ನೆಲಮಂಗಲ: ಬೆಂಗಳೂರು ಸಮೀಪದ ನಗರಕ್ಕೆ ಮೂಲಭೂತ ಸೌಕರ್ಯಗಳಿಗೆ ಮೊದಲ ಆಧ್ಯತೆ ನೀಡಿ ನಗರದ ಒಳಚರಂಡಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಬಹುಜನರ ಬೇಡಿಕೆಯಾದ ನಮ್ಮ ಮೆಟ್ರೋ ನೆಲಮಂಗಲಕ್ಕೆ ಮಾಡಿಕೊಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ನಗರಸಭೆ ವ್ಯಾಪ್ತಿಯ ಸುಭಾಷ್ನಗರದ ಶ್ರೀಬಿರೇಶ್ವರ ಸಮುದಾಯ ಭವನ, ಪ್ರಾರ್ಥನಾ ಮಂದಿರ ಉದ್ಘಾಟನೆ ಮಾಡಿ ಮಾತನಾಡಿದರು.ಕರ್ನಾಟಕವನ್ನು ಹಸಿವು ಮುಕ್ತ ಮಾಡಲು ಶ್ರಮಿಸುತ್ತಿದ್ದೇವೆ, ರಾಜ್ಯದಲ್ಲಿ ಬಡವರ ಆರ್ಥಿಕ ಸ್ಥಿತಿ ಸದೃಢ ಮಾಡಬೇಕು ಎಂಬ ದೃಷ್ಟಿಯಿಂದ ಗ್ಯಾರಂಟಿಗಳನ್ನು ಜಾರಿಗೆ ತಂದು 1.30ಕೋಟಿ ಕುಟುಂಬಗಳಿಗೆ 4ರಿಂದ 5ಸಾವಿರದಷ್ಟು ಸೌಲಭ್ಯ ಸಿಗಲು ಸಹಕಾರಿಯಾಗಿದೆ.
100ಕೋಟಿ 2ಲಕ್ಷ ಜನರು ಉಚಿತ ಬಸ್ ಸೌಲಭ್ಯವನ್ನು ಪಡೆದಿದ್ದಾರೆ ಆದರೆ ವಿರೋಧ ಪಕ್ಷದವರು ಗ್ಯಾರಂಟಿಯನ್ನು ಟೀಕೆ ಮಾಡುತ್ತಾರೆ ನಾವು ಯಾರಿಗೂ ಜಾತಿ ನೋಡಿ ಸೌಲಭ್ಯ ನೀಡಿಲ್ಲ, ಎಲ್ಲಾ ಜಾತಿಯ ಬಡವರಿಗೆ ಗ್ಯಾರಂಟಿ ನೀಡಿದ್ದೇವೆ ಎಂದರು.
ದೇವರು ಇದ್ದಾನೆ : ಕುರುಬರು ಸಾಮಾನ್ಯವಾಗಿ ಶೈವ ಪಂಥಕ್ಕೆ ಸೇರಿದವರು ಕನಕದಾಸರ ನಂತರ ವೈಷ್ಣವ ಪಂಥಕ್ಕೆ ಸೇರಿದರು. ಕುರುಬರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ, ನಾವು ಈಶ್ವರನ ಆರಾಧಕರಾಗಿದ್ದೇವೆ.
ಭೂಮಿಯಲ್ಲಿ ದೇವರಿದ್ದಾನೆ, ಆತ ಒಳ್ಳೆಯದನ್ನು ಮಾಡುವವರಿಗೆ ಮಾತ್ರ ಒಳಿತು ಮಾಡುವುದು, ಸ್ವಾರ್ಥಕ್ಕಾಗಿ ಯೋಚನೆ ಮಾಡುವ, ಬೇರೆಯವರಿಗೆ ಕೆಡುಕು ಮಾಡುವ ವ್ಯಕ್ತಿಗಳಿಗೆ ಒಳ್ಳೆಯದನ್ನು ಮಾಡುವುದಿಲ್ಲ, ಭಕ್ತಿಯಿಂದ ದೇವರನ್ನು ಪೂಜೆ ಮಾಡಿ ಒಳ್ಳೆಯದಾಗುತ್ತದೆ ಎಂದರು.
