ಕ್ರೀಡೆ: ಯುವ ಬ್ಯಾಟರ್ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟಿರುವುದಕ್ಕೆ ಭಾರತದ ದಿಗ್ಗಜರಷ್ಟೇ ಅಲ್ಲದೆ, ಇಂಗ್ಲೆಂಡ್ನ ಮಾಜಿ ನಾಯಕರಾದ ಮೈಕಲ್ ವಾನ್ ಮತ್ತು ಅಲಸ್ಟೇರ್ ಕುಕ್ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದು, ಅಂಡರ್-19 ವಿಶ್ವಕಪ್ನಲ್ಲಿ ಮಿಂಚಿದ್ದ ವೈಭವ್ ಅವರನ್ನು ಐರ್ಲೆಂಡ್ ಹಾಗೂ ಇಂಗ್ಲೆAಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿಸದ್ದಕ್ಕೆ ವಾನ್ ಬೇಸರಗೊಂಡಿದ್ದಾರೆ. ಈ ಬಗ್ಗೆ ನಾನು ಬಿಸಿಸಿಐ ಮತ್ತು ಅಜಿತ್ ಅಗರ್ಕರ್ ಅವರನ್ನು ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ವೈಭವ್ ಸೂರ್ಯವಂಶಿ ಅವರನ್ನು ಐರ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಕಣಕ್ಕೆ ಇಳಿಸದ್ದು ಇದೀಗ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಚರ್ಚೆಯಾಗುತ್ತಿದೆ. ಇಡೀ ಕ್ರಿಕೆಟ್ ವಿಶ್ವವೇ ಈತ ನಮ್ಮ ಹುಡುಗ ಎಂದು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವಷ್ಟರ ಮಟ್ಟಿಗೆ ಕ್ರಿಕೆಟ್ ಜಗತ್ತು ಈ ಹುಡುಗನನ್ನು ಇಷ್ಟಪಟ್ಟಿದೆ. ಅವಕಾಶ ಸಿಕ್ಕಾಗಲೆಲ್ಲಾ ಭಾರತ ತಂಡದ ಕಾಲೆಳೆಯುವ ಮೈಕಲ್ ವಾನ್ ಅವರು ವೈಭವ್ ಸೂರ್ಯವಂಶಿ ಅವರ ವಿಚಾರದಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅವರನ್ನು ತಂಡದಿAದ ಹೊರಗಿಟ್ಟ ನಿರ್ಧಾರವು ರವಿ ಶಾಸ್ತ್ರೀ ಮತ್ತು ಸುನಿಲ್ ಗವಾಸ್ಕರ್ ಅವರಿಗೆ ಮಾತ್ರವಲ್ಲದೆ, ಇಂಗ್ಲೆಂಡ್ನ ಮಾಜಿ ನಾಯಕರಾದ ಮೈಕಲ್ ವಾನ್ ಮತ್ತು ಅಲಸ್ಟೇರ್ ಕುಕ್ ಅವರಿಗೂ ತೀವ್ರ ಅಚ್ಚರಿ ಮೂಡಿಸಿದೆ. ಯುವ ಆಟಗಾರ ವೈಭವ್ ಅವರನ್ನು ಭಾರತ ತಂಡದಲ್ಲಿ ಸೇರಿಸಿಕೊಳ್ಳುವಂತೆ ಬಿಸಿಸಿಐಗೆ ನಿರಂತರವಾಗಿ ಒತ್ತಾಯಿಸುತ್ತಾ ಬಂದಿರುವ ಮೈಕಲ್ ವಾನ್, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಅವರಿಗೆ ಅವಕಾಶ ಸಿಗದೇ ಇರುವುದನ್ನು ಕಂಡು ಬೇಸರಗೊಂಡಿದ್ದಾರೆ. ಈ ಕುರಿತು ಸ್ಪಿಕ್ ಟು ಕ್ರಿಕೆಟ್ ಪಾಡ್ ಕಾಸ್ಟ್ ನಲ್ಲಿ ಮಾತನಾಡಿರುವ ಅವರು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರಿಗೆ ತಾವು ನೇರವಾಗಿಯೇ ಪ್ರಶ್ನೆ ಕೇಳಲು ಸಿದ್ಧ ಎಂದಿದ್ದಾರೆ.”ನಾವು ಬಿಸಿಸಿಐ ಮತ್ತು ಆಯ್ಕೆಗಾರ ಅಜಿತ್ಗೆ ಕೇಳಲೇಬೇಕು; ನಮ್ಮ ಹುಡುಗ (‘ದ ಕಿಡ್’) ಐರ್ಲೆಂಡ್ ವಿರುದ್ಧ ಹೇಗೆ ಆಡಲಿಲ್ಲ?” ಎಂದು ವಾನ್ ಪ್ರಶ್ನಿಸಿದ್ದಾರೆ. ಇದಕ್ಕೆ ಅಲಸ್ಟೇರ್ ಕುಕ್, “ನಾನು ನಾಳೆ ಅಲ್ಲಿಗೆ ಹೋಗುತ್ತಿದ್ದೇನೆ. ಆ 15 ವರ್ಷದ ಹುಡುಗ ಪಂದ್ಯ ಆಡುವುದನ್ನು ಖಚಿತಪಡಿಸಿಕೊಳ್ಳಲು ನಾನು ಒಬ್ಬ ಅಭಿಮಾನಿಯಾಗಿ ಅಲ್ಲಿಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದೇನೆ” ಎಂದು ಹೇಳಿದ್ದಾರೆ. 