ಹೊಸಕೋಟೆ: ತಾಲೂಕಿನ ಸೂಲಿಬೆಲೆಗೆ ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಬರ ಪರಿಸ್ಥಿತಿಯ ವೀಕ್ಷಿಸಲಾಯಿತು.ಸಚಿವರು ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾಧಿಕಾರಿಗಳೊಂದಿಗೆ ರೈತರ ಜಮೀನುಗಳಿಗೆ ಭೇಟಿ ನೀಡಿ ಮಳೆಯ ಅಭಾವದಿಂದ ಕೃಷಿಕರು ಬೆಳೆದಿರುವ ರಾಗಿ ಬೆಳೆಗಳನ್ನು ಸಚಿವರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ವಿವರಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ತಾಲೂಕಿನಲ್ಲಿ ಒಟ್ಟು 9400 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಭಿತ್ತನೆ ಮಾಡಿದ್ದು ಇದರಲ್ಲಿ 8,680 ಹೆಕ್ಟೇರ್ ಪ್ರದೇಶವು ಮಳೆಯ ಅಭಾವದಿಂದ ಹಾನಿಗೊಳಗಾಗಿದೆ. ತಾಲೂಕಿಗೆ ಶಾಶ್ವತ ನೀರಾವರಿ ವ್ಯವಸ್ಥೆಯಿಲ್ಲದ ಕಾರಣ ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ಒಳಗೊಂಡಂತೆ ಇದೀಗ ಕೃಷ್ಣರಾಜಪುರದ ವೆಂಗಯ್ಯನ ಕೆರೆಯ ನೀರನ್ನು ಸಂಸ್ಕರಿಸಿ ತಾಲೂಕಿನ ಕೆರೆಗಳಿಗೆ ಹರಿಯಲು ಕ್ರಮ ಕೈಗೊಳ್ಳಲಾಗಿದೆ.
ಇದರಿಂದ ತೋಟಗಾರಿಕೆ ಬೆಳೆಗಳು, ಹೂ ಬೆಳೆಯುವ ರೈತರ ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ. ಸರಕಾರದ ಯೋಜನೆಗಳನ್ನು ರೈತರು ಸಮರ್ಪಕವಾಗಿ ಪಡೆದುಕೊಳ್ಳಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮಾಂತರ ಜಿಲ್ಲಾಧಿಕಾರಿ ಡಾ: ಎನ್.ಶಿವಶಂಕರ್ ಜಿಲ್ಲೆಯಲ್ಲಿ 49 ಸಾವಿರ ಹೆಕ್ಟೇರ್ನಷ್ಟು ಜಮೀನು ಬರಪೀಡಿತವಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಲಲಿತಾ ರೆಡ್ಡಿ, ಉಪನಿರ್ದೇಶಕಿ ಗಾಯತ್ರಿ, ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅನುರಾಧಾ. ತಹಶೀಲ್ದಾರ್ ವಿಜಯಕುಮಾರ್, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಕೃಷಿ ಅಧಿಕಾರಿ ರೇಣುಕಾಪ್ರಸನ್ನ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಅಧಿಕಾರಿಗಳು, ಮುಖಂಡರಾದ ನಾರಾಯಣಗೌಡ, ಡಿ.ಟಿ.ವೆಂಕಟೇಶ್ ಇನ್ನಿತರರು ಹಾಜರಿದ್ದರು.