ಬೆಂಗಳೂರು: ಕೋರ್ಟ್ನಲ್ಲಿ ತನ್ನ ಎದುರು ಸಾಕ್ಷಿ ಹೇಳದಂತೆ ಧಮ್ಕಿ ಹಾಕಲು ಹೋದ ಕುಖ್ಯಾತ ರೌಡಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಆನೇಕಲ್ನ ವೀವರ್ಸ್ ಕಾಲೋನಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಆನೇಕಲ್ ನ ರೌಡಿ ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜ ಕೊಲೆಯಾದ ರೌಡಿ ಶೀಟರ್.
ಕೃತ್ಯ ನಡೆಸಿದ ಶಶಿಕುಮಾರ್, ವಿಜಯ್ ಅಲಿಯಾಸ್ ಟ್ಯಾಟೂ ವಿಜಿಯನ್ನುಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಮೆಂಟಲ್ ಮಂಜ ಕಳೆದ ಆರೇಳು ತಿಂಗಳಿನ ಹಿಂದೆ ಮನೆಯೊಂದಕ್ಕೆ ನುಗ್ಗಿ ಗಲಾಟೆ ಮಾಡಿದ್ದ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧಕೇಸ್ ದಾಖಲಾಗಿತ್ತು.
ಈ ಪ್ರಕರಣಕ್ಕೆ ಆರೋಪಿ ವಿಜಯ್ ಅಲಿಯಾಸ್ ಟ್ಯಾಟೂ ವಿಜಿ ಸಾಕ್ಷಿ ಆಗಿದ್ದ. ನಿನ್ನೆ ಟ್ಯಾಟೂ ವಿಜಿಗೆ ಫೋನ್ ಮಾಡಿ, ಕೋರ್ಟ್ನಲ್ಲಿ ಸಾಕ್ಷಿ ಹೇಳದಂತೆ ಮೆಂಟಲ್ ಮಂಜ ಅವಾಜ್ ಹಾಕಿದ್ದ.ಈ ಬಗ್ಗೆ ಫೋನ್ನಲ್ಲಿಯೇ ಮೆಂಟಲ್ ಮಂಜ ಮತ್ತು ಟ್ಯಾಟೂ ವಿಜಿ ನಡುವೆ ವಾಗ್ಯುದ್ಧ ಹಾಗೂ ಅವಾಚ್ಯ ಬೈಗುಳಗಳ ವಿನಿಮಯ ನಡೆದಿತ್ತು. ಕೆರಳಿದ ಮೆಂಟಲ್ ಮಂಜ ಹುಡುಗರ ಜೊತೆ ಟ್ಯಾಟೂ ವಿಜಿ ಮನೆ ಬಳಿ ಹೋಗಿದ್ದ. ಏರಿಯಾದ ರಸ್ತೆಯಲ್ಲಿ ಟ್ಯಾಟೂ ವಿಜಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದ.
ಅಷ್ಟು ಹೊತ್ತಿಗೆ ಟ್ಯಾಟೂ ವಿಜಿ ಸ್ನೇಹಿತ ಶಶಿ ಅಲ್ಲಿಗೆ ಬಂದಿದ್ದು, ಎರಡು ಕಡೆಯವರೂ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಮೆಂಟಲ್ ಮಂಜನನ್ನು ಹೀಗೇ ಬಿಟ್ಟರೆ ನಮ್ಮನ್ನು ಮುಗಿಸುತ್ತಾನೆ ಎಂದು ಮಂಜನ ಎದೆಗೆ ಟ್ಯಾಟೂ ವಿಜಿ ಮತ್ತು ಶಶಿ ಚಾಕುವಿನಿಂದ ಇರಿದಿದ್ದಾರೆ.
ಮೆಂಟಲ್ ಮಂಜ ಕೆಳಗೆ ಉರುಳಿ ಬೀಳುತ್ತಿದ್ದಂತೆ ಜೊತೆಯಲ್ಲಿದ್ದವರು ಪರಾರಿಯಾಗಿದ್ದರು.ಗಂಭೀರವಾಗಿ ಗಾಯಗೊಂಡ ಆತನನ್ನು ಕೂಡಲೇ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಅಲ್ಲಿಂದ. ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೆಲ್ತ್ಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಆನೇಕಲ್ ಪೊಲೀಸ್ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಲೆ ಮಾಡಿದ ಟ್ಯಾಟೂ ವಿಜಿ ಮತ್ತು ಶಶಿಯನ್ನು ಪೊಲೀಸರು ಬಂಧಿಸಿದ್ದಾರೆ.ಕೊಲೆಯಾದ ಮೆಂಟಲ್ ಮಂಜ ಕೊಲೆ, ದರೋಡೆ,ಬೆದರಿಕೆ ಸೇರಿ ಎಂಟಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಏಳು ಪ್ರಕರಣ ಇವೆ. ಮೊನ್ನೆಯಷ್ಟೇ ಮೆಂಟಲ್ ಮಂಜನ ಮೇಲೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆನೇಕಲ್ ಪೊಲೀಸರು 110 ಕೇಸ್ ಹಾಕಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು.
ಕೊಲೆ ಆರೋಪಿ ಶಶಿ ಮೇಲೆ ಈ ಹಿಂದೆ ಎರಡು ಪ್ರಕರಣ ದಾಖಲು ಆಗಿವೆ. ಈತ ಕೊಲೆ ಯತ್ನ ಮತ್ತು ಗಲಾಟೆ ವಿಚಾರದಲ್ಲಿ ಜೈಲಿಗೆ ಹೋಗಿಬಂದಿದ್ದ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾಕು ಇರಿದ ಸೆಕ್ಷನ್ 307 ಕೇಸ್ ದಾಖಲಾಗಿದೆ. ಶಶಿ ಮತ್ತು ಟ್ಯಾಟೂ ವಿಜಿ ಇಬ್ಬರೂ ಗಲಾಟೆಗಳನ್ನು ಮಾಡಿಕೊಳ್ಳುತ್ತಿದ್ದರು.