'ತಿಕ್ಲು ರಾಮ' ಸಿನಿಮಾದ ಚಿತ್ರೀಕರಣವು ಹಾಸನ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಶ್ರಾವ್ಯ ಕಂಬೈನ್ಸ್ ಮತ್ತು ಕರಿಷ್ಮಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶೃತಿ.ಜಿ.ಬಿ ಮತ್ತು ಕೋಮಲ ನಟರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಮಂಜುಕವಿ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗುವ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಇನ್ನು ಹನುಮನ ಪಾತ್ರದಲ್ಲಿ ಜಹಾಂಗೀರ್ ಆಗಮನ ಸಿನಿಮಾಕ್ಕೆ ಕಳೆ ಬಂದಿದೆ ಅಂತ ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ.
ತಾರಾಗಣದಲ್ಲಿ ಡಾ.ರಾಜ್ವೀರ್, ಚೈತ್ರ ರಾಮ್, ಸುಚೇಂದ್ರ ಪ್ರಸಾದ್ ಇವರೊಂದಿಗೆ ವಿನೋದ್ ಪವಿತ್ರ, ಮಧು ಭೈರಪ್ಪ, ಶ್ರಾವ್ಯ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಅಭಿನಯಿಸುತ್ತಿದ್ದಾರೆ. ಹಿನ್ನಲೆ ಸಂಗೀತ ವಿನು ಮನಸು, ಛಾಯಾಗ್ರಹಣ ರಾಜ್ ಕಡೂರು, ಸಂಕಲನ ವೆಂಕಿ.ಯುಡಿವಿ, ಸಾಹಸ ಅಲ್ಟಿಮೇಟ್ ಶಿವು, ನೃತ್ಯ ಜಗ್ಗು ಅವರದಾಗಿದೆ.
ಚಿತ್ರವು ಮೊದಲರ್ಧ ಹಳ್ಳಿ ಸೊಗಡು ಇರಲಿದ್ದು, ದ್ವಿತೀಯಾರ್ಧ ನೋಡುಗರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಪರಿಸರ, ಸಾಮಾಜಿಕ ಕಳಕಳಿ, ಸಂಸಾರ ನಡೆಸುವ ಹೆಣ್ಣು ಮಕ್ಕಳಿಗೆ ಒಂದಾಗಿ ಬಾಳುವಂತ ಸನ್ನಿವೇಶಗಳು ಇರಲಿದೆ. ಸತ್ಯ ಘಟನೆಯಲ್ಲಿ ಆತ ಶ್ರೀರಾಮ. ಮುಂದೆ ತಿಕ್ಲು ರಾಮ ಆಗುವುದಕ್ಕೆ ಕಾರಣ ಏನು? ಸೈಲೆಂಟ್ ಆಗಿದ್ದರೆ ರಾಮ, ಕೊಡಲಿ ಹಿಡಿದರೆ ತಿಕ್ಲು ರಾಮ. ಹಾಗಂತ ರಕ್ತಪಾತವನ್ನು ವೈಭವಿಕರಿಸುವುದಿಲ್ಲ.