ರಾಮನಗರ: ಹೆಸರಾಯಿತು ಕರ್ನಾಟಕ,ಉಸಿರಾಗಲಿ ಕನ್ನಡ ಎಂಬ ಹಿರಿಯರ ಘೋಷ ವಾಕ್ಯವು ನಮ್ಮಲ್ಲಿ ಸದಾ ಅನುರಣಿಸಬೇಕು. ಕನ್ನಡ ಭಾಷೆಯನ್ನು ಹೆಚ್ಚು ಬಳಸುತ್ತಾ, ಆಡಳಿತ ಭಾಷೆಯಾಗಿ ಸ್ವೀಕರಿಸುತ್ತಾ ಅದರ ಕೀರ್ತಿಯನ್ನು ಎತ್ತಿ ಹಿಡಿಯಬೇಕು. ಕನ್ನಡವೆಂದರೆ ನಮ್ಮ ಅಸ್ಮಿತೆ ಮತ್ತು ಸ್ವಾಭಿಮಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಮೈಸೂರು ರಾಜ್ಯವು 1973 ನ. 1ರಂದು ಕ ಕರ್ನಾಟಕ ಎಂದು ಮರುನಾಮಕರಣವಾಗಿ ಇಂದಿಗೆ 50
ವರ್ಷ ಪೂರ್ಣಗೊಂಡಿದ್ದು, ನಾಡಿನೆಲ್ಲೆಡೆಸಂಭ್ರಮ ಮನೆ ಮಾಡಿದೆ.
ಅದನ್ನು ಸ್ಮರಣೀಯವಾಗಿಸಲು ಕರ್ನಾಟಕ ಸಂಭ್ರಮ-50 ಅಭಿಯಾನದಡಿ ಒಂದುವರ್ಷ ಕರ್ನಾಟಕ ಇತಿಹಾಸ, ಕಲೆ,ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದರು.
ಅಖಂಡ ಕರ್ನಾಟಕ ರಚನೆಗಾಗಿ ಡೆಪ್ಯೂಟಿ ಚೆನ್ನಬಸಪ್ಪ ಅವರ 1856ರಲ್ಲಿ ಕರ್ನಾಟಕ ಏಕೀಕರಣದ ಕನಸನ್ನು ಕಂಡು, ಚಳವಳಿ ಆರಂಭಿಸಿದರು. ಅದುಹೆಮ್ಮರವಾಗಿ ಬೆಳೆದು 1956 ನ. 1ರಂದುಏಕೀಕೃತ ಮೈಸೂರು ರಾಜ್ಯ ಉದಯವಾಯಿತು. ಮುಂದೆ 1973ರಲ್ಲಿ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸರು ರಾಜ್ಯಕ್ಕೆ ವಿಶಾಲಾರ್ಥದಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಿದರು ಎಂದು ನೆನೆದರು.
ಕನ್ನಡ ನಾಡು ವಿವಿಧ ಧರ್ಮ ಮತ್ತು ಸಂಸ್ಕತಿಗಳ ಸಮಾಗಮವಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು, ಸಿಖ್ ಸೇರಿದಂತೆ ವಿವಿಧ ಧರ್ಮಿಯರು ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಅಂತೆಯೇ ದೇಶದಲ್ಲಿ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿರುವ ಮತ್ತುಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ನಮ್ಮ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದರು.
ಕನ್ನಡಿಗರ ಆಶೀರ್ವಾದದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದನಮ್ಮ ಸರ್ಕಾರವು ನುಡಿದಂತೆ ನಡೆಯುತ್ತಿದೆ. ಜನಪರ ಯೋಜನೆಗಳನ್ನು ಜಾರಿಗೆತಂದಿದ್ದೇವೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ, ನಾಡಿನ ಜನರ ಸುಸ್ಥಿರ ಆರ್ಥಿಕ ಸಬಲೀಕರಣಕ್ಕೆ ನಾಂದಿಹಾಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಹಲವು ಭಾಷೆಗಳನ್ನಾಡುವ ಜನರಿದ್ದು, ಅವರಿಗೂ ನಮ್ಮ ಭಾಷೆಯ ಹಿರಿಮೆ-ಗರಿಮೆ ಬಗ್ಗೆ ತಿಳಿಸಬೇಕಿದೆ? ಎಂದು ಹೇಳಿದರು.
ಮಾತೃ ಭಾಷೆ ಕನ್ನಡವನ್ನು ಉಳಿಸಿ, ಬೆಳೆಸಲು ಪ್ರತಿಜ್ಞೆ ಮಾಡೋಣ. ಕರ್ನಾಟಕ ಸಂಭ್ರಮ? 50 ವರ್ಷದ ಈ ಸಂದರ್ಭದಲ್ಲಿ ಕನ್ನಡ ಭಾಷೆಯ ಹಿರಿಮೆಯನ್ನು ನಾಡಿನಲ್ಲಷ್ಟೇ ಅಲ್ಲದೆ, ಅದರಾಚೆಗೂ ಪಸರಿಸೋಣ ಎಂದು ಮಾತಿಗೆ ಪೂರ್ಣವಿರಾಮ ಹಾಕಿದರು.
ಗಾಯಕರು ಕನ್ನಡ ನಾಡು?ನುಡಿ ಕುರಿತು ಕವಿಗಳು ರಚಿಸಿದ ಐದು ಹಾಡುಗಳನ್ನು ಹಾಡಿದರು.
ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡಪರ ಮತ್ತು ರೈತಪರ ಸಂಘಟನೆಗಳ ಪ್ರಮುಖರು ಇದ್ದರು.