ಚನ್ನಪಟ್ಟಣ: ಆನೆ ಕಾರ್ಯಾಚರಣೆ ಆರಂಭಗೊಂಡ ದಿನವೇ ಪುಂಡಾನೆಯೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಗೊಂಡಿದೆ. ಆದರೆ, ಸೆರೆಯಾದ ಪುಂಡಾನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಆರೋಗ್ಯ ದೃಢವಾಗಿಲ್ಲ ಎಂಬ ಕಾರಣದಿಂದ ಪುನಃ ಕಾಡಿಗೆ ಬಿಡಲಾಗಿದೆ.
ಜಿಲ್ಲೆಯಲ್ಲಿ ಕಾಡಾನೆಗಳ ಸಮಸ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಎರಡು ಪುಂಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಮನಗರ, ಚನ್ನಪಟ್ಟಣ, ಸಾತನೂರು ವಲಯಗಳಲ್ಲಿ ಅತೀ ಹೆಚ್ಚು ಉಪಟಳ ನೀಡುತ್ತಿರುವ ಎರಡು ಕಾಡಾನೆಗಳ ಸೆರೆಗೆ ಗುರುವಾರ ಶಾಸಕ ಸಿ.ಪಿ.ಯೋಗೇಶ್ವರ್ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚಾಲನೆ ನೀಡಿದ್ದರು. ಕಾರ್ಯಾಚರಣೆಗೆ ಚಾಲನೆ ದೊರಕಿದ ಕೆಲವೇ ಗಂಟೆಗಳಲ್ಲಿ ತಾಲೂಕು ವಲಯದ ಚಿಕ್ಕಮಣ್ಣುಗುಡ್ಡೆ ಅರಣ್ಯಪ್ರದೇಶದಲ್ಲಿ 35 ರಿಂದ 36 ವರ್ಷದ ಒಂಟಿಸಲಗವೊಂದನ್ನು ಕಾರ್ಯಾಚರಣೆ ತಂಡ ಖೆಡ್ಡಾಕ್ಕೆ ಬೀಳಿಸುವಲ್ಲಿ ಸಫಲಗೊಂಡಿತ್ತು.ಅರಣ್ಯ ಇಲಾಖೆ ಕಚೇರಿ ಹಿಂಭಾಗವೇ ಕಾರ್ಯಚಾರಣೆ: ಚನ್ನಪಟ್ಟಣ ವಲಯ ಅರಣ್ಯ ಇಲಾಖೆ ಕಚೇರಿಯ ಸನಿಹವೇ ಈ ಪುಂಡಾನೆ ಸೆರೆಹಿಡಿಯಲಾಗಿತ್ತು. ಕೆಂಗಲ್ ಬಳಿ ಇರುವ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಪುಂಡಾನೆಯ ಜಾಡುಹಿಡಿದು ಹೊರಟ ಕಾರ್ಯಾಚರಣೆ ತಂಡ ಪುಂಡಾನೆಗೆ ಅರವಳಿಕೆ ಮದ್ದು ನೀಡಿ ಖೆಡ್ಡಾಕ್ಕೆ ಬೀಳಿಸಿದ್ದರು. ಗುರುವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ಪಡೆ ಕೂಬಿಂಗ್ ಆರಂಭಿಸಿದ್ದು, ಕಾರ್ಯಾಚರಣೆಗೆ ಮಹೇಂದ್ರ ಅಂಡ್ ಟೀಂ ಸಾಥ್ ನೀಡಿದವು. ಚಿಕ್ಕಮಣ್ಣುಗುಡ್ಡೆ ಅರಣ್ಯಪ್ರದೇಶದಲ್ಲಿ ( ವಲಯ ಅರಣ್ಯ ಕಚೇರಿ ಹಿಂಭಾಗ) ಆನೆ ಬೀಡುಬಿಟ್ಟಿರುವ ಮಾಹಿತಿ ತಿಳಿದಿದ್ದ ಕಾರ್ಯಾಚರಣೆ ತಂಡ, ಆಪರೇಷನ್ ಆರಂಭಿಸಿತು. ಡ್ರೋನ್ ಕ್ಯಾಮೆರಾ ಮೂಲಕ ಆನೆಯನ್ನು ಗುರುತಿಸಿ, ಪಶುವೈದ್ಯರಾದ ಡಾ. ರಮೇಶ್, ಡಾ. ಕಿರಣ್ ಹಾಗೂ ಡಾ.ನಜೀರ್ ಅಹಮದ್ ರವರ ಸಹಕಾರದಿಂದ ಪುಂಡಾನೆಗೆ ಅರವಳಿಕೆ ಮದ್ದನ್ನು ಶೂಟ್ ಮಾಡುವಲ್ಲಿ ಸಫಲಗೊಂಡರು. ಮದ್ದು ತಗುಲಿದ ಪುಂಡಾನೆ ಸ್ಥಳದಿಂದ ಕೆಲದೂರ ಕ್ರಮಿಸಿ ಕುಸಿದುಬಿದ್ದಿದೆ. ತದನಂತರ, ಕುಸಿದುಬಿದ್ದ ಪುಂಡಾನೆಗೆ ಹಗ್ಗಕಟ್ಟಿ ಸೆರೆಹಿಡಿಯಲಾಗಿತ್ತು.
ಕಾಡಾನೆ ಪುಂಡಾಟ: ಸಾಕಾನೆಯಾದ ಮಹೇಂದ್ರ ನೇತೃತ್ವದಲ್ಲಿ ಧನಂಜಯ, ಹರ್ಷ, ಈಶ್ವರ, ಸುಗ್ರೀವ, ಹಾಗೂ ಏಕಲವ್ಯ ಸಾಕಾನೆಗಳು ಮೊದಲ ದಿನವೇ ಯಶಸ್ವಿ ಕಾರ್ಯಾಚರಣೆಗೆ ಸಾಥ್ ನೀಡಿದವು. ಸೆರೆಯಾದ ಕಾಡಾನೆಯನ್ನು ಹಗ್ಗದಿಂದ ಬಂಧಿಸಿ ಶಿಬಿರದ ಬಳಿ ಕರೆತರುವ ವೇಳೆ ಸಾಕಾನೆಗಳ ತಂಡವನ್ನು, ಸೆರೆಸಿಕ್ಕ ಕಾಡಾನೆ ಸಾಕಷ್ಟು ಸುಸ್ತು ಬೀಳಿಸಿದೆ. ಹೆಜ್ಜೆಹೆಜ್ಜೆಗೂ ಕುಸಿದು ಬೀಳುತ್ತಿದ್ದ ಪುಂಡಾನೆಯ ಮೊಂಡಾಟಕ್ಕೆ ಆಪರೇಷನ್ ಸ್ಪೆಷಲಿಸ್ಟ್ ಗಳಾದ ಮಹೇಂದ್ರ ಅಂಡ್ ಟೀಂ ಸುಸ್ತು ಬಿದ್ದಿವೆ.ಮರಳಿ ಕಾಡಿಗೆ: ಸೆರೆಸಿಕ್ಕ ಕಾಡಾನೆಯನ್ನು ಕರೆತರುವುದು ದುಸ್ಸಾಹಸ ಒಂದೆಡೆಯಾದರೆ, ಸೆರೆಯಾದ ಹಾಗೂ ನಂತರ ನಡೆದ ವಿದ್ಯಮಾನಗಳಿಂದ ಕಾಡಾನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದರ ಮಧ್ಯೆ ಸಂಜೆ ಆರರ ನಂತರ ಕಾರ್ಯಾಚರಣೆ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲವಾದ ಹಿನ್ನೆಲೆಯಲ್ಲಿ, ಪಶುವೈದ್ಯರಾದ ಡಾ. ರಮೇಶ್, ಡಾ. ಕಿರಣ್ ಹಾಗೂ ಡಾ.