ನೆಲಮಂಗಲಕ್ಕೆ ಸಿಎಂ ಅಭಯ: ನೆಲಮಂಗಲ ತಾಲೂಕಿಗೆ ವೃಷಾಭಾವತಿಯ ವ್ಯಾಲಿಯ ಮೂಲಕ ನೀರು ಸರಬರಾಜು ಮಾಡಲಿದ್ದು ಅದರಿಂದ ಕೆರೆಗಳಿಗೆ ನೀರು ತುಂಬುವ ಕೆಲಸವಾಗಲಿದೆ, ಈಗಗಾಲೇ ಮಾದವರ ಬಳಿಗೆ ಮೆಟ್ರೋ ಬಂದಿದೆ, ಶೀಘ್ರದಲ್ಲಿ ನೆಲಮಂಗಲ ನಗರಕ್ಕೆ ನಮ್ಮ ಮೆಟ್ರೋ ನೀಡುತ್ತೇನೆ,ನೆಲಮಂಗಲ ನಗರಸಭೆಗೆ ಒಳಚರಂಡಿ ವ್ಯವಸ್ಥೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ,ಈಗ ನೀಡಿರುವ ಅನುದಾನದ ಜತೆ ಹೆಚ್ಚಿನ ಅನುದಾನವನ್ನು ನೀಡುತ್ತೇನೆ ನಾನೇ ಬಂದು ಒಳಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ಮಾಡುತ್ತೇನೆ.ಕುಡಿಯುವ ನೀರಿಗೂ ಆಧ್ಯತೆ ನೀಡಲಾಗುತ್ತದೆ,ಮೂರು ವರ್ಷದಲ್ಲಿ ಎತ್ತಿನ ಹೊಳೆ ಯೋಜನೆ ಪೂರ್ಣ ಗೊಳಿಸಲಾಗುತ್ತದೆ ಎಂದರು.
ಶ್ರೀನಿವಾಸ್ ಆಕ್ಟಿವ್ ಎಂದ ಸಿಎಂ: ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಆಕ್ಟಿವ್ ಆಗಿದ್ದಾನೆ ಪರವಾಗಿಲ್ಲ, ನನ್ನ ಬಳಿ ಬಂದು ನಮ್ಮ ಕ್ಷೇತ್ರಕ್ಕೆ ಯೋಜನೆ ಮಾಡಿ ಈ ಯೋಜನೆ ಮಾಡಿ ಎಂದು ಒತ್ತಾಯ ಮಾಡುತ್ತಿರುತ್ತಾನೆ. ಆ ರೀತಿ ಆಕ್ಟಿವ್ ಆಗಿ ಶಾಸಕರು ಇರಬೇಕು. ನೆಲಮಂಗಲಕ್ಕೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊದಗಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ನೆಲಮಂಗಲ ಶಾಸಕರನ್ನು ಶ್ಲಾಸಿದರು.
ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಮಾತನಾಡಿ ರಾಜ್ಯದ ಬಡ ಜನರಿಗೆ ಗ್ಯಾರಂಟಿಗಳ ಮೂಲಕ ಬಲ ತುಂಬಿದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಿದ್ದು ಇಂದು ನೆಲಮಂಗಲಕ್ಕೆ ಬಂದಿರುವುದು ಸಂತೋಷವಾಗಿದೆ. ಕೇವಲ 6 ತಿಂಗಳಲ್ಲಿ ನಮ್ಮ ನೆಲಮಂಗಲಕ್ಕೆ ಒಳಚರಂಡಿಯನ್ನು ನೀಡಿದ್ದಾರೆ, ನಮ್ಮ ಮೆಟ್ರೋ ನೀಡುತ್ತೇನೆ ಎಂದು ಹೇಳಿ ಕೆರೆಗಳ ನೀರು ತುಂಬಲು ವೃಷಾಭಾವತಿ ವ್ಯಾಲಿಯ ಘೋಷಣೆ ಮಾಡಿರುವುದು ಸಂತೋಷವಾಗಿದೆ. ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಅಭಿವೃದ್ಧಿ ಮಾಡುತ್ತೇನೆ ಎಂದರು.