15 ವರ್ಷದ ಯುವ ಬ್ಯಾಟಿಂಗ್ ಸಂಚಲನ ವೈಭವ್ ಸೂರ್ಯವಂಶಿ ಅವರ ಕ್ರೇಜ್ ಈಗ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ, ವಿದೇಶಿ ದಿಗ್ಗಜರೂ ಕೂಡ ಈ ಯುವ ಪ್ರತಿಭೆಯ ಆಟ ನೋಡಲು ಕಾತರರಾಗಿದ್ದಾರೆ. ಐರ್ಲೆಂಡ್ನಲ್ಲಿ ಅವರನ್ನು ಕಣ್ಣಾರೆ ವೀಕ್ಷಿಸಲು ಟಿಕೆಟ್ಗಳು ಸಂಪೂರ್ಣವಾಗಿ ಮಾರಾಟವಾಗಿದ್ದವು. ಆದರೆ ಆಶ್ಚರ್ಯಕರವಾಗಿ, ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯವಂಶಿಗೆ ಆಡುವ ಅವಕಾಶ ಸಿಗಲಿಲ್ಲ. ಡರ್ಹಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ವೈಭವ್ ಬೆಂಚ್ ಕಾಯಿಸುವುದಕ್ಕಷ್ಟೇ ಸೀಮಿತರಾದರು. ಇನ್ನೂ 4 ಪಂದ್ಯಗಳು ಬಾಕಿ ಉಳಿದಿದ್ದು ವೈಭವ್ಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇದೆ.ಬಿಸಿಸಿಐ ನಿರ್ಧಾರವೇನು?: ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಸಿಗಲು ವೈಭವ್ ಸೂರ್ಯವಂಶಿ ಇವರು ಸೂಕ್ತ ಸಮಯ ಬರುವವರೆಗೆ ಕಾಯಬೇಕು ಎಂಬ ನಿಲುವಿಗೆ ತಂಡದ ಮ್ಯಾನೇಜ್ಮೆಂಟ್ ಬದ್ಧವಾಗಿದೆ. ವೈಭವ್ ಆಡುವ ಹನ್ನೊಂದರ ಬಳಗ ಸೇರಬೇಕಾದರೆ ಸದ್ಯದ ಫಾರ್ಮ್ನಲ್ಲಿರುವ ಅಭಿಷೇಕ್ ಶರ್ಮಾ ಅಥವಾ ಸಂಜು ಸ್ಯಾಮ್ಸನ್ ಅವರಲ್ಲಿ ಒಬ್ಬರು ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ನಾಲ್ಕು ತಿಂಗಳ ಹಿಂದಷ್ಟೇ ಭಾರತ ತಂಡ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರಿಬ್ಬರನ್ನು ಸದ್ಯಕ್ಕೆ ತಂಡದಿಂದ ಕೈಬಿಡುವುದು ಅಸಾಧ್ಯದ ಮಾತು. ಆದಾಗ್ಯೂ ವೈಭವ್ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಆಶ್ಚರ್ಯ ತಂದಿದೆ. ಕಳೆದ ಐದು ತಿಂಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲು ಭಾರತದ ಅಂಡರ್- 19 ತಂಡವನ್ನು ಮುನ್ನಡೆಸಿ ಫೈನಲ್ನಲ್ಲಿ ಭರ್ಜರಿ 175 ರನ್ ಸಿಡಿಸುವ ಮೂಲಕ ವಿಶ್ವಕಪ್ ತಂದುಕೊಟ್ಟಿದ್ದರು. ಆ ಬಳಿಕ ಐಪಿಎಲ್ನಲ್ಲಿ 776 ರನ್ ಗಳಿಸುವ ಮೂಲಕ ಅತ್ಯಂತ ಕಿರಿಯ
ವಯಸ್ಸಿನಲ್ಲಿ ‘ಆರೆಂಜ್ ಕ್ಯಾಪ್’ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದರು. ಇದಲ್ಲದೆ ಐರ್ಲೆಂಡ್ ಪ್ರವಾಸಕ್ಕೂ ಮುನ್ನ ಶ್ರೀಲಂಕಾದಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದ ಅವರು, ಫೈನಲ್ನಲ್ಲಿ ಲಿಸ್ಟ್- ಎ ಕ್ರಿಕೆಟ್ನ ಅತ್ಯಂತ ವೇಗದ ಅರ್ಧಶತಕದೊಂದಿಗೆ 94 ರನ್ ಚಚ್ಚಿ ಭಾರತದ ಭರ್ಜರಿ ಗೆಲುವಿಗೆ ಕಾರಣರಾಗಿದ್ದರು.



