ನವದೆಹಲಿ: ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧದ ಡೇವಿಸ್ ಕಪ್ ಟೆನಿಸ್ನ ವಿಶ್ವಗುಂಪಿನ (ಒಂದು) ಪಂದ್ಯವನ್ನು ಭಾರತ ಬಿಟ್ಟುಕೊಡುವ ಸಾಧ್ಯತೆಯಿದೆ. ಪಾಕ್ ಪ್ರಯಾಣಕ್ಕೆ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿರುವುದಾಗಿ ಅಖಿಲ ಭಾರತ ಟೆನಿಸ್ ಸಂಸ್ಥೆ ಗುರುವಾರ ತಿಳಿಸಿದೆ.
ಫೆಬ್ರುವರಿ 3 ಮತ್ತು 4ರಂದು ಇಸ್ಲಾಮಾಬಾದಿನಲ್ಲಿ ನಿಗದಿಯಾಗಿರುವ ಈ ಪಂದ್ಯವನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸುವಂತೆ ಭಾರತದ ಕೋರಿಕೆಯನ್ನು ಐಟಿಎಫ್ ಟ್ರಿಬ್ಯೂನಲ್ ತಿರಸ್ಕರಿಸಿದ ನಂತರ ಎಐಟಿಎ, ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡುವ ಬಗ್ಗೆ ಕ್ರೀಡಾ ಸಚಿವಾಲಯದ ಸಮ್ಮತಿಗಾಗಿ ಕಾಯುತ್ತಿದೆ. ‘ಮನವಿ ಈಗಲೂ ಸಚಿವಾಲಯದ ಮುಂದಿದೆ.
ನಾವು ನಿರ್ಧಾರಕ್ಕೆ ಕಾಯುತ್ತಿದ್ದೇವೆ’ ಎಂದು ಎಐಟಿಎ ಮಹಾ ಪ್ರಧಾನ ಕಾರ್ಯದರ್ಶಿ ಅನಿಲ್ ಧುಪರ್ ಎಎಫ್ಪಿಗೆ ತಿಳಿಸಿದರು.
ಭಾರತ ತಂಡದ 18 ಸದಸ್ಯರಿಂದ ವೀಸಾಗಳಿಗೆ ವಿನಂತಿ ಬಂದಿದೆ ಎಂದು ಪಾಕಿಸ್ತಾನ ಟೆನಿಸ್ ಫೆಡರೇಷನ್ನ ಅಧ್ಯಕ್ಷ ಸಮೀಮ್ ಸೈಫುಲ್ಲಾ ಖಾನ್ ತಿಳಿಸಿದರು.