ಹೊಸಕೋಟೆ: ಕರ್ನಾಟಕ ರಾಜ್ಯ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಜ್ಯವಾಗಿದ್ದು ನಮ್ಮ ನಾಡು ನುಡಿ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ದೇವನಗೊಂದಿ ಅನಿಲ ಘಟಕ ಐಒಸಿ ಟರ್ಮಿನಲ್ನಲ್ಲಿ ಬೆಂಗಳೂರು ಪೆಟ್ರೋಲಿಯಂ ಚಾಲಕರು ಮತ್ತು ಸಹಾಯಕರ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಸ್ರಾರು ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಕನ್ನಡ ಭಾಷೆಗೆ ತನಗೆ ಆದ ಮಹತ್ವ ಹಾಗೂ ಸ್ಥಾನಮಾನವನ್ನ ಹೊಂದಿದೆ. ಕನ್ನಡ ನಾಡಿನಲ್ಲಿ ಹುಟ್ಟಿರುವಂತಹ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಚಾಲಕರು ಕೂಡ ಬೇರೆ ಬೇರೆ ರಾಜ್ಯಗಳಿಗೆ ತೆರಳಿದಾಗ ಕೂಡ ವ್ಯವಹಾರದ ದೃಷ್ಟಿಯಿಂದ ಅಲ್ಲಿನ ಭಾಷೆಯನ್ನ ಮಾತನಾಡಬೇಕು ಆದರೆ ಪ್ರಥಮ ಆದ್ಯತೆ ಕನ್ನಡಕ್ಕೆ ನೀಡುವಂತಾಗಬೇಕು ಎಂದರು.
ಚಾಲಕ ವೃತ್ತಿ ಎನ್ನುವುದು ಸಾಕಷ್ಟು ಅಮೂಲ್ಯವಾದ ಕೆಲಸವಾಗಿದ್ದು ಪ್ರತಿ ಟ್ಯಾಂಕರ್ನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚಿನ ಲೀಟರ್ ನಷ್ಟು ಅಮೂಲ್ಯವಾದ ತೈಲವನ್ನು ಸಾಗಣೆ ಮಾಡುತ್ತೀರಿ. ಆದರೆ ಅದನ್ನ ಸಾಗಾಟ ಮಾಡುವ ಚಾಲಕರು ಕೂಡ ಅತ್ಯಮೂಲ್ಯವಾಗಿದ್ದು ವಾಹನ ಚಾಲನೆ ವೇಳೆ ಸಾಕಷ್ಟು ಜಾಗೃತರಾಗಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು ಎಂದು ತಿಳಿಸಿದರು.
ದೇವನಗುಂದಿ ಬಳಿ ಐಓಸಿ, ಬಿಪಿಸಿಎಲ್, ಹೆಚ್ಪಿಸಿಎಲ್, ಕಂಪನಿಗಳು ಇರುವ ಹಿನ್ನೆಲೆಯಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಬಂದು ಹೋಗುತ್ತವೆ. ಆದ್ದರಿಂದ ತುರ್ತು ಸಮಯದಲ್ಲಿ ಚಾಲಕರ ಚಿಕಿತ್ಸೆಗೆ ಅನುಕೂಲ ಆಗುವ ದೃಷ್ಠಿಯಿಂದ ವಾಗಟ ಗ್ರಾಮದ ಬಳಿ ಸುಮಾರು ಒಂದೂವರೆ ಎಕರೆ ಜಾಗವನ್ನು ಮೀಸಲಿರಿಸಿದ್ದು ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಚಾಲಕರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಲಾಗುವುದೆಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.ಅನಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಬೋಧನಹೊಸಹಳ್ಳಿ ಪ್ರಕಾಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರೇಗೌಡ, ಮುಖಂಡರಾದ ವಾಗಟ ನರೇಂದ್ರ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.