ಕೆ.ಆರ್.ಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಹೂಡಿ ಹಾಗೂ ಸುತ್ತಮುತ್ತಲಿನ ಗ್ರಾಮದ ರಾಮನ ಭಕ್ತರು ಎರಡು ಕೆಜಿಯಷ್ಟುತೂಕವಿರುವ ಬೆಳ್ಳಿ ಇಟ್ಟಿಗೆಯನ್ನು ದೇವಸ್ಥಾನಕ್ಕೆ ಸಮರ್ಪಿಸಲು ರಾಮಭಕ್ತ ಹೂಡಿ ಮಂಜುನಾಥ್ ನೇತೃತ್ವದಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದರು.
ಪ್ರಯಾಣ ಬೆಳೆಸುವ ಮುನ್ನ ಗ್ರಾಮಸ್ಥರೊಂದಿಗೆಹೂಡಿ ಗ್ರಾಮದ ಶ್ರೀವಿನಾಯಕ ದೇವಸ್ಥಾನದಲ್ಲಿ ಇಟ್ಟಿಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಹೂಡಿ ಗ್ರಾಮದ ಹನ್ನೆರಡು ಜನರ ತಂಡ ಕಳೆದ 2019 ರಲ್ಲಿ ಬೆಂಗಳೂರಿನ ಹೂಡಿ ಗ್ರಾಮದಿಂದ ಅಯೋಧ್ಯೆಯವರೆಗೂ ರಾಮ ಮಂದಿರ ನಿರ್ಮಾಣ ಮಾಡುವಂತೆ ತಲೆಯ ಮೇಲೆ ಇಟ್ಟಿಗೆ ಹೊತ್ತು ಪಾದಯಾತ್ರೆ ಬೆಳೆಸಿದ್ದರು
ಪಾದಯಾತ್ರೆ ಸುಮಾರು 66 ದಿನಗಳ ಕಾಲ ನಡೆದು ಅಯೋಧ್ಯೆ ತಲುಪಿತ್ತು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಮೂಲಕ ಹಾದು ಹೋಗಿತ್ತು.ಪಾದಯಾತ್ರೆ ಮುಗಿಸಿ ಬಂದ ಕೆಲವೇ ದಿನಗಳಲ್ಲಿ 18 ನೇ ದಿನಕ್ಕೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ ರಾಮ ಮಂದಿರ ನಿರ್ಮಾಣ ಮಾಡುವಂತೆ ಆದೇಶ ನೀಡಿತ್ತು.
ತಲೆಯ ಮೇಲೆ ಹೊತ್ತು ತಂದ ಇಟ್ಟಿಗೆಯನ್ನು ರಾಮ ಮಂದಿರ ಶಿಲಾ ನ್ಯಾಸದ ದಿನದಂದು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಾಗಿತ್ತು.ರಾಮಭಕ್ತ ಹೂಡಿ ಮಂಜುನಾಥ್ ಮಾತನಾಡಿ, ರಾಮ ಮಂದಿರ ನಿರ್ಮಾಣ ಮಾಡುವಂತೆ 2019 ರಲ್ಲಿ ಹೂಡಿ ಗ್ರಾಮದಿಂದ ಅಯೋಧ್ಯೆಯವರೆಗೂ ಪಾದಯಾತ್ರೆ ಮಾಡಲಾಗಿತ್ತು. ನಮ್ಮ ಬಹುದಿನಗಳ ಕನಸು ನನಸಾಗಿರುವುದರಿಂದ ಹೂಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲ ಸೇರಿ ಬೆಳ್ಳಿ ಇಟ್ಟಿಗೆಯನ್ನು ಸಮರ್ಪಿಸಲು ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದೇವೆ ಎಂದರು.ಈ ಸಂದರ್ಭದಲ್ಲಿ ಕೇಬಲ್ ಮಂಜುನಾಥ್, ಮಂಜಯ್ಯ, ಕೇಡಿ ವೆಂಕಟೇಶ್, ಮುನಿಕೃಷ್ಣ, ವೇಣು, ಆಂಜಿ, ರಕ್ಷಿತ್ ಇದ್ದರು.