುದ್ಧ ಪ್ರತಿಭಟನೆ