ನಜೀರ್ ಅಹಮದ್ ಸಲಹೆ ಮೇರೆಗೆ ಸೆರೆಯಾದ ಪುಂಡಾನೆನ್ನು ಪುನಃ ಕಾಡಿಗೆ ಬಿಡುಗಡೆ ಮಾಡಲಾಗಿದೆ.ಪುಂಡಾನೆ: ಸೆರೆಯಾಗಿ ಪುನಃ ಬಿಡುಗಡೆಯಾಗಿರುವ 35 ವರ್ಷದ ಈ ಗಂಡಾನೆ ಸದಾ ಚಿಕ್ಕಮಣ್ಣುಗುಡ್ಡೆ ವ್ಯಾಪ್ತಿಯಲ್ಲಿ ಬೀಡುಬಿಟ್ಟಿತ್ತು. ಇತ್ತೀಚಿಗೆ ಈ ಭಾಗದಲ್ಲಿ ಸಾಕಷ್ಟು ಉಪಟಳ ನೀಡುತಿತ್ತು ಎನ್ನಲಾಗಿದೆ. ದೊಡ್ಡಮರಗಳನ್ನು ಉರುಳಿಸುವ ಕ್ರೇಜ್ ಹೊಂದಿದ್ದ ಈ ಕಾಡಾನೆ, ತೋಟದ ಬೆಳೆಗಳನ್ನು ನಾಶಪಡಿಸುವ ಜೊತೆಗೆ, ಪಂಪು ಮೋಟಾರ್ ಗಳನ್ನು ನಾಶಪಡಿಸುವ ಕುಖ್ಯಾತಿ ಹೊಂದಿತ್ತು. ಈ ಪುಂಡಾನೆ ಸದಾ ಸುತ್ತಾಕುವ ಚಾಳಿ ಹೊಂದಿತ್ತು ಎನ್ನಲಾಗಿದೆ. ಸದಾ ಪುಂಡಾಟ ನಡೆಸುತ್ತಾ ಇಲಾಖೆ ಮತ್ತು ರೈತರ ತಲೆಬಿಸಿಗೆ ಕಾರಣವಾಗಿತ್ತು. ರಾತ್ರಿಯಷ್ಟೇ ಅಲ್ಲದೇ ಹಗಲಿನಲ್ಲೂ ತೋಟತುಡಿಕೆಗಳಿಗೆ ಲಗ್ಗೆ ಇಡುತ್ತಿದ್ದ ಈ ಪುಂಡನನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಟಾರ್ಗೆಟ್ ಮಾಡಿತ್ತು. ಎರಡು ಆನೆಗಳ ಸೆರೆಗೆ ಅನುಮತಿ ದೊರಕಿದ ತಕ್ಷಣವೇ ಇಲಾಖೆಯ ಅಧಿಕಾರಿಗಳು ಇದನ್ನು ಟಾರ್ಗೆಟ್ ಮಾಡಿದ್ದರು. ಪ್ರಾರಂಭದಲ್ಲಿಯೇ ಸೆರೆಸಿಕ್ಕನಾದರೂ, ಕಾರಣಾಂತರಗಳಿAದ ಮರಳಿ ಗೂಡಿಗೆ ಸೆರೆಕೊಂಡಿದ್ದಾನೆ.ಮೊದಲ ದಿನದ ಕಾರ್ಯಾಚರಣೆಯಲ್ಲಿ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾರ್ಗದರ್ಶನದಲ್ಲಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಸೇರಿದಂತೆ ರಾಮನಗರ ಪ್ರಾದೇಶಿಕ ವಿಭಾಗದ ಎಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ನೂರಕ್ಕೆ ಅಧಿಕ ಮಂದಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆ ಆರಂಭಗೊಂಡ ದಿನವೇ ಪುಂಡಾನೆ ಸೆರೆ



