ಬೆಂಗಳೂರು ನಗರ: ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಸ್ತ್ರೀ ರೋಗ ತಜ್ಞರೆಂದು ಹೇಳಿಕೊಂಡು ಅನರ್ಹ ವೈದ್ಯರು ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿದ್ದು, ಇದರಿಂದ ಹೆರಿಗೆ ಸಂದರ್ಭದಲ್ಲಿ ಅಪಾಯ ತರುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಆರೋಗ್ಯ ಇಲಾಖೆಯು ವಿಶೇಷ ತಂಡವನ್ನು ರಚಿಸಿ ಜಿಲ್ಲಾದ್ಯಾಂತ ಇರುವ ಖಾಸಗಿ ಸ್ತ್ರೀ ರೋಗ ತಜ್ಞರ ವೈದ್ಯಕೀಯ ಕೇಂದ್ರಗಳಲ್ಲಿ ತಪಾಸಣೆ ನಡೆಸಿ ಅನರ್ಹ ವೈದ್ಯರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಯತೀಶ್ ಆರ್ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೆಂಗಳೂರು ನಗರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ್ಥ÷್ಯ ಕಾರ್ಯಕ್ರಮ, ಆಶಾ ಮೇಲ್ವಿಚಾರಣಾ/ ಕುಂದುಕೊರತೆ ನಿವಾರಣಾ ಮತ್ತು ಎನ್.ಪಿ.ಪಿ.ಸಿ.ಎಫ್ ಕಾರ್ಯಕ್ರಮದ ಜಿಲ್ಲಾ ಮಟ್ಟದ 1ನೇ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇತ್ತೀಚಿಗೆ ಮಂಡ್ಯ ಜಿಲ್ಲೆಯ ಆರೋಗ್ಯ ಸಭೆಯಲ್ಲಿ ಬಾಣಂತಿಯರ ಆಹಾರ ಪದ್ಧತಿಗಳ ವಿಸ್ತೃತ ವರದಿಯನ್ನು ಅಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದರು. ಈ ವರದಿ ಅನ್ವಯ ಪೋಷ್ಠಿಕಾಂಶ ರಹಿತ ಆಹಾರ ಪದ್ಧತಿ ವ್ಯಾಪಕವಾಗಿ ಅಭ್ಯಾಸದಲ್ಲಿದ್ದು ಅದರಿಂದಾಗಿ ಶಿಶುಗಳ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿರುವುದು ಮಾತ್ರವಲ್ಲದೆ ಕುಪೋಷಣೆಗೆ ಕಾರಣವಾಗಿರಬಹುದು ಎಂದು ಉಲ್ಲೇಖಿಸಲಾಗಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಜಿಲ್ಲೆಯಲ್ಲಿ ಈ ರೀತಿಯ ಯಾವುದೇ ಪ್ರಕರಣಗಳು ಆಗದಂತೆ ನೋಡಿಕೊಳ್ಳಲು ಮನೆ ಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತರು ಗರ್ಭಿಣಿ ಹಾಗೂ ಬಾಣಂತಿಯರ ಆಹಾರ ಪದ್ಧತಿಯನ್ನು ದಾಖಲಿಸಿಕೊಳ್ಳುವಂತೆ ಸೂಚಿಸಿದರು. ಮುಂದಿನ ಮೂರು ತಿಂಗಳವರೆಗೂ ದಾಖಲೀಕರಣವನ್ನು ಮಾಡಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಅವರು ಸೂಚಿಸಿದರು. ಅದರ ಅನ್ವಯ ಜಾಗೃತಿ ಅಭಿಯಾನ ಕೈಗೊಂಡು ಪೋಷಣೆ ವೃದ್ಧಿಸುವ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.ಜಿಲ್ಲೆಯಲ್ಲಿ ಫ್ಲೋರೋಸಿಸ್ ನಿಯಂತ್ರಣಾ ಕ್ರಮವಾಗಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕುಡಿಯುವ ನೀರಿಗಾಗಿ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಯೋಜನೆ ರೂಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದ್ದು ಡೆಂಗಿ, ಮಲೇರಿಯಾ, ಚಿಕನ್ ಗುನ್ಯಾ ಗಳಂತಹ ಸೊಳ್ಳೆಯಿಂದ ಹರಡುವ ಕಾಯಿಲೆಗಳ ಬಗ್ಗೆ ಹಾಗೂ ಅವುಗಳನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಥಮಾದ್ಯತೆ ನೀಡುವಂತೆ ಅವರು ಸೂಚಿಸಿದರು.ಇದಕ್ಕೆ ಪ್ರತಿಕ್ರಿಯಿಸಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರವೀಂದ್ರನಾಥ್ ಮೇಟಿ ರವರು ಮೂಲದಲ್ಲೇ ಕಾಯಿಲೆ ಹರಡುವುದನ್ನು ತಡೆಯಲು
ಪ್ರತಿ ವಾರಕ್ಕೊಮ್ಮೆ ಲಾರ್ವಾ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಈ ಕಾರ್ಯದಲ್ಲಿ ಜಿಲ್ಲಾ ಪಂಚಾಯತ್ ಅಧೀನದ ತಾಲ್ಲೂಕು ಪಂಚಾಯತ್ ಗಳ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತೊಡಗಿಕೊಂಡು ಮುಂಜಾಗ್ರತಾ ಕ್ರಮಕ್ಕಾಗಿ ಶ್ರಮಿಸುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.ಜೂ 28 ರಿಂದ ಜು. 1 ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಜೂನ್ 28ನೇ ಜುಲೈ 1 ರವರಿಗೆ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಅಭಿಯಾನದ ಕುರಿತು ವಿಶೇಷವಾಗಿ ಶಾಲಾ ಶಿಕ್ಷಕರು ಹಾಗೂ ಮುಖ್ಯಸ್ಥರು ಪೋಷಕರೊಂದಿಗೆ ಸಭೆ ಸೇರಿ ಜಾಗೃತಿ ಮೂಡಿಸುವಂತೆ ಸೂಚಿಸಿದರು.ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಅಧಿಕಾರಿಗಳು ಆರೋಗ್ಯ ಇಲಾಖೆಯಿಂದ ಲಸಿಕಾ ಅಭಿಯಾನದ ವೇಳಾಪಟ್ಟಿಯನ್ನು ಪಡೆದು ಜಾಗೃತಿ ಮೂಡಿಸುವಂತೆ ಹಾಗೂ ತನ್ಮೂಲಕ ಕಳೆದ ಸಾಲಿಗಿಂತ ಇನ್ನೂ ಹೆಚ್ಚು ಮಕ್ಕಳನ್ನು ತಲುಪಲು ಶ್ರಮಿಸುವಂತೆ ಸೂಚಿಸಿದರು.ಇದೆ ಸಂದರ್ಭದಲ್ಲಿ ಆರ್ ಸಿ ಎಚ್ ಅಧಿಕಾರಿಯಾದ ಡಾ.ನದೀಂ ಅಹಮದ್ ರವರು ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಕಲಿ ಸ್ತ್ರೀ ರೋಗ ತಜ್ಞರ ವಿರುದ್ಧ ಕ್ರಮವಹಿಸಿ: ಜಿಪಂ ಸಿಇಒ ಯತೀಶ್