ಉದ್ಘಾಟನೆ: ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮಾಜಿ ಸಚಿವ ರೇವಣ್ಣನವರ ಮನವಿಯಂತೆ ಶ್ರೀಬಿರೇಶ್ವರ ಸಮುದಾಯ ಭವನಕ್ಕೆ 70ಲಕ್ಷ ಅನುದಾನ ನೀಡಿದ್ದರು ಇಂದು ಅವರೇ ಬಂದು ಉದ್ಘಾಟನೆ ಮಾಡುತ್ತಿರುವುದು ಸಂತೋಷವಾಗಿದೆ.ಈಗಗಾಲೇ ಕುರುಬ ಸಂಘಕ್ಕೆ ನೀಡಿರುವ 1.5ಎಕರೆ ಜಮೀನಿನಲ್ಲಿ ಹಾಸ್ಟಲ್ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಕುರುಬ ಸಂಘದಿಂದ ಮನವಿ ಮಾಡಿದರು.
ಅದ್ಧ್ದೂರಿ ಸ್ವಾಗತ:ನೆಲಮಂಗಲಕ್ಕೆ ಬಂದ ಸಿಎಂ ಸಿದ್ದರಾಮಯ್ಯನವರನ್ನು ಅರಿಶಿನಕುಂಟೆ ಸಮೀಪ ಶಾಸಕ ಎನ್.ಶ್ರೀನಿವಾಸ್, ಮಾಜಿ ಎಂಎಲ್ಸಿ ಕಾಂತರಾಜು ಹಾಗೂ ಮುಖಂಡರು ಸೇಬಿನ ಹಾರ ಹಾಕುವ ಮೂಲಕ ಅದ್ದೂರಿ ಸ್ವಾಗತ ಕೋರಿ 1ಸಾವಿರಕ್ಕೂ ಹೆಚ್ಚು ಬೈಕ್ಗಳ ಬೃಹತ್ ರ್ಯಾಲಿ ಮೂಲಕ ನೆಲಮಂಗಲ ನಗರಕ್ಕೆ ಕರೆತಂದರು.
ಕಾಗಿನೆಲೆ ಮಹಸಂಸ್ಥಾನ ಮಠದ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ವಿಶ್ವ ಗಾಣಿಗರ ಮಠದ ಪೂರ್ಣಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ರೇವಣ್ಣ, ಶಾಸಕ ಎನ್.ಶ್ರೀನಿವಾಸ್, ಎಂಎಲ್ಸಿ ಅ.ದೇವೇಗೌಡ, ಮಾಜಿ ಎಂಎಲ್ಸಿ ಬಿಎಂಎಲ್ ಕಾಂತರಾಜು,ನಗರಸಭೆ ಅಧ್ಯಕ್ಷೆ ಲತಾ ಹೇಮಂತ್ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್ ಗೌಡ,ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್, ಸದಸ್ಯ ಚೇತನ್ ಜಿಲ್ಲಾಧಿಕಾರಿ ಶಿವಶಂಕರ್,ಎಸಿ ಎಂ.ಶ್ರೀನಿವಾಸ್,ಕುರುಬಸಂಘದ ಅಧ್ಯಕ್ಷ ಹೊನ್ನಸಿದ್ದಯ್ಯ,ಮಾಜಿ ಅಧ್ಯಕ್ಷ ಚಿಕ್ಕನಾಗಯ್ಯ,ಬೀರೇಶ್ವರ ಅಭಿವೃದ್ದಿ ಸಮಿತಿ ಅಧ್ಯಕ್ಷ ಗಂಗರಾಜು, ನಾರಾಯಣಪ್ಪ, ನಾಗರಾಜು, ಕನಕ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಲೋಕೇಶ್,ಮುಖಂಡರಾದ ನಾರಾಯಣಗೌಡ, ಟಿ.ನಾಗರಾಜು, ಜಗದೀಶ್ ಇತರರು ಇದ್ದರು